ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯವನ್ನೂ ನೀಡಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಕತ್ತಲೆ ಭಾಗ್ಯ ದೊರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ. ಕರ್ನಾಟಕಕ್ಕೆ ಕತ್ತಲೆ ಭಾಗ್ಯ ದೊರೆತಿದೆ. ಸಿದ್ದರಾಮಯ್ಯರನ್ನ ಮನೆಗೆ ಕಳಿಸಬೇಕು ಅಂತ ಡಿ.ಕೆ. ಶಿವಕುಮಾರ್ ಕಾಯುತ್ತಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚು ಮಾಡ್ತಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ರೇಟ್ ಫಿಕ್ಸ್ ಮಾಡುವ ಕೆಲಸ ಆಗ್ತಿದೆ. ಸಿಎಂ ಕಚೇರಿಯಲ್ಲಿ ರೇಟ್ ಪಿಕ್ಸ್ ಆಗಿದೆ ಯಾವ ಅಧಿಕಾರಿಗೆ ಎಷ್ಟು ಅಂತ. ಬಿಬಿಎಂಪಿಯಲ್ಲಿರೋ ಗುತ್ತಿಗೆದಾರರಿಂದಲೂ ಕಮೀಷನ್ ಪಡೀತಿದ್ದಾರೆ. ಆ ಹಣವೇ 100 ಕೋಟಿ ರೂ. ಆಗಿದೆ. ಇದು ಕಮೀಷನ್ ಹಣ ಅಂತ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಕಲಾವಿದರ ಬಳಿಯೂ ಕಮೀಷನ್ ಕೇಳಿರೋ ಸರ್ಕಾರ ಇದು. ಪಂಚ ರಾಜ್ಯಗಳಿಗೆ ಹಣದ ಹೊಳೆ ಹರಿಸಲು ಇಲ್ಲಿ ಕಲೆಕ್ಷನ್ ಮಾಡ್ತಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಆಗ್ರಹಿಸುತ್ತದೆ ಎಂದರು.