ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಆರ್ಭಟ ಇಳಿಕೆಯಾಗಿದ್ದು, ಈ ಬೆಳವಣಿಗೆ ಜನತೆಗೆ ಕೊಂಚ ನಿರಾಳವನ್ನು ನೀಡಿದೆ. ನಗರದಲ್ಲಿ ಆಗಸ್ಟ್ ತಿಂಗಳಿನಲ್ಲಿ 2,374 ಮತ್ತು ಸೆಪ್ಟೆಂಬರ್ ನಲ್ಲಿ 2,182ರಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ಸಂಖ್ಯೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳನಲ್ಲಿ ಇಳಿಕೆಯಾಗಿದೆ.
ಸೆಪ್ಟೆಂಬರ್ 28 ಮತ್ತು ಆಕ್ಟೋಬರ್ 7 ನಡುವೆ 515 ಪ್ರಕರಣಗಳು ವರದಿಯಾಗಿದ್ದು, ಸೋಂಕು ಇಳಿಕೆಯಾಗಿರುವುದರಿಂದ ಜನತೆ ನಿಟ್ಟಿಸಿರುವ ಬಿಟ್ಟಿದ್ದಾರೆ. ಡೆಂಗ್ಯೂ ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕುವ ಸಲುವಾಗಿ ಪ್ರತಿ ಬಿಬಿಎಂಪಿ ವಾರ್ಡ್ನಲ್ಲಿ ಮಾಹಿತಿ, ಶಿಕ್ಷಣ, ಅಭಿಯಾನ, ಸಮೀಕ್ಷೆ, ಗಳನ್ನು ನಡೆಸಲಾಗಿತ್ತು. ಇದೆಲ್ಲರ ಪರಿಣಾಮ ಸೋಂಕು ಇಳಿಕೆಯಾಗಿದೆ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಚ್ಒ) ಡಾ.ಎ.ಎಸ್.ಬಾಲಸುಂದರ್ ಅವರು ಹೇಳಿದ್ದಾರೆ.

ಚಳಿಗಾಲ ಪೂರ್ಣಗೊಳ್ಳಲು ಕೆಲವೇ ವಾರಗಳಷ್ಟೇ ಬಾಕಿ ಇದೆ. ಹೀಗಾಗಿ ಸೋಂಕು ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಡೆಂಗ್ಯೂವಿನಿಂದ ದೂರ ಉಳಿಯಲು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆಗಳ ನಿವಾರಕಕ್ಕೆ ಸಿಂಪಡೆಗಳನ್ನು ಸಿಂಪಡಿಸುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಸವನ್ನು ತೆರವುಗೊಳಿಸುವುದು, ಹೂವಿನ ಕುಂಡಗಳಿಂದ ನೀರು ನಿಲ್ಲದಂತ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ನಿಂತ ನೀರು ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಮಾತನಾಡಿ, ವಾರದ ಅಂಕಿಅಂಶಗಳ ಪ್ರಕಾರ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಸೋಂಕು ಪ್ರಕರಣಗು ಕಡಿಮೆ ವರದಿಯಾಗುತ್ತಿದ್ದರೂ, ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿನ ಸೋಂಕು ಹೆಚ್ಚಾಗಿದೆ. ಪ್ರತೀ ವಾರ್ಡ್ ನಲ್ಲಿ ತಲಾ 10ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದ್ದಾರೆ.