ಬೆಂಗಳೂರು: ಸಿಲಿಕಾನ್ ಸಿಟಿಯ ಹಿರಿಯ ಸಾಫ್ಟ್ವೇರ್ ಇಂಜಿನಿಯರ್ ಮಹಿಳೆ ಸೈಬರ್ ವಂಚನೆ ಬಲೆಗೆ ಬಿದ್ದಿದ್ದು, ಬರೋಬ್ಬರಿ 31.83 ಕೋಟಿ ಹಣ ಕಳೆದುಕೊಂಡಿದ್ದಾರೆ. ಇದು ದೇಶದಲ್ಲಿ ಅತಿದೊಡ್ಡ ಸೈಬರ್ ವಂಚನೆ ಆಗಿದೆ.

2024ರ ಸೆಪ್ಟೆಂಬರ್ 15ರಂದು ಮಹಿಳೆಗೆ ಕರೆ ಮಾಡಿದ್ದ ಅಮಾಮಿಕ ವ್ಯಕ್ತಿ, ತಾನು ಡಿಎಚ್ಎಲ್ ಕೊರಿಯರ್ ಸರ್ವಿಸ್ನಿಂದ ಕರೆ ಮಾಡಿದ್ದಾಗಿ ಹೇಳಿಕೊಂಡಿದ್ದ. ಬಳಿಕ ಮುಂಬೈನ ಅಂಧೇರಿಯ ಡಿಎಚ್ಎಲ್ ಕೇಂದ್ರದಿಂದ ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್ ನಲ್ಲಿ ಮೂರು ಕ್ರೆಡಿಟ್ ಕಾರ್ಡ್, ನಾಲ್ಕು ಪಾಸ್ಪೋರ್ಟ್ ಮತ್ತು ಎಂಡಿಎಂಎ ಡ್ರಗ್ಸ್ ಇದೆ ಎಂದಿದ್ದ. ಈ ವೇಳೆ ಮಹಿಳೆ ಬೆಂಗಳೂರಿನಲ್ಲಿ ತಾನಹ ವಾಸ ಮಾಡುತ್ತಿರುವ ಕಾರಣ ತನಗೂ ಪಾರ್ಸೆಲ್ಗೂ ಸಂಬಂಧವಿಲ್ಲ ಎಂದಿದ್ದರು.

ಆದರೆ ಪಾರ್ಸಲ್ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇರುವ ಕಾರಣ ಇದು ಸೈಬರ್ ಅಪರಾಧವಾಗಿದ್ದು, ಸೈಬರ್ ಸೆಲ್ಗೆ ವರದಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದಕ್ಕೆ ಇನ್ನೋರ್ವ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ಈ ವಿಚಾರವನ್ನು ತಮ್ಮ ಕುಟುಂಬದವರಿಗೆ ತಿಳಿಸಿದರೆ, ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿದ್ದ. ಈ ವೇಳೆ ಮಗನ ಮದುವೆ ಹತ್ತಿರವಿದ್ದ ಕಾರಣ ಯಾರಿಗೂ ಹೇಳಿರಲಿಲ್ಲ.

ಬಳಿಕ 2024ರ ಸೆಪ್ಟೆಂಬರ್ 23ರಂದು ವಿಡಿಯೊ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಒಂದು ವಾರ ಸಂತ್ರಸ್ತೆಯ ಡಿಜಿಟಲ್ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದ. ಆರ್ಬಿಐನ ಫೈನಾನ್ಸಿಯಲ್ ಇಂಟೆಲಿಜೆನ್ಸ್ ಯೂನಿಟ್ಗೆ (ಎಫ್ಐಯು) ತಮ್ಮ ಆಸ್ತಿಯ ವಿವರಗಳನ್ನು ಘೋಷಿಸಬೇಕು.
ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬೇಕಿರುವ ಕಾರಣ ಹಣ ವರ್ಗಾವಣೆ ಮಾಡಬೇಕು. ಪರಿಶೀಲನೆ ಬಳಿಕ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿದ್ದ. ಆತನ ಮಾತು ನಂಬಿ, ಸಂತ್ರಸ್ತೆ ತಮ್ಮ ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣವನ್ನು ವಂಚಕರ ಸುಮಾರು 60 ಬ್ಯಾಂಕ್ ಖಾತೆಗಳಿಗೆ 187 ಬಾರಿ 31.83 ಕೋಟಿ ರೂ. ವರ್ಗಾಯಿಸಿದ್ದರು.

2024ರ ಡಿಸೆಂಬರ್ 6ರಂದು ದೂರುದಾರ ಮಹಿಳೆಯ ಮಗನ ನಿಶ್ಚಿತಾರ್ಥ ನೆರವೇರಿತು. ಆದರೆ ವಂಚಕರು ಸಂತ್ರಸ್ತೆಗೆ ಹಣ ವಾಪಸ್ ನೀಡಲಿಲ್ಲ. ಮಾರ್ಚ್ 26ರಂದು ತಮ್ಮ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದರು.
ಈ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಸಂತ್ರಸ್ತೆಗೆ ಕರೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು. ಮಗನ ಮದುವೆ, ವಿದೇಶ ಪ್ರಯಾಣ ಹಾಗೂ ಅನಾರೋಗ್ಯದ ಕಾರಣ ಸಂತ್ರಸ್ತೆ ಎರಡು ದಿನದ ಹಿಂದೆ ವಂಚನೆ ಬಗ್ಗೆ ಪೂರ್ವ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.












