ಸಿದ್ಧರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದ ಮೂಲಕ ಕಣಕ್ಕಿಳಿಯಲಿದ್ದಾರೆ ಎನ್ನುವುದು ಅಧಿಕೃತಗೊಂಡ ಬೆನ್ನಲ್ಲೇ ಸಿದ್ದು ವಿರುದ್ಧ ಹಲವು ರೀತಿಯ ಮಸಲತ್ತುಗಳು ಚಿನ್ನದ ನಾಡಲ್ಲಿ ನಡೆಯಲು ಪ್ರಾರಂಭಿಸಿವೆ.
ಸಿದ್ಧು ಸ್ಪರ್ಧೆಯಿಂದ ನಿಜಕ್ಕೂ ಕಂಗೆಟ್ಟಿರುವ ವರ್ತೂರು ಪ್ರಕಾಶ್ ಸಿದ್ಧರಾಮಯ್ಯ ವಿರುದ್ಧ ಆರಂಭದಲ್ಲಿ ಪ್ರಲಾಪ ತೋರಿಸಿದರೂ, ಇತ್ತೀಚೆಗೆ ವರಸೆ ಬದಲಾಯಿಸಿದ್ದಾರೆ. ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ವರ್ತೂರ್ ಇತ್ತೀಚಿನ ಕೆಲವು ದಿನಗಳಿಂದ ಸಿದ್ಧ ವಿರುದ್ಧ ಹತಾಷೆಯ ಮಾತುಗಳನ್ನಾಡುತ್ತಿದ್ದಾರೆ. ಒಕ್ಕಲಿಗ, ದಲಿತ ಸಮುದಾಯಗಳನ್ನೂ ಸಿದ್ಧು ವಿರುದ್ಧ ಎತ್ತಿ ಕಟ್ಟಲು ವರ್ತೂರು ಪ್ರಕಾಶ್ ಪ್ರಯತ್ನಿಸುತ್ತಿದ್ದಾರೆ.
ಮತ್ತೆ ಎದ್ದ ದಲಿತ ಸಿಎಂ ಕೂಗು: ಸಿದ್ಧು ಸೋಲಿಸಲು ಅಭಿಯಾನ
ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸಿದ್ಧರಾಮಯ್ಯ ರನ್ನು ದಲಿತ ವಿರೋಧಿ ಎಂದು ಬಿಂಬಿಸಲು ಯತ್ನಿಸಿದ ವರ್ತೂರು, “ಸಿದ್ದರಾಮಯ್ಯ ವಿರುದ್ದ ದಲಿತ ಸಂಘಟನೆಗಳು ಹ್ಯಾಡ್ ಬಿಲ್ ಹಂಚುತ್ತಿದ್ದಾರೆ. ಪರಮೇಶ್ವರ, ಖರ್ಗೆ, ಸೇರಿದಂತೆ ಇತರ ದಲಿತರ ನಾಯಕರನ್ನು ತುಳಿದ ಸಿದ್ದರಾಮಯ್ಯ ವಿರುದ್ದ ಕರಪತ್ರ ಹಂಚುತ್ತಿದ್ದಾರೆ, ವಿಎಲ್.ಪಾಟೀಲ್, ಅವರ ಮಗ ಹನುಮಂತರಾವ್ ಪಾಟೀಲ್ ವಿವೇಕ್ ರಾವ್ ಪಾಟೀಲ್ ತಲೆ ಎತ್ತದೇ ಮಾಡಿದ್ದು ಸಿದ್ದರಾಮಯ್ಯ. ದಲಿತರಿಗೆ, ಗೊಲ್ಲರಿಗೆ, ಕುರುಬರಿಗೆ ಮೋಸ ಮಾಡಿದ್ದು ಸಿದ್ದರಾಮಯ್ಯ. ಇವರ್ಯಾರು ಸಿದ್ದರಾಮಯ್ಯರಿಗೆ ಓಟ್ ಹಾಕೋದಿಲ್ಲ” ಎಂದು ಹೇಳಿದ್ದಾರೆ.
ವರ್ತೂರು ಪ್ರಕಾಶ್ ಹೇಳಿದರಲ್ಲೂ ನಿಜಾಂಶವಿದೆ. ಕೆಲವು ದಲಿತ ಸಂಘಟನೆಗಳ ಕಾರ್ಯಕರ್ತರು ಸಿದ್ಧು ವಿರುದ್ಧ ಕೋಲಾರದಲ್ಲಿ ಕರಪತ್ರ ಹಂಚುತ್ತಿದ್ದಾರೆ.
ಕೋಲಾರ ಜಿಲ್ಲೆಯಾದ್ಯಂತ ದಲಿತ ನಾಯಕರನ್ನು ಒಳಸಂಚು ಮಾಡಿ ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ, ದಲಿತ ಮುಖ್ಯಮಂತ್ರಿ ದಾರಿಯನ್ನು ಸುಗಮಗೊಳಿಸಿ ಎನ್ನುವ ಅಭಿಯಾನ ಆರಂಭವಾಗಿದೆ.
ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಘೋಷಣೆ ಬೆಂಬಲಿಗರು ಅಲ್ಲಲ್ಲಿ ಕೂಗುತ್ತಿರುವ ನಡುವೆ, ಕೋಲಾರದಲ್ಲಿ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿದೆ. ಆದರೆ ದಲಿತರಿಗೆ ಯಾವುದೇ ಸ್ಥಾನ ಮಾನ ನೀಡಿಲ್ಲ, ಈ ಹಿಂದೆ ಇದೇ ಸಿದ್ದರಾಮಯ್ಯ ಅವರು 2013 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ಅವರನ್ನು ಸೋಲಿಸಿ ದಲಿತರಿಗೆ ಸಿಗಬೇಕಿದ್ದ ಸಿಎಂ ಸ್ಥಾನವನ್ನು ತಾನು ಕಬಳಿಸಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಈ ಅಭಿಯಾನದ ಹಿಂದೆ ವರ್ತೂರು ಪ್ರಕಾಶ್ ಹಾಗೂ ಜೆಡಿಎಸ್ ಕೈವಾಡದ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕ ಎನಿಸುವಂತೆ ವರ್ತೂರು ಪ್ರಕಾಶ್ ದಲಿತರಿಗೆ ಸಿದ್ಧರಾಮಯ್ಯ ಮೋಸ ಮಾಡಿದ್ದಾರೆ ಎಂದರೆ, ಜೆಡಿಎಸ್ ಮುಖಂಡ ಬಾಲಾಜಿ ಚನ್ನಯ್ಯ, ದಲಿತ ಮುಖಂಡರು ದಲಿತ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಕರ ಪತ್ರಗಳ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಇದು ಬರಿ ಕೋಲಾರ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಅಭಿಯಾನ ಮಾಡುತ್ತೇವೆ. ದಲಿತರನ್ನು ಹಂತ ಹಂತವಾಗಿ ಮುಗಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ದಲಿತ ಮುಖ್ಯಮಂತ್ರಿ ಹಾದಿ ಸುಲಭಗೊಳಿಸುವುದು, ದಲಿತ ಮತದಾರರ ಜಾಗೃತಿ ಅಭಿಯಾನ ಮಾಡುವ ಮೂಲಕ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲಾಗುವುದು ಎಂಬ ಸಂದೇಶವನ್ನು ರವಾನೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಒಕ್ಕಲಿಗರ ಮನ ಗೆಲ್ಲಲು ವರ್ತೂರು ತಯಾರಿ? ಜೆಡಿಎಸ್ ಜೊತೆ ಒಳ ಒಪ್ಪಂದ?
ಜೆಡಿಎಸ್ ನಿಂದಲೇ ಬಂದಿರುವ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ನಲ್ಲಿ ಹಗೆತನವಿದೆ ಎನ್ನುವುದು ಬಹಿರಂಗ ಸತ್ಯ. ಹೆಚ್ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಲು ಸಿದ್ದುವೇ ಕಾರಣ ಎಂಬ ವಿಚಾರವೂ ಜೆಡಿಎಸ್ ಕಾರ್ಯಕರ್ತರಲ್ಲಿ ಇದೆ. ಈ ನಡುವೆ ಇದನ್ನೇ ತನ್ನ ಲಾಭಕ್ಕೆ ಬಳಸಲು ವರ್ತೂರು ಹೊರಟಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮುಗಿಸಿದ್ದು ಸಹ ಇದೇ ಸಿದ್ದರಾಮಯ್ಯ. ಮೊಳಕೆಯಲ್ಲೇ ನಿಖೀಲ್ ಕುಮಾರಸ್ವಾಮಿನಾ ತುಳಿದಿದ್ದಾರೆ “ ಎಂದು ಜೆಡಿಎಸ್ ಕಾರ್ಯಕರ್ತರಿಂದ ಸಹಾನುಭೂತಿಯನ್ನು ಪಡೆಯಲು ವರ್ತೂರು ಪ್ರಕಾಶ್ ಯತ್ನಿಸಿದ್ದಾರೆ.
ಅಲ್ಲದೆ, ಜೆಡಿಎಸ್ ಮುಖಂಡರು ಹಾಗೂ ವರ್ತೂರ್ ಪ್ರಕಾಶ್ ಇಬ್ಬರೂ ಸಿದ್ಧು ವಿರುದ್ಧ ದಲಿತ ಟ್ರಂಪ್ಕಾರ್ಡ್ ಅನ್ನೇ ಬಳಸುತ್ತಿರುವುದು ಸಾಕಷ್ಟ ಗುಮಾನಿಗೆ ಕಾರಣವಾಗಿದೆ.
ಕೋಲಾರಕ್ಕೆ ಗಮನ ಕೇಂದ್ರೀಕರಿಸಿದ ಬಿಎಲ್ ಸಂತೋಷ್.!
ಸಿದ್ದು ತಮ್ಮ ಸಿದ್ಧಾಂತಕ್ಕೆ ತುಂಬಾ ಅಪಾಯಕಾರಿ ಎಂಬುದು ಆರ್ಎಸ್ಎಸ್ ಹಾಗೂ ಸಂಘಪರಿವಾರಕ್ಕೆ ಸರಿಯಾಗಿ ಗೊತ್ತಿದೆ. ಹಾಗಾಗಿ, ಕರ್ನಾಟಕದಲ್ಲಿ ಯಾವುದೇ ರಾಜಕಾರಣಿ ಮೇಲೆ ನಡೆಯದಷ್ಟು ಪ್ರಮಾಣದಲ್ಲಿ ಸಿದ್ಧು ವಿರುದ್ಧ ಬಿಜೆಪಿ ಐಟಿಸೆಲ್ ಅಪಪ್ರಚಾರ ನಡೆಸುತ್ತಿದೆ. ಸಿದ್ಧು ಸೋಲಿಗೆ ಹೆಚ್ಡಿಕೆಗೆ ಇರುವ ಬಯಕೆಯಂತೆಯೇ ಸಂಘಪರಿವಾರ ಕೂಡಾ ಸಿದ್ದು ಸೋಲಿಗೆ ಕಾಯುತ್ತಿದೆ. ಹಾಗಾಗಿಯೇ, ಈ ಬಾರಿ ಬಿಎಲ್ ಸಂತೋಷ್ ಕೋಲಾರಕ್ಕೆ ಬಂದು ಹೋಗಿದ್ದಾರೆ.
ಬಿಎಲ್ ಸಂತೋಷ್ ಮಾಧ್ಯಮಗಳು ಬಿಂಬಿಸಿದಷ್ಟು ಪ್ರಭಾವಿ ನಾಯಕನಲ್ಲದಿದ್ದರೂ ಕಟ್ಟಾ ಆರ್ಎಸ್ಎಸ್ ವಾದಿಗಳ ಮೇಲೆ ದೊಡ್ಡ ಹಿಡಿತವನ್ನೇ ಹೊಂದಿದ್ದಾರೆ ಎನ್ನಲಾಗಿದೆ. ಶುಕ್ರವಾರ ಕೋಲಾರಕ್ಕೆ ಭೇಟಿ ನೀಡಿದ್ದ ಬಿ.ಎಲ್ ಸಂತೋಷ್, ಬಿಜೆಪಿ ಆರ್ ಎಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಪ್ರಾಥಮಿಕ ವರದಿ ಪಡೆದಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯರನ್ನು ಒಂಟಿಯಾಗಿ ಸೋಲಿಸಲು ಬಿಜೆಪಿಗೆ ಸಾಧ್ಯವಿಲ್ಲದಿದ್ದರೂ ಜೆಡಿಎಸ್ ಜೊತೆ ಸೇರಿ ಸಿದ್ದುರನ್ನು ಸೋಲಿಸುವುದು ಅಸಾಧ್ಯವೇನಲ್ಲ.
2018ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಶೇ.46ರಷ್ಟು ಮತಗಳನ್ನು ಪಡೆದು ಜಯಗಳಿಸಿದ್ದರೆ, 2013ರಲ್ಲಿ ಶೇ.30.8ರಷ್ಟು ಮತ ಗಳಿಸಿತ್ತು. ವರ್ತೂರು ಪ್ರಕಾಶ್ ಒಂದು ಸಲ ಸ್ವತಂತ್ರರಾಗಿ ಗೆದ್ದು, 2018 ರಲ್ಲಿ 35 ಸಾವಿರ ಮತಗಳನ್ನು ಗೆದ್ದವರು. ಅವರೂ ಜೆಡಿಎಸ್ ಜಂಟಿಯಾಗಿ ಸಿದ್ದು ವಿರುದ್ಧ ಕಣಕ್ಕಿಳಿದರೆ ಕಾಂಗ್ರೆಸ್ ಸುಗಮ ಸಂಚಾರಕ್ಕೆ ಮುಳ್ಳಾಗುವುದಂತೂ ಖಚಿತ.!