ಮೈಸೂರು : ನಂಜನಗೂಡು ಉಪಚುನಾವಣೆಯಲ್ಲಿ ಆರ್ಭಟಿಸಿದ್ದ ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಕಣ್ಮರೆಯಾಗಿದ್ದಾರೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ವಿವಿಧ ಜನಾಂಗದ ಸಮುದಾಯ ಭವನದ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಮತ್ತು ಮಾಜಿ ಮಂತ್ರಿ ನಂಜನಗೂಡು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಇವರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಸಂಸದ ವಿ. ಶ್ರೀನಿವಾಸ್ ಪ್ರಸಾದ್ ರನ್ನು ನಿದ್ರೆಗೆಡಿಸಿದ ನಂಜನಗೂಡಿನ ಉಪಚುನಾವಣೆಯ ಸೋಲನ್ನು ನಂಜನಗೂಡಿಗೆ ಭೇಟಿ ನೀಡಿದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದಾರೆ.
ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ರಾಜಕೀಯದಲ್ಲಿ ನನಗೆ ಸರಿಸಮಾನನಲ್ಲದ ಕೇಶವಮೂರ್ತಿ ಗೆಲುವಿಗೆ ಕಾಂಗ್ರೆಸ್ ನಾಯಕರು ಟೊಂಕ ಕಟ್ಟಿ ನಿಂತರು ಎಂದು ಆರೋಪಿಸಿದ ಅವರು, ನಂಜನಗೂಡು ಉಪಚುನಾವಣೆಯಲ್ಲಿ ನನ್ನ ವಿರುದ್ಧ ಗೆಲುವು ಸಾಧಿಸಿದ ಕೇಶವಮೂರ್ತಿ ಇಂದು ಹಸು, ಎಮ್ಮೆಯನ್ನು ಮೇಯಿಸುತ್ತಿರಬೇಕು ಎಂದು ಗೇಲಿ ಮಾಡಿದರು.
ನಂಜನಗೂಡಿನಲ್ಲಿ ಸಂಸದನಾಗಿ ನಾನು ಮತ್ತು ಶಾಸಕ ಹರ್ಷವರ್ಧನ್ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ನಂಜನಗೂಡು ಪಟ್ಟಣದಲ್ಲಿ ಎಲ್ಲಾ ವರ್ಗದ ಜನರಿಗೆ ಸರಿಸಮಾನವಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದೇವೆ. ಆ ಸಮುದಾಯ ಭವನದ ನಿವೇಶನಗಳಿಗೆ ಇಂದು ತಹಸೀಲ್ದಾರ್ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಇನ್ನೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತಿದ್ದೇನೆ ಎಂದು ಹೇಳಿದರು.