ಸಾಯಿಪಲ್ಲವಿ ಪ್ರತಿಭಾವಂತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ದೀಪಿಕಾ ಚಿಖಾಲಿಯಾ ಹೇಳಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಈಗಾಗಲೇ ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪಾತ್ರಗಳ ಆಯ್ಕೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ರಾಮನಂದ್ ಸಾಗರ್ ಅವರ ಐತಿಹಾಸಿಕ ‘ರಾಮಾಯಣ’ ಧಾರಾವಾಹಿಯಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಾಲಿಯಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ವಿದೇಶಿ ಮಾಧ್ಯಮದ ಜೊತೆ ಮಾತನಾಡಿರುವ ದೀಪಿಕಾ ಚಿಖಾಲಿಯಾ, ಸಾಯಿ ಪಲ್ಲವಿ ಪ್ರತಿಭಾವಂತ ನಟಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರ ಹಲವು ಸಿನಿಮಾಗಳನ್ನು ನೋಡಿದ್ದು, ಪ್ರತಿಯೊಂದು ಪಾತ್ರದಲ್ಲೂ ಅವರು ವಿಭಿನ್ನ ಅಭಿನಯ ನೀಡಿರುವುದನ್ನು ಗಮನಿಸಿದ್ದೇನೆ ಎಂದಿಸಿದ್ದಾರೆ.
ಆದರೆ ಸೀತೆ ಪಾತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸಿನಿಮಾದ ಮೊದಲ ಝಲಕ್ ಅಥವಾ ಟ್ರೇಲರ್ ನೋಡಿದ ನಂತರ ಸ್ಪಷ್ಟ ಚಿತ್ರಣ ಸಿಗುತ್ತದೆ. ಆದ್ದರಿಂದ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ.

ನಿತೇಶ್ ತಿವಾರಿ ಅವರ ‘ರಾಮಾಯಣ’ ಚಿತ್ರದಲ್ಲಿ ಆಯ್ಕೆಯಾಗಿರುವ ಕಲಾವಿದರೆಲ್ಲರೂ ಪ್ರತಿಭಾವಂತರು ಎಂದು ದೀಪಿಕಾ ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡು ಸಮರ್ಪಕವಾಗಿ ಕೆಲಸ ಮಾಡಿದಾಗ ಸಿನಿಮಾ ಖಂಡಿತವಾಗಿ ಯಶಸ್ಸು ಕಾಣಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನು, ರಾಮನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಗಾಗಿ ಸೀತೆಯ ಪಾತ್ರಕ್ಕೆ ನಟಿಯನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಚಾರಗಳನ್ನು ಗಮನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ತುಳಸಿದಾಸರ ರಾಮಾಯಣದಲ್ಲಿ ಸೀತೆಯ ದೈಹಿಕ ವರ್ಣನೆಯ ಪ್ರಕಾರ ಬಾದಾಮಿ ಆಕಾರದ ಕಣ್ಣುಗಳು, ನಿರ್ದಿಷ್ಟ ಎತ್ತರ ಹಾಗೂ ಉದ್ದನೆಯ ಕೇಶರಾಶಿಯಂತಹ ಲಕ್ಷಣಗಳನ್ನು ಹೊಂದಿರುವ ನಟಿಯನ್ನು ಹುಡುಕಲಾಗುತ್ತಿತ್ತು. ಆ ಎಲ್ಲ ಗುಣಲಕ್ಷಣಗಳು ತಮ್ಮಲ್ಲಿದ್ದ ಕಾರಣವೇ ತಮಗೆ ಸೀತೆಯ ಪಾತ್ರ ದೊರೆಯಿತು ಎಂದು ದೀಪಿಕಾ ನೆನಪಿಸಿಕೊಂಡಿದ್ದಾರೆ.

ಇಂದಿನ ಚಿತ್ರರಂಗದಲ್ಲಿ ಪಾತ್ರಗಳ ಆಯ್ಕೆ ಹಿಂದಿನ ಕಾಲಕ್ಕಿಂತ ಸಾಕಷ್ಟು ಬದಲಾಗಿದೆ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ. ಈಗ ದೈಹಿಕ ರೂಪಕ್ಕಿಂತ ನಟನೆಯ ಸಾಮರ್ಥ್ಯ, ಪಾತ್ರವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಹಾಗೂ ನಿರ್ದೇಶಕರ ದೃಷ್ಟಿಕೋನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.





