ಬೆಂಗಳೂರು: ಮಿಸ್ಟರ್ ಡಿಕೆಶಿ, ನಿಮ್ಮಾಟ ನಡೆಯಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ ಇದನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿಯನ್ನು ಹೆದರಿಸಿದರೆ ಹೆದರಲ್ಲ ಎಂದು ನಿಮಗೆ ಗೊತ್ತಿದೆ. ನಿಮಗೂ ಶಕ್ತಿ ಕೊಟ್ಟಿದ್ದೇವೆ, ನಿಮ್ಜೊತೆ ಕೈಜೋಡಿಸಿದ್ದೆವು. ನಾನು ಸೋತರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದಾರೆ ನಿಮ್ಮ ಪುತ್ರರು. ಹಾಗಾದರೆ ಕಾರ್ಯಕರ್ತರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕಾಗಿ ಬಿಜೆಪಿ ಜೊತೆ ಹೋಗಲ್ಲ ಎಂದಿದ್ದಿರಿ. ಆದರೆ ಇವಾಗ ಜನರಿಗೆ ಏನು ಸಂದೇಶ ಕೊಡುತ್ತೀರಿ? ನಿಮ್ಮನ್ನು ಬೆಳೆಸಿದ ಹಾಗೂ ಸಾಕಿದ ಜನ ಪಕ್ಷ ಬಿಡುತ್ತಿದ್ದಾರೆ. ಹೆದರಿಸಿ ಬೆದರಿಸಿದರೂ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ದಂಡ ನಾಯಕ ಎಷ್ಟು ಬಾರಿ ನಿವೃತ್ತಿ ಘೋಷಣೆ ಮಾಡುತ್ತೀರಿ, ಹಾಗಾದರೆ ಕಾರ್ಯಕರ್ತರು ಏನು ಮಾಡಬೇಕು? ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷದ ಎಂಎಲ್ ಸಿ ಆಗಿದ್ದ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ಗೆ ಸೇರ್ಪಡೆ ಮಾಡಿದ್ದೀರಿ, ಅದು ರಾಜಕಾರಣ ಅಲ್ವಾ? ಆಗ ನಾನು ಕೂಡಾ ಮಿಸ್ಟರ್ ಎಂದು ಕರೆಯಬೇಕಿತ್ತಲ್ವಾ? ಎಂದು ತಿರುಗೇಟು ನೀಡಿದರು.