ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ನ.2ರಂದು ತೆಗೆದು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿಕೊಡಲಾಗುವುದು. ದರ್ಶನಕ್ಕೆ ಯಾವ ಅಡಚಣೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಕ್ತರಿಗೆ ಯಾವ ತೊಂದರೆ ಆಗದಂತೆ ಈ ವೇಳೆ ಯಾರೇ ಗಣ್ಯರು ಬಂದರೂ ಅವರು ದೇವಿ ದರ್ಶನವನ್ನು ೨ ನಿಮಿಷದೊಳಗೆ ಮುಗಿಸಬೇಕು. ಹೆಚ್ಚು ಎಂದರೇ ೫ ನಿಮಿಷ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಹಾಸನಾಂಬ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಹಾಸನಾಂಬೆಯ ಸುಗಮ ದರ್ಶನಕ್ಕೆ ಜಿಲ್ಲಾಡಳಿತದಿಂದ ಪ್ಲಾನ್ ಮಾಡಲಾಗಿದ್ದು, ಅದರಂತೆ ನಡೆದರೇ ನಾವು ಹೆಮ್ಮೆ ಪಡುತ್ತೇವೆ. ಏನಾದರೂ ವ್ಯತ್ಯಾಸವಾದರೇ ಯಾರೋ ಮಂತ್ರಿಗಳು, ಹೈಕೋರ್ಟ್ ನ್ಯಾಯಾಧೀಶರು ಬಂದಾಗ ದೇವಾಲಯದ ಗರ್ಭಗುಡಿಗೆ ಬಂದು ನಮಸ್ಕಾರ ಮಾಡಿ ಕೈಮುಗಿದು ಮಂಗಳಾರತಿ ಪಡೆದು ದೇವರ ಬಳಿ ಎರಡು ನಿಮಿಷ ಪ್ರಾರ್ಥನೆ ಮಾಡಿ ಕಣ್ಣತುಂಬ ನೋಡಿ ಹೊರಗಡೆ ಬರುತ್ತಾರೆ.
![](https://pratidhvani.com/wp-content/uploads/2023/10/hasanamba-temple-darshan-starts1-1691125703.jpg)
ಇನ್ನು ಹೆಚ್ಚುಹೊತ್ತು ಇರುವುದಾಗಿ ಹೇಳಿದರೇ ೫ ನಿಮಿಷ ಬೇಕಾದರೇ ಸಮಯ ತೆಗೆದುಕೊಳ್ಳಲಿ. ಮೊದಲು ಅಲ್ಲೆ ಶಾಲು ಹಾಕಿ ಗೌರವ ಸಮರ್ಪಣೆ ಮಾಡಲಾಗುತ್ತಿತ್ತು. ಈ ಬಾರಿ ಹಣ್ಣಿನ ಬುಟ್ಟಿ ಯಾವುದೂ ಇಲ್ಲ. ಒಂದು ಶಾಲು, ದೇವರ ಬಳಿ ಇರುವ ಒಂದು ಹಾರವನ್ನು ದೇವಾಲಯದ ಹೊರಗೆ ಹಾಕಲಾಗುವುದು ಎಂದರು. ನವಂಬರ್ ೨ರಂದು ಮಧ್ಯಾಹ್ನ ೧೨ ಗಂಟೆಗೆ ಹಲವು ಗಣ್ಯರ ಸಮ್ಮುಖದಲ್ಲಿ ಬಾಗಿಲನ್ನು ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ತೆರೆಯಲಾಗುವುದು. ಈಗಾಗಲೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಏಕೆಂದರೆ ಶಕ್ತಿ ಯೋಜನೆಯಿಂದ ಉಚಿತ ಬಸ್ ಪ್ರಯಾಣ ಇರುವುದರಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದರಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಜರ್ಮನ್ ಟೆಂಟ್, ಬ್ಯಾರಿಕೇಡ್, ನೆಲಕ್ಕೆ ಮ್ಯಾಟ್, ಸರತಿ ಸಾಲಿನಲ್ಲಿ ಭಕ್ತರಿಗೆ ತೊಂದರೆ ಆಗದಂತೆ ಫ್ಯಾನ್ ಅಳವಡಿಕೆ ಹಾಗೂ ಕುಡಿಯಲು ನೀರು ಮತ್ತು ಮಜ್ಜಿಗೆ ಇಡಲಾಗುತ್ತದೆ ಎಂದು ಮಾಹಿತಿ ನೀಡಿದರು.