ಸಿನಿಮಾ ಅಂದಮೇಲೆ ಬ್ಯುಸಿ ಲೈಫ್ ಲೀಡ್ ಮಾಡಲೇ ಬೇಕು. ಹಾಗಿರುವಾಗ ಶೂಟಿಂಗ್ ಡೇಟ್ ಬಗೆಗಿನ ಸ್ವಲ್ಪ ರಿಸ್ಕ್ ಅನ್ನೋದು ನಟ ನಟಿಯರಿಗೆ ಇದ್ದೇ ಇರುವುದು ಸಹಜ. ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ತಮಿಳು ಚಿತ್ರರಂಗದ ಕೆಲ ಹೀರೋ ಹಾಗೂ ಕಾಮಿಡಿಯನ್ಗಳಿಗೆ (Tamil Actors) ನಿರ್ಮಾಪಕರ ಮಂಡಳಿ ದೂರು ನೀಡಿರುವ ಕಾರಣ ಚಿತ್ರರಂಗದ ಪ್ರಮುಖ ಐವರಿಗೆ ರೆಡ್ ಕಾರ್ಡ್ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಹೌದು, ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಅವರ ಅಸಹಕಾರದ ಆಧಾರದ ಮೇಲೆ ರೆಡ್ ಕಾರ್ಡ್ ನೀಡಲಾಗಿದೆ.

ತಮಿಳು ಚಿತ್ರರಂಗದ ವಿಶಾಲ್, ಸಿಂಬು, ಅಥರ್ವ, ಎಸ್.ಜೆ.ಸೂರ್ಯ ಮತ್ತು ಯೋಗಿ ಬಾಬು (Yogi Babu) ಬೇರೆ ಬೇರೆ ಚಿತ್ರಗಳಿಗೆ ಅಡ್ವಾನ್ಸ್ ಪಡೆದು ಡೇಟ್ಸ್ ಸರಿಯಾಗಿ ನೀಡುತ್ತಿಲ್ಲ ಎಂದು ನಿರ್ಮಾಪಕರ ಪರಿಷತ್ತಿಗೆ ಕೆಲ ಪ್ರೊಡ್ಯೂಸರ್ಗಳು ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ಪರಿಷತ್ತು ಕಾರ್ಯಪ್ರವೃತ್ತವಾಗಿದೆ. ಈ ಬೆಳವಣಿಗೆ ಇವರ ವೃತ್ತಿ ಜೀವನಕ್ಕೆ ಸಾಕಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.
ಈ ಐವರು ಕಲಾವಿದರು ತಮ್ಮ ವಿರುದ್ಧದ ದೂರಿನ ಬಗ್ಗೆ ಸೂಕ್ತ ವಿವರಣೆ ನೀಡಿದರೆ, ಸಿನಿಮಾಗಳಿಗೆ ಸಹಕಾರ ನೀಡುವುದಾಗಿ ಹೇಳಿದರೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒಂದೊಮ್ಮೆ ಅಲ್ಲಿಯೂ ಅಸಹಕಾರ ಮುಂದುವರಿದರೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಇವರು ಸಿನಿಮಾ ಒಪ್ಪಿಕೊಂಡು ನಿರ್ಮಾಪಕರಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಶೂಟಿಂಗ್ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ. ಈಗ ನಟರು ಇದಕ್ಕೆ ಉತ್ತರಿಸಬೇಕಿದೆ. ಪರಿಷತ್ತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.