ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರರು, ತತ್ವಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ಎಲ್. ಬೈರಪ್ಪ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

“ಕನ್ನಡ ಹಾಗೂ ದೇಶದ ಸಾಹಿತ್ಯ ಲೋಕದ ಕೊಂಡಿಯಾಗಿದ್ದ ಅವರು ತಮ್ಮ ಕಾದಂಬರಿಗಳಿಂದ ಬೃಹತ್ ಓದುಗ ವರ್ಗವನ್ನೇ ಸೃಷ್ಠಿಸಿಕೊಂಡಿದ್ದರು. ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತೀಯ ಇತರೆ ಭಾಷೆಗಳಿಗೆ ಇವರ ಕಾದಂಬರಿಗಳು ಅನುವಾದಗೊಂಡು ಸಾಕಷ್ಟು ಪ್ರಸಿದ್ಧಿ ಪಡೆದಿದ್ದವು. ನಾಲ್ಕು ದಶಕಗಳಲ್ಲಿ ಅನೇಕ ಕಾದಂಬರಿಗಳನ್ನು ರಚಿಸಿದ್ದರು. ಇವರ ಬರಹ ನಡೆ, ನುಡಿ ಸಾಹಿತ್ಯ ಲೋಕದಲ್ಲಿ ಸದಾ ಚರ್ಚೆಗೆ ಒಳಗಾಗುತ್ತಿತ್ತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಪದ್ಮಭೂಷಣ, ಪದ್ಮಶ್ರೀ, ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ತಲೆಮಾರಿನ ಅದ್ಭುತ ಪ್ರತಿಭೆ ಕಣ್ಮರೆಯಾದಂತಾಗಿದೆ. 1999 ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಅವರು ಆಯ್ಕೆಯಾಗಿದ್ದರು.

ಭೈರಪ್ಪನವರ ಕುಟುಂಬ ವರ್ಗ, ಬಂಧುಗಳು, ಅಪಾರ ಅಭಿಮಾನಿಗಳಿಗೆ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದು ಶೋಕ ಸಂದೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.