ಕರ್ನಾಟಕದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 216 ರನ್ ಗಳ ಕಠಿಣ ಗುರಿ ಒಡ್ಡಿದೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 215 ರನ್ ಪೇರಿಸಿತು.

ರನ್ ಬರ ಎದುರಿಸುತ್ತಿರುವ ಋತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರಿಂದ 36 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಉತ್ತಪ್ಪ ಮತ್ತು ಶಿವಂ ನೆರವಾದರು.
ಉತ್ತಪ್ಪ ಮತ್ತು ದುಬೆ 3ನೇ ವಿಕೆಟ್ ಗೆ 170 ರನ್ ಜೊತೆಯಾಟ ನಿಭಾಯಿಸಿದರು. ಉತ್ತಪ್ಪ 50 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್ ಸಿಡಿಸಿ 89 ರನ್ ಬಾರಿಸಿ ಔಟಾದರೆ, ಶಿವಂ ದುಬೆ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 95 ರನ್ ಗಳಿಸಿ ಔಟಾಗದೇ ಉಳಿದರು.