ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಳವಾಗಿದೆ. ಮಂಗಳವಾರ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾತನಾಡಿದ್ದ ಮಂಡ್ಯ DHO ಡಾ ಮೋಹನ್, 75 ವರ್ಷದ ವೃದ್ದನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಂಡ್ಯ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಬಂದಿದ್ದ ವೃದ್ದನನ್ನು ತಪಾಸಣೆ ಮಾಡಿದಾಗ ಕೋವಿಡ್ 19, ಪಾಸಿಟಿವ್ ಬಂದಿದ್ದು, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದೇವೆ ಎಂದಿದ್ದರು. ವೃದ್ಧನ ಸಂಪರ್ಕದಲ್ಲಿದ್ದ ಮನೆಯ ನಾಲ್ವರಿಗೂ ಕೊರೊನಾ ಪರೀಕ್ಷೆ ಮಾಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. ನಾಲ್ಕು ತಿಂಗಳ ನಂತರ ಮೊದಲ ಬಾರಿಗೆ ಕೋವಿಡ್ ಕಾಣಿಸಿಕೊಂಡಿದೆ ಎಂದಿದ್ದರು.
ಚಾಮರಾಜಪೇಟೆಯಲ್ಲಿ ಬುಧವಾರ ಕೋವಿಡ್ಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಮೃತ ವ್ಯಕ್ತಿ 10 ಜನರ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. 4 ಮಂದಿ ಪ್ರೈಮರಿ ಕಾಂಟಾಕ್ಟ್ ಆಗಿದ್ದು ಉಳಿದ 6 ಮಂದಿಗೆ ಸೆಕೆಂಡರಿ ಕಾಂಟಾಕ್ಟ್ ಎಂದು ಗುರುತಿಸಲಾಗಿದೆ. ಎಲ್ಲರನ್ನೂ ಹೋಂ ಐಸೋಲೇಷನ್ ಮಾಡಿದ್ದಾರೆ ಆರೋಗ್ಯಾಧಿಕಾರಿಗಳು. 7 ದಿನದವರೆಗೂ ಹೋಂ ಐಸೋಲೇಷನ್ ಮಾಡಿದ್ದು, ಅಕ್ಕಪಕ್ಕದ ನಿವಾಸಿಗಳನ್ನು ಕೂಡಾ ಪರಿಕ್ಷೆ ನಡೆಸಿದ್ದಾರೆ ಆರೋಗ್ಯ ಸಿಬ್ಬಂದಿ.
ಚಿಕ್ಕಮಗಳೂರಲ್ಲೂ ಕೊರೊನಾ ಆತಂಕ ಶುರುವಾಗಿದೆ. ಮಂಗಳವಾರ ಟೆಸ್ಟ್ ಮಾಡಿಸಿಕೊಂಡ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮತ್ತೊಮ್ಮೆ ಇಬ್ಬರ ಕೋವಿಡ್ ಟೆಸ್ಟ್ಗಾಗಿ ಸ್ಯಾಂಪಲ್ ಸಂಗ್ರಹಿಸಲಾಗಿದೆ. ನಿನ್ನೆ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡಿದ್ದ ಇಬ್ಬರಿಗೂ ಪಾಸಿಟಿವ್ ಬಂದಿದ್ದು, ಮತ್ತೊಮ್ಮೆ ಪರೀಕ್ಷೆಗೂ ಮುಂದಾಗಿದ್ದಾರೆ. ಲ್ಯಾಬ್ ಫಲಿತಾಂಶ ಬಂದ ಬಳಿಕ ಅಧಿಕಾರಿಗಳು ಈ ಬಗ್ಗೆ ಖಚಿತ ಪಡಿಸಲಿದ್ದಾರೆ ಎನ್ನಲಾಗಿದೆ. ಆದರೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ ಒಟ್ಟು 92 ಕೋವಿಡ್ ಪ್ರಕರಣಗಳು ಇದ್ದು, ಇಂದು ಒಂದೇ ದಿನ 20 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಇಂದು 19 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. 359 ಜನರಿಗೆ ನಗರದಲ್ಲಿ ಕೋವಿಡ್ ಪರೀಕ್ಷೆ ಮಾಡಿದ್ದು, ಅದರಲ್ಲಿ 19 ಜನರಿಗೆ ಪಾಸಿಟಿವ್ ಬಂದಿದೆ. ರಾಜ್ಯದ ಕೊರೊನಾ ಪಾಸಿಟಿವ್ ದರ ಶೇಕಡ 2.47 ರಷ್ಟು ಆಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ವರದಿಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಿಪೋರ್ಟ್ ಬಿಡುಗಡೆ ಮಾಡಿದ್ದು, ಮತ್ತೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ..