ದಿನಾಂಕ 1 ಅಕ್ಟೋಬರ್ 2023ರಂದು ನಂಜನಗೂಡಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕೆಎಸ್ಡಿಎಸ್ಎಸ್) ಅಧ್ಯಯನ ಶಿಬಿರದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ:-
ಸಾಂಸ್ಕೃತಿಕ ರಾಜಕಾರಣ (Cultural Politics) : ನಾ ದಿವಾಕರ ಅವರ ಬರಹ
ಕಳೆದ ಮೂರು ದಶಕಗಳಲ್ಲಿ ಭಾರತದ ರಾಜಕೀಯ ಸಂಕಥನಗಳು “ಸಂಸ್ಕೃತಿ ಕೇಂದ್ರಿತವಾಗಿವೆ”. ಸಂಸ್ಕೃತಿ ಎಂಬ ವಿಶಾಲಾರ್ಥದ ಪದವನ್ನು ನಿರ್ದಿಷ್ಟ ಧರ್ಮ-ಪಂಥ-ಮತದ ಚೌಕಟ್ಟುಗಳಿಗೆ ಒಳಪಡಿಸುವ ಮೂಲಕ ಹಿಂದುತ್ವ ರಾಜಕಾರಣ ಭಾರತದ ನೆಲಮೂಲ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯೊಂದಿಗೆ ಸಮೀಕರಿಸಲು ಯತ್ನಿಸುತ್ತಿದೆ. ಈ ನಡುವೆಯೇ ಭಾರತದ ಶೋಷಿತ ಸಮುದಾಯಗಳು ತಮ್ಮ ಸಾಂಸ್ಕೃತಿಕ ಬೇರುಗಳನ್ನು ನಿರಂತರವಾಗಿ ಶೋಧಿಸುತ್ತಲೇ ಇವೆ. ಅಯೋಧ್ಯಾ ನಂತರದ ಸಾಂಸ್ಕೃತಿಕ ರಾಜಕಾರಣದಲ್ಲಿ ತಳಸಮುದಾಯಗಳ ಸಾಂಸ್ಕೃತಿಕ ನೆಲೆಗಳನ್ನು ನಿರಾಕರಿಸುವ ಮತ್ತು ಬಹುಸಂಖ್ಯಾವಾದದ ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ತಳಸಂಸ್ಕೃತಿಗಳನ್ನೂ ಸೆಳೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇದು ಬಹುಮಟ್ಟಿಗೆ ಯಶಸ್ವಿಯಾಗಿರುವುದನ್ನೂ ಗಮನಿಸಬಹುದು. ದಲಿತ ರಾಜಕಾರಣದ ನೆಲೆಯಲ್ಲಿ ನಿಂತು ಈ ವಿದ್ಯಮಾನವನ್ನು ಗಮನಿಸಿದಾಗ ದಲಿತ ಸಮುದಾಯಗಳು ಹೆಚ್ಚು ಹೆಚ್ಚಾಗಿ ತಮ್ಮ ಮೂಲ ಸಾಂಸ್ಕೃತಿಕ ನೆಲೆಗಳಿಂದ ವಿಮುಖವಾಗಿ ಮೇಲ್ಜಾತಿಯನ್ನು ಅನುಕರಿಸುವ ಅಥವಾ ತಮ್ಮದಲ್ಲದ ಸಾಂಸ್ಕೃತಿಕ-ಧಾರ್ಮಿಕ ಆಚರಣೆಗಳನ್ನು, ಸಂಪ್ರದಾಯಗಳನ್ನು ಅಪ್ಪಿಕೊಳ್ಳುವ ಅಪಾಯವನ್ನು ಗುರುತಿಸಬಹುದು.
ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದಲ್ಲಿ ದಲಿತ ರಾಜಕಾರಣ ನಿರ್ವಹಿಸಿದ ಪಾತ್ರ ಏನು ? ಈ ಪ್ರಶ್ನೆ ನಮ್ಮ ರಾಜಕೀಯೇತರ ದಲಿತ ಸಮೂಹಗಳನ್ನು/ಚಳುವಳಿಗಳನ್ನು ಕಾಡಬೇಕಲ್ಲವೇ ? ತಳಮೂಲ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವುದೆಂದರೆ ಬೇರು ಬಿಟ್ಟಿರಬಹುದಾದ ಪ್ರಾಚೀನ ಸಂಪ್ರದಾಯಗಳನ್ನು ಅಥವಾ ಆಚರಣೆಗಳನ್ನು ಮರುಸ್ಥಾಪಿಸುವುದಲ್ಲ. ಬದಲಾಗಿ ನಮ್ಮ ಸಮಾಜವನ್ನು ಇಂದಿಗೂ ಕಾಡುತ್ತಿರುವ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಮೂಲ ಬೇರುಗಳನ್ನು ಕಿತ್ತೆಸೆಯುವ ಮೂಲಕ ಈ ನೆಲಸಂಸ್ಕೃತಿಯನ್ನು ರೂಪಾಂತರಗೊಳಿಸಿ ಮರುಸ್ಥಾಪಿಸುವುದು. ಈ ಅಮಾನುಷ ನಡವಳಿಕೆಗಳು ಪ್ರಕಟವಾದಾಗಲೆಲ್ಲಾ ದಲಿತ ಸಂಘಟನೆಗಳು ಸಾಂದರ್ಭಿಕವಾಗಿ ಸಾಂಕೇತಿಕವಾಗಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಗೆಡಹುತ್ತಿವೆ. ಇದು ಆಗಲೇಬೇಕು, ಆಗುತ್ತಿದೆ.
ಆದರೆ ಅದರಿಂದಾಚೆಗೆ ಏನಾಗುತ್ತಿದೆ ? ದಲಿತ ಸಮುದಾಯದ ನಡುವೆ ತಳಸಂಸ್ಕೃತಿಯ ಮೂಲ ಆಶಯಗಳನ್ನು ಹಾಗೂ ವರ್ತಮಾನದ ಆದ್ಯತೆಗಳನ್ನು ಮುಖಾಮುಖಿಯಾಗಿಸಿ ಸಂವಾದಿಸುವ ನಿಟ್ಟಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಯೋಜನೆಗಳನ್ನು ಸಂಘಟನೆಗಳು ಹಮ್ಮಿಕೊಳ್ಳುತ್ತಿಲ್ಲ. ಬುದ್ಧ, ಅಂಬೇಡ್ಕರ್, ಫುಲೆ, ಶಾಹು ಮಹಾರಾಜ್ ಮುಂತಾದ ದಾರ್ಶನಿಕರ ಜನ್ಮದಿನಾಚರಣೆಗಳನ್ನು ದಾಟಿ, ಸಂಸ್ಕೃತಿಯ ಒಡಲಲ್ಲಿರಬಹುದಾದ ಜನಪದೀಯ ಕಲೆ ಮತ್ತು ಕೌಶಲಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿಲ್ಲ. ಪುರಾಣಗಳ ಮಿಥ್ಯೆಗಳನ್ನು ಚಾರಿತ್ರಿಕ ಸತ್ಯ ಎಂದು ನಿರೂಪಿಸುವ ಹಿಂದುತ್ವವಾದಿಗಳ ಅಥವಾ ಮೇಲ್ಜಾತಿಗಳ ಸಾಂಸ್ಕೃತಿಕ ನಿರೂಪಣೆ (Narrative)ಗಳಿಗೆ ಪ್ರತಿಕ್ರಿಯೆಯಾಗಿ, ಅದೇ ಪುರಾಣಗಳ ಕಲ್ಪಿತ ಕಥನಗಳಲ್ಲಿನ ಪ್ರತಿರೋಧದ ನೆಲೆಗಳನ್ನು ಬಿಂಬಿಸಲಾಗುತ್ತಿದೆಯೇ ಹೊರತು, ಸಮಕಾಲೀನ ಸಮಾಜಕ್ಕೆ ಅಗತ್ಯವಾದ ವೈಚಾರಿಕ ನೆಲೆಯ, ವೈಜ್ಞಾನಿಕ ಪರಿಶೋಧನೆಯ ಸಾಂಸ್ಕೃತಿಕ ಚಿಂತನೆಗಳನ್ನು ನಾವು ಕೊಡುತ್ತಿಲ್ಲ.
ಅಂಬೇಡ್ಕರ್ ನಾಸ್ತಿಕವಾದಿಯಾಗಿರಲಿಲ್ಲ ಅದರೆ ಧಾರ್ಮಿಕ ಕರ್ಮಠ ಚಿಂತನೆಗಳನ್ನು ಧಿಕ್ಕರಿಸಿದ್ದರು. ಮನುಷ್ಯನಿಗೆ ಧರ್ಮ ಹಾಗೂ ಧಾರ್ಮಿಕ ನೆಲೆಯ ತಾತ್ವಿಕ ನೆಲೆಗಳು ಅವಶ್ಯ ಎಂದೇ ಭಾವಿಸಿದ್ದ ಅಂಬೇಡ್ಕರ್, ಧಾರ್ಮಿಕ ನಿಯಮಗಳ ವಿರೋಧಿಯಾಗಿದ್ದರು. ಹಾಗಾಗಿಯೇ ವೈದಿಕ ಪರಂಪರೆಯ ಕರ್ಮಠ ಚಿಂತನೆಗಳನ್ನು, ಪುನರ್ಜನ್ಮ ಮತ್ತು ಕರ್ಮ ಸಿದ್ದಾಂತಗಳಂತಹ ಅವೈಜ್ಞಾನಿಕ ಆಲೋಚನೆಗಳನ್ನು ಧಿಕ್ಕರಿಸಿ ಬೌದ್ಧ ಧಮ್ಮದಲ್ಲಿ ಮನುಜ ಸೂಕ್ಷ್ಮತೆ ಮತ್ತು ಸಮಾನತೆಯ ನೆಲೆಗಳನ್ನು ಗುರುತಿಸಿದ್ದರು. ಪೆರಿಯಾರ್ ಕಟ್ಟಾ ನಾಸ್ತಿಕವಾದಿಯಾಗಿ ದೈವತ್ವವನ್ನೇ ನಿರಾಕರಿಸಿ, ಜಾತಿ ಕಟ್ಟಳೆಗಳನ್ನು ಮೀರಿ ಸಮ ಸಮಾಜವನ್ನು ಕಟ್ಟುವತ್ತ ಗಮನಹರಿಸಿದ್ದರು. ಈ ಎರಡು ಪರಂಪರೆಗಳಲ್ಲಿ ನಾವು ಗುರುತಿಸಬಹುದಾದ ಸಮಾನ ಎಳೆ ಎಂದರೆ ಜಾತಿ ವಿನಾಶ ಅಥವಾ ಜಾತಿ ಪ್ರಜ್ಞೆಯ ನಾಶ. ಆದರೆ ಇಂದು ಜಾತಿ ವಿನಾಶ ಸಂಘಟನಾತ್ಮಕ ಕಾರ್ಯಸೂಚಿಯಾಗಿ ಎಲ್ಲಿಯೂ ಕಾಣುತ್ತಿಲ್ಲ. ಅಂಬೇಡ್ಕರ್ ಅವರ Annihilation of Caste ಅತಿ ಹೆಚ್ಚು ಓದಿಗೆ ಒಳಗಾದ ಪುಸ್ತಕವಾಗಿರಬಹುದಾದರೂ, ಅದರೊಳಗಿನ ಬೌದ್ಧಿಕ ಆಲೋಚನೆ ಕೇವಲ ಹಾಳೆಗಳ ಮೇಲಷ್ಟೇ ಉಳಿದಿದೆ. ವ್ಯತಿರಿಕ್ತವಾಗಿ ಪ್ರತಿಯೊಂದು ಜಾತಿ-ಉಪಜಾತಿ, ಪಂಗಡ-ಉಪ ಪಂಗಡಗಳಲ್ಲೂ ಜಾತಿ ಪ್ರಜ್ಞೆ ಗಟ್ಟಿಯಾಗುತ್ತಲೇ ಹೋಗುತ್ತಿದೆ. ಅಂತರ್ಜಾತಿ ವಿವಾಹಗಳ ಮೂಲಕ ಜಾತಿ ಪದ್ಧತಿಯ ಮೂಲ ಬೇರುಗಳನ್ನು ಅಲುಗಾಡಿಸುವ ಅಂಬೇಡ್ಕರ್ ಅವರ ಕಲ್ಪನೆ ವ್ಯಕ್ತಿಗತ ನೆಲೆಯಲ್ಲಿ ಸಾಕಾರಗೊಂಡಿಸಬಹುದಾದರೂ, ಸಾರ್ವಜನಿಕವಾಗಿ-ಸಾರ್ವತ್ರಿಕವಾಗಿ ಜಾತಿಯ ಬೇರುಗಳು ಇಂದಿಗೂ ಗಟ್ಟಿಯಾಗಿರುವುದು ಸಮಕಾಲೀನ ಸಮಾಜದ ವೈಫಲ್ಯ ಅಲ್ಲವೇ ?
ತಳಸಮುದಾಯಗಳ ಸಾಂಸ್ಕೃತಿಕ ನೆಲೆಗಳಲ್ಲಿ ಇಂದಿಗೂ ವ್ಯಕ್ತವಾಗುವ ದೈವತ್ವದ ಪರಿಕಲ್ಪನೆಗಳು, ಅದರ ಸುತ್ತಲಿನ ಆಚರಣೆ ಮತ್ತು ನಂಬಿಕೆಗಳು ಕ್ರಮೇಣ ವೈದಿಕೀಕರಣವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ, ಅಲ್ಲವೇ ? ಕರಾವಳಿ ಮತ್ತು ದಕ್ಷಿಣ ಕನ್ನಡದ ಭೂತ ದೈವಗಳು ಒಂದು ನಿದರ್ಶನ. ಈ ತಳಸಂಸ್ಕೃತಿಯಲ್ಲಿನ ಶ್ರದ್ಧಾನಂಬಿಕೆಗಳು ಆಧುನಿಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಮುಖಾಮುಖಿಯಾಗಿ ನಿಲ್ಲುವಾಗ ಆಧುನಿಕ ಕಾಲಘಟ್ಟದಲ್ಲಿರುವ ನಮ್ಮ ನಿಲುವು ಹೇಗಿರಬೇಕು ? ಈ ಸಾಂಸ್ಕೃತಿಕ ನೆಲೆಗಳಲ್ಲಿನ ಮೌಢ್ಯಾಚರಣೆ ಮತ್ತು ಮೂಢ ನಂಬಿಕೆಗಳನ್ನೇ ಚಿಮ್ಮುಹಲಗೆಯಾಗಿ ಬಳಸಿಕೊಂಡು ವೈದಿಕೀಕರಣಕ್ಕೊಳಪಡಿಸುತ್ತಿರುವ ಶಕ್ತಿಗಳು ಇಡೀ ಸಮುದಾಯಗಳನ್ನೇ ತಮ್ಮ ಮೂಲ ಬೇರುಗಳಿಂದ ಬೇರ್ಪಡಿಸುತ್ತಿವೆ, ತನ್ಮೂಲಕ ವಿಶಾಲ ಧಾರ್ಮಿಕ ಚೌಕಟ್ಟಿನೊಳಗೆ ಸಮೀಕರಣಗೊಳಿಸುತ್ತಿವೆ. ಆಕ್ರಮಿಸುತ್ತಲೂ ಇವೆ. ಈ ಜಟಿಲ ಸನ್ನಿವೇಶದಲ್ಲಿ ದಲಿತ ಸಂಘಟನೆಗಳ-ಚಳುವಳಿಗಳ ಸಾಂಸ್ಕೃತಿಕ ರಾಜಕಾರಣ ಹೇಗಿರಬೇಕು ? ಮಹಾತ್ಮ ಫುಲೆ ಆಗಲೀ, ಅಂಬೇಡ್ಕರ್ ಮತ್ತಿತರರಾಗಲೀ ತಮ್ಮ ಸಂಶೋಧನೆಗಳ ಮೂಲಕ ಭಾರತದ ಮೂಲ ನಿವಾಸಿಗಳ ಅಥವಾ ತಳಸಮುದಾಯಗಳ ಸಾಂಸ್ಕೃತಿಕ ನೆಲೆಗಳನ್ನು ಸವಿಸ್ತಾರವಾಗಿ ನಮ್ಮ ಮುಂದಿರಿಸಿದ್ದಾರೆ. ಆದರೆ ತಮ್ಮ ಸಂಶೋಧನೆಯೇ ಅಂತಿಮ ಎಂದು ಎಲ್ಲಾದರೂ ಹೇಳಿದ್ದಾರೆಯೇ ?
ಹೇಳಿಲ್ಲ ಎಂದಾದರೆ ನಾವೇಕೆ ಸಂಶೋಧನೆಗೆ ವಿಮುಖರಾಗಿದ್ದೇವೆ ? ಮರು ಸಂಶೋಧನೆ ಮತ್ತು ಮರು ಅಧ್ಯಯನಕ್ಕೆ ಏಕೆ ಮುಖ ತಿರುಗಿಸಿದ್ದೇವೆ ? ಪ್ರಾಚೀನ ಭಾರತದ ಸಾಂಸ್ಕೃತಿಕ ನೆಲೆಗಳಲ್ಲಿ ಆ ಕಾಲಘಟ್ಟದ ಉತ್ಪಾದನಾ ಸಂಬಂಧಗಳು ಹಾಗೂ ಉತ್ಪಾದಕೀಯ ಶಕ್ತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು ಮತ್ತು ಸಮಾಜದ ಮುನ್ನಡಿಗೆಯಲ್ಲಿ ಈ ಜನಸಮುದಾಯಗಳ ಪಾತ್ರ ಹಾಗೂ ಇವುಗಳ ಒಡಲಲ್ಲೇ ಸೃಷ್ಟಿಯಾಗುವ ಸಾಂಸ್ಕೃತಿಕ ಆಚರಣೆಗಳು, ವಿಧಿವಿಧಾನಗಳು ಹಾಗೂ ಜೀವನಶೈಲಿಯನ್ನು ಕುರಿತ ಸಂಶೋಧನೆ ಕಾಲದಿಂದ ಕಾಲಕ್ಕೆ ಆಗಲೇಬೇಕಲ್ಲವೇ ? ಉತ್ಪಾದನೆಯ ಮೂಲ-ಉತ್ಪಾದನಾ ಸಾಧನಗಳು-ಉತ್ಪಾದನಾ ಸಂಬಂಧಗಳು ಮತ್ತು ಉತ್ಪಾದಕೀಯ ಶಕ್ತಿಗಳು ಒಂದು ಭೂ ಪ್ರದೇಶದ ಸಾಂಸ್ಕೃತಿಕ, ಕೆಲವೊಮ್ಮೆ ಧಾರ್ಮಿಕ, ಶ್ರದ್ಧಾನಂಬಿಕೆಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗುತ್ತವೆ. ಸಮಾಜದ ಅಭ್ಯುದಯದ ಹಾದಿಯಲ್ಲಿ ಇವುಗಳೂ ಸಹ ರೂಪಾಂತರಗೊಳ್ಳುತ್ತಲೇ ಸಾಗುವುದಾದರೂ, ಮೂಲ ತಾತ್ವಿಕ ನೆಲೆಗಳು ಯಥಾಸ್ಥಿತಿಯಲ್ಲಿರುವ ಸಾದ್ಯತೆಗಳೂ ಇರುತ್ತದೆ. ಇವತ್ತಿನ ಸಮಾಜದ ನಡುವೆ ನಿಂತು ನೋಡಿದಾಗ ಈ ಅಂಶಗಳನ್ನು ಹೇಗೆ ವ್ಯಾಖ್ಯಾನಿಸಬೇಕು ? ಇದನ್ನು ಗ್ರಹಿಸಬೇಕೆಂದರೆ ಮರು ಸಂಶೋಧನೆ ಅತ್ಯವಶ್ಯ. ಇವುಗಳನ್ನು ಕುರಿತ ಮರು ಸಂಶೋಧನೆಗಳು ನಮ್ಮ ಚಾರಿತ್ರಿಕ ಅರಿವನ್ನು, ವರ್ತಮಾನದ ಗ್ರಹಿಕೆಯನ್ನು ಹಾಗೂ ಭವಿಷ್ಯದ ಮುಂಗಾಣ್ಕೆಯನ್ನು ನಿರ್ಧರಿಸುತ್ತವೆ. ಹಾಗಾಗಿ ಅಧ್ಯಯನ-ಸಂಶೋಧನೆ-ಮರುಸಂಶೋಧನೆ ದಲಿತ ಸಂಘಟನೆಗಳ, ವಿದ್ವಾಂಸರ, ಚಳುವಳಿಗಳ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಪ್ರಥಮ ಆದ್ಯತೆಯಾಗಬೇಕಾಗುತ್ತದೆ.
ಕರ್ನಾಟಕದ ದಲಿತ ಚಳುವಳಿ ಈ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸಿದ್ದಲ್ಲಿ ಇವತ್ತು ದಕ್ಷಿಣ ಕನ್ನಡ, ಕರಾವಳಿ ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳ ನಡುವೆ ಜೀವಂತಿಕೆಯಿಂದಿರುವ ತಳಸಂಸ್ಕೃತಿಯ ನೆಲೆಗಳು ಸುಲಭವಾಗಿ ವೈದಿಕೀಕರಣಕ್ಕೊಳಗಾಗುತ್ತಿರಲಿಲ್ಲ. ಇಲ್ಲಿ ಇರಬಹುದಾದ ಮೌಢ್ಯಾಚರಣೆ ಮತ್ತು ಮೂಢನಂಬಿಕೆಗಳು ಆಧುನಿಕ ಕಾಲಘಟ್ಟದಲ್ಲಿ ವೈಚಾರಿಕ-ವೈಜ್ಞಾನಿಕ ನೆಲೆಯಲ್ಲಿ ಹೇಗೆ ಸಾಮಾಜಿಕ-ಬೌದ್ಧಿಕ ವಿಕಾಸಕ್ಕೆ ಅಡಚಣೆ ಉಂಟುಮಾಡುತ್ತವೆ ಎನ್ನುವುದನ್ನು ಶೋಧಿಸಿದ್ದರೆ, ಈ ಸಮುದಾಯಗಳು ಹಿಂದುತ್ವ ಬಹುಸಂಖ್ಯಾವಾದದ ಸಾಂಸ್ಕೃತಿಕ ರಾಜಕಾರಣದ ಸೆಳೆತಕ್ಕೆ ಒಳಗಾಗುತ್ತಿರಲಿಲ್ಲ. ಸಾಕಷ್ಟು ಮಾನವ-ಹಣಕಾಸು-ಸೌಕರ್ಯಗಳ ಸಂಪನ್ಮೂಲಗಳು ಇದ್ದಾಗ್ಯೂ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲೂ ಇರುವ ಅಂಬೇಡ್ಕರ್-ಜಗಜೀವನ್ರಾಮ್ ಅಧ್ಯಯನ ಕೇಂದ್ರಗಳು, ಪೀಠಗಳು ಏಕೆ ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿಲ್ಲ ಎನ್ನುವ ಜಿಜ್ಞಾಸೆ ನಮ್ಮನ್ನು ಕಾಡಲೇಬೇಕಲ್ಲವೇ ?
ಇದಕ್ಕೆ ಅಡ್ಡಿಯಾಗಿರುವುದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ನಿರ್ಮಿಸಿರುವ ಜಾತಿ-ಉಪಜಾತಿ- ಮೇಲು-ಕೆಳಜಾತಿಯ ಚೌಕಟ್ಟುಗಳು ಮತ್ತು ಇಂದಿಗೂ ನಾವೂ ಕಾಪಾಡಿಕೊಂಡು ಬಂದಿರುವ ಪ್ರತ್ಯೇಕತೆಯ ಬೇಲಿಗಳು. ಅಂತರ್ಜಾತಿ ವಿವಾಹ ಮತ್ತು ಸಹಭೋಜನ ಇಂದು ಮೇಲ್ಜಾತಿಯವರೊಡನೆ ಏರ್ಪಡುವ ವೈವಾಹಿಕ ಸಾಮಾಜಿಕ ಸಂಬಂಧಗಳಲ್ಲಿ ವ್ಯಕ್ತವಾಗುತ್ತಿದೆ. ಇದು ಸಮಾಜದ ಸುಶಿಕ್ಷಿತರಲ್ಲಿ ಜಾತಿ ಪ್ರಜ್ಞೆಯನ್ನು ಮೀರಲು, ಜಾತಿಯ ಬೇಲಿಗಳನ್ನು ದಾಟಲು ನೆರವಾಗುತ್ತಿರುವುದೂ ಹೌದು. ಆದರೆ ತಳಸಮುದಾಯಗಳಲ್ಲೇ ಇರುವ ಗೋಡೆಗಳನ್ನು ದಾಟಿ ಈ ವೈವಾಹಿಕ-ಸಾಮಾಜಿಕ ಸಂಪರ್ಕಗಳು-ಸಂಬಂಧಗಳು ಸಾಧ್ಯವಾಗುತ್ತಿದೆಯೇ ? ಎಡ ಮತ್ತು ಬಲ ಸಮುದಾಯಗಳ ನಡುವೆ ವಿವಾಹ ಸಂಬಂಧಗಳು ಏರ್ಪಡುತ್ತಿವೆಯೇ ? ಬುಡಕಟ್ಟು ಸಮುದಾಯಗಳೊಡನೆ, ಆದಿವಾಸಿಗಳೊಡನೆ “ನಾಗರಿಕ” ಎನಿಸಿಕೊಳ್ಳುವ ಸಮಾಜದಲ್ಲಿ ಈ ರೀತಿಯ ಮನುಜ ಸಂಬಂಧಗಳನ್ನು ಏರ್ಪಡಿಸುವ ಸಾಧ್ಯತೆಗಳ ಬಗ್ಗೆ ನಾವು ಯೋಚಿಸುತ್ತಿದ್ದೇವೆಯೇ ? ಅಂಬೇಡ್ಕರ್ ಹೇಳಿದಂತೆ ಭಾರತೀಯ ಸಮಾಜ ಮೆಟ್ಟಿಲುಗಳಿಲ್ಲದ (Staircase) ಒಂದು ಬಹುಮಹಡಿ ಕಟ್ಟಡ. ಇಲ್ಲಿ ಪ್ರತಿಯೊಂದು ಜಾತಿ-ಉಪಜಾತಿಯೂ ತನ್ನ ಮೇಲಿನ ಮತ್ತು ಕೆಳಗಿನ ಜಾತಿ ಗುಂಪುಗಳನ್ನು ಗುರುತಿಸುತ್ತಲೇ ಮುನ್ನಡೆಯುತ್ತದೆ. ಈ ಮನಸ್ಥಿತಿಯನ್ನು ಮೀರುವ ಪ್ರಯತ್ನಗಳು ನಡೆಯಬೇಕಾದರೆ ಅದು ಸಾಂಸ್ಕೃತಿಕ ನೆಲೆಯಲ್ಲೇ ಆಗಬೇಕು. ದಲಿತ ಚಳುವಳಿ ಅಥವಾ ರಾಜಕಾರಣ ಮೂಲತಃ ಸೋತಿರುವುದು ಇಲ್ಲಿ.
ಎಡಪಕ್ಷಗಳು ಜಾತಿ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಗಂಭೀರವಾಗಿ ಪರಿಗಣಿಸುತ್ತಿರುವುದು ಸ್ವಾಗತಾರ್ಹ. ಆದರೆ ಇದನ್ನೂ ಮೀರಿ ಸಾಂಸ್ಕೃತಿಕ ವಲಯದಲ್ಲಿ ಎಡಪಕ್ಷಗಳಿಗೆ ಈ ಪರಿಶೋಧನೆ-ಸಂಶೋಧನೆ ಮುಖ್ಯವಾಗಬೇಕಿತ್ತು. Base ಮತ್ತು Superstructure ಗತಿತಾರ್ಕಿಕತೆಯ ನೆಲೆಯಲ್ಲೇ ಸಮಾಜವನ್ನು ಅಧ್ಯಯನ ಮಾಡುವ ಮಾರ್ಕ್ಸ್ವಾದಕ್ಕೆ, ಭಾರತದ ಸಂದರ್ಭದಲ್ಲಿ ತಳಮಟ್ಟದ ಸಾಂಸ್ಕೃತಿಕ ನೆಲೆಗಳಲ್ಲಿ ವ್ಯಕ್ತವಾಗುವ ಅಥವಾ ಬೇರುಬಿಟ್ಟಿರುವ ಜನಸಮುದಾಯಗಳ ಧಾರ್ಮಿಕ/ಸಾಂಸ್ಕೃತಿಕ ಆಚರಣೆಗಳೂ-ಉತ್ಪಾದನಾ ಸಂಬಂಧಗಳೂ ಸಹ ಅಧ್ಯಯನದ ವಿಷಯವೇ ಆಗಬೇಕಿತ್ತು. ಆದರೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಇದು ಸಾಧ್ಯವಾಗದಿರುವುದು ದುರಂತ. ಇಂದಿಗೂ ಸಹ ತಳಮಟ್ಟದಲ್ಲಿ ಸಮಾನ ಶೋಷಣೆಗೊಳಗಾಗಿರುವ ಮುಸ್ಲಿಂ ಕ್ರೈಸ್ತ ಇತರ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯಗಳು ಒಂದು ಐಕ್ಯತೆಯ ಭೂಮಿಕೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಿರುವುದನ್ನು ಸಹ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಇಲ್ಲಿಯೂ ಸಹ ಮಾರ್ಕ್ಸ್ವಾದದ ಬೌದ್ಧಿಕ ಚಿಂತನೆಗಳು ಅಂಬೇಡ್ಕರರರ ಸಾಂಸ್ಕೃತಿಕ ಚಿಂತನೆಗಳೊಡನೆ ಬೆಸೆದುಕೊಂಡಿದ್ದರೆ ಬಹುಶಃ ಸಾಂಸ್ಕೃತಿಕ ರಾಜಕಾರಣ ಬಲಪಂಥೀಯದೆಡೆಗೆ ಸಾಗುವುದು ಕಷ್ಟವಾಗುತ್ತಿತ್ತೇನೋ ! ಇದು ವ್ಯಾಪಕ ಚರ್ಚೆಗೊಳಗಾಗಬೇಕಾದ ವಿಚಾರ.
ಇನ್ನು ವರ್ತಮಾನದ ರಾಜಕೀಯ-ಸಾಂಸ್ಕೃತಿಕ ಸಂಕಥನಗಳ ಕೇಂದ್ರ ವಿಷಯವಾಗಿರುವ ಲಿಂಗ ಸೂಕ್ಷ್ಮತೆ, ಮಹಿಳಾ ಸಂವೇದನೆ ಹಾಗೂ ಪಿತೃಪ್ರಧಾನತೆಯ ನೆಲೆಯಲ್ಲಿ ನೋಡಿದಾಗ, ಕರ್ನಾಟಕದ ದಲಿತ ಚಳುವಳಿಗೆ ಅಥವಾ ದಲಿತ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸ ಇರುವುದಾದರೂ, ಈವರೆಗೂ “ದಲಿತ ಮಹಿಳಾ ವಾಹಿನಿ” ನಮಗೆ ಕಂಡುಬಂದಿಲ್ಲ. ಏಕೆ ಎಂಬ ಪ್ರಶ್ನೆಗೆ ಇನ್ನಾದರೂ ಉತ್ತರ ಕಂಡುಕೊಳ್ಳಬೇಕಿದೆ. ರಂಗಭೂಮಿಗೆ ದಲಿತ-ಬಂಡಾಯ ಸಾಹಿತ್ಯವು ಸಾಕಷ್ಟು ಹೂರಣವನ್ನು ಒದಗಿಸಿರುವುದು ವಾಸ್ತವವೇ ಆದರೂ, ದಲಿತ ಸಂಘಟನೆಗಳು ರಂಗಭೂಮಿಯ ವಿವಿಧ ಆಯಾಮಗಳನ್ನು (ಬೀದಿ ನಾಟಕ ಇತ್ಯಾದಿ) ತಮ್ಮ ಚಳುವಳಿಯ ಕಾರ್ಯಸೂಚಿಯ ಒಂದು ಭಾಗವಾಗಿ ನೋಡಿಲ್ಲ. ಆರಂಭದ ದಿನಗಳಲ್ಲಿ, ಕೊಂಚ ಮಟ್ಟಿಗೆ ಇಂದಿಗೂ ಸಹ ಸಾಂಸ್ಕೃತಿಕ ನೆಲೆಯಲ್ಲಿ ಜನಪದೀಯ ನೆಲೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ದಲಿತ ಚಳುವಳಿ-ರಾಜಕಾರಣವು ಸಮಕಾಲೀನ ಸಂದರ್ಭದಲ್ಲಿ ಯುವ ಸಮೂಹದ ನಡುವೆ ದಲಿತ ಸಂವೇದನೆಯನ್ನು ಉದ್ಧೀಪನಗೊಳಿಸುವ ನಿಟ್ಟಿನಲ್ಲಿ, ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಘನೀಕರಿಸುವ ನಿಟ್ಟಿನಲ್ಲಿ ಯಾವುದೇ ಸಾಂಸ್ಥಿಕ ಪ್ರಯತ್ನಗಳನ್ನು ಮಾಡಿಲ್ಲ. ಅಂಬೇಡ್ಕರ್ ಭವನಗಳ ನಿರ್ಮಾಣದಿಂದಾಚೆಗೆ, ಈ ಭವನಗಳಲ್ಲಿ ಭಾರತದ ತಳಸಂಸ್ಕೃತಿಯ ಅಪಾರ ಜ್ಞಾನಸಂಪತ್ತನ್ನು ಮತ್ತು ಸಂವೇದನಾಶೀಲ ಬೌದ್ಧಿಕ ಸಂಪನ್ಮೂಲಗಳನ್ನು ಹೇಗೆ ಸ್ಥಾಪಿಸಬಹುದು ಎನ್ನುವುದರ ಬಗ್ಗೆ ಯೋಚಿಸಿದಂತೆ ಕಾಣುವುದಿಲ್ಲ.
ಹಾಗಾಗಿಯೇ Ritualistic ಆಗಿ ಅಂಬೇಡ್ಕರ್ ಜಯಂತಿಯ ಆಚರಣೆ, ಪರಿನಿಬ್ಬಾಣ ದಿನ, ಬುದ್ಧ ಜಯಂತಿ, ಬುದ್ಧಪೂರ್ಣಿಮೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿಯೂ ಸಹ ಅಂಬೇಡ್ಕರ್ ಕಟುವಾಗಿ ವಿರೋಧಿಸಿದ್ದ ಆರಾಧನಾ ಸಂಸ್ಕೃತಿಯ ಆಚರಣಾತ್ಮಕ ಅನುಕರಣೆಯಿಂದ ದಲಿತ ಸಂವೇದನೆ ಕ್ಷೀಣಿಸುತ್ತಿದೆ. ಅಂಬೇಡ್ಕರ್ ಆಶಿಸಿದ ಶಿಕ್ಷಣ ಹೋರಾಟ ಮತ್ತು ಸಂಘಟನೆ ಎಂಬ ಘೋಷಣೆಯನ್ನು ನಿಘಂಟಿನ ಅರ್ಥದಲ್ಲಿ ನೋಡದೆ, ವಿಶಾಲ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುವುದಾದರೆ ಸಾಂಸ್ಕೃತಿಕ ರಾಜಕಾರಣದ ನೆಲೆಗಳು ಮತ್ತಷ್ಟು ವಿಸ್ತರಿಸುತ್ತವೆ. ಈ ಸಾಂಸ್ಕೃತಿಕ ರಾಜಕಾರಣದ ಜವಾಬ್ದಾರಿಯನ್ನು ಆಡಳಿತ ವ್ಯವಸ್ಥೆಯಲ್ಲಿ ಸ್ಥಾಪಿತವಾಗಿರುವ ಸಾಂಸ್ಥಿಕ ಚೌಕಟ್ಟುಗಳಲ್ಲೇ ನಿರ್ವಹಿಸುವ ಬದಲು, ಜನಸಮುದಾಯಗಳ ನಡುವೆ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡಬೇಕಿದೆ. ದಲಿತ ಚಳುವಳಿ ಮತ್ತು ಸಂಘಟನೆಗಳು ಇದಕ್ಕೆ ಸಜ್ಜಾಗಬೇಕಿವೆ. ಭಾರತ ನಡೆಯುತ್ತಿರುವ ಹಾದಿ ಮತ್ತು ನವ ಭಾರತ ತಲುಪಲು ಇಚ್ಚಿಸಿರುವ ಗುರಿಯನ್ನು ಗಮನದಲ್ಲಿಟ್ಟು ನೋಡಿದಾಗ, ತಳಸಮುದಾಯಗಳಿಗೆ ಈ ಕಾರ್ಯಯೋಜನೆ ಅತ್ಯಂತ ಜರೂರು ಎನಿಸುತ್ತದೆ. ಇಂದಿನ ಯುವ ದಲಿತರ ಮುಂದೆ ಈ ದೊಡ್ಡ ಜವಾಬ್ದಾರಿ ಇದೆ. ನೊಗ ಹೊರಲು ತಯಾರಾಗಿ.
ಮುಂದುವರೆಯುತ್ತದೆ,,,