ನಾ ಖಾವೂಂಗಾ ನಾ ಖಾನೇ ದೂಂಗಾ’’ ಎಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ, ಇಂದು ಚಿಕ್ಕಬಳ್ಳಾಪುರಕ್ಕೆ ಬಂದು ನೀವು ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಅವರಿಗೆ ಕೊರೊನಾ ಕಾಲದಲ್ಲಿ ಎಷ್ಟು ನುಂಗಿದ್ದೀರಿ ಎಂದು ಕೇಳಿದ್ರಾ?
ಕೊರೊನಾ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಡಾ.ಸುಧಾಕರ್ 40,000 ಕೋಟಿ ರೂಪಾಯಿ ನುಂಗಿದ್ದಾರೆ ಎಂದು ಆರೋಪಿಸಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್. ಅಷ್ಟೊಂದು ದುಡ್ಡನ್ನು ಡಾ.ಸುಧಾಕರ್ ಒಬ್ಬರೇ ನುಂಗಿದ್ರಾ? ಒಂದು ಪಾಲು ಮೇಲ್ಗಡೆಗೂ ಹೋಗಿತ್ತಾ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

ಚಾಮರಾಜ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾಯಕ ಜನ ಆಕ್ಷಿಜನ್ ಇಲ್ಲದೆ ನರಳಾಡುತ್ತಿರುವಾಗ ಆರೋಗ್ಯ ಸಚಿವ ಡಾ.ಸುಧಾಕರ್ ನಾಪತ್ತೆಯಾಗಿದ್ದರು. ಆಕ್ಸಿಜನ್ ಇಲ್ಲದೆ ಸಾವಿಗೀಡಾದ 36 ಮಂದಿಯ ಕುಟುಂಬ ರೋಧಿಸುತ್ತಿದ್ದರೆ, ಡಾ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ಕೂತು ‘’ಸತ್ತವರು ಎರಡೇ ಮಂದಿ’’ ಎಂಬ ಉಡಾಫೆಯಿಂದ ಹೇಳಿಕೆ ನೀಡಿ ರಾಜ್ಯದ ಜನರಿಂದ ಛೀಮಾರಿಗೀಡಾಗಿದ್ದರು. ಈ ಸಾಧನೆಯನ್ನೂ ಅವರ ಪ್ರಚಾರದ ಭಾಷಣದಲ್ಲಿ ಹೇಳಬೇಕಾಗಿತ್ತಲ್ಲವೇ?
ಆರೋಗ್ಯ ಸಚಿವರ ಬ್ರಹ್ಮಾಂಡ ಭ್ರಷ್ಟಾಚಾರದ ಕತೆ ಕೇಳಿ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು. 45 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಮಾಸ್ಕ್ನ್ನು 485 ರೂ. ಗೆ ಖರೀದಿಸಿದ್ದರು. ತಮಿಳುನಾಡು ಸರ್ಕಾರ ವೆಂಟಿಲೇಟರ್ ಒಂದಕ್ಕೆ ರೂ. 4.78 ಲಕ್ಷ ನೀಡಿದ್ದರೆ ಬಿಜೆಪಿ ಸರ್ಕಾರ 15 ರಿಂದ 18 ಲಕ್ಷ ರೂ. ನೀಡಿ ಖರೀದಿಸಿದ್ದರು. 80 ರೂ. ಸ್ಯಾನಿಟೈಸರ್ಗೆ 250 ರೂ. ಕೊಟ್ಟು ಖರೀದಿಸಿದ್ದರು. ದಾಖಲೆಗಳ ಸಹಿತ ಈ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದದ್ದು ನೀವು ಗಮನಿಸಿರಲಿಲ್ಲವೇ?

ಬೆಡ್ ಕೊರತೆಯ ಕಾರಣ ನೀಡಿ 30 ಸಾವಿರ ಬೆಡ್ ಗಳನ್ನು ನೂರು ದಿನಗಳಿಗಾಗಿ ಒಟ್ಟು 240 ಕೋಟಿ ರೂಪಾಯಿ ಬಾಡಿಗೆ ನೀಡಿ ತರಿಸಿಕೊಂಡಿದ್ದರು. ಬಾಡಿಗೆಗೆ ಪಡೆಯುವ ಬದಲಿಗೆ ಹೊಸ ಬೆಡ್ ಗಳನ್ನು ಖರೀದಿಸಿದ್ದರೆ 21 ಕೋಟಿ ರೂಪಾಯಿಯಷ್ಟೇ ಖರ್ಚಾಗುತ್ತಿತ್ತು. 240 ಕೋಟಿ ರೂಪಾಯಿ ಬೆಡ್ ಬಾಡಿಗೆಯಲ್ಲಿ ಎಷ್ಟು ಪಾಲು ಯಾರ ಜೇಬಿಗೆ ಹೋಗಿತ್ತು ಎಂದು ಡಾ.ಸುಧಾಕರ್ ಅವರನ್ನು ಕೇಳಬೇಕಿತ್ತಲ್ಲಾ?
ವೈದ್ಯರು ಇಲ್ಲದೆ, ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ, ಔಷಧಿ ಇಲ್ಲದೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ನರಳಾಡುತ್ತಿದ್ದಾಗ ನೀವು ಕೊರೊನಾ ಓಡಿಸಲು ತಟ್ಟೆ ಬಡಿಯಲು ಹೇಳಿದಿರಿ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಮ್ಮ ಐಷಾರಾಮಿ ಮನೆಯ ಈಜುಕೊಳದಲ್ಲಿ ಮಕ್ಕಳೊಡನೆ ನೀರಾಟ ಆಡುತ್ತಿದ್ದರು. ಇಂತಹ ಅಸಮರ್ಥ, ಭ್ರಷ್ಟ ಮಾಜಿ ಸಚಿವನ ಪರವಾಗಿ ನೀವು ಪ್ರಚಾರಕ್ಕೆ ಬಂದು ಹೋದಿರಿ ಎಂದರೆ ಅವರ ಎಲ್ಲ ಕುಕೃತ್ಯಗಳಿಗೆ ನಿಮ್ಮ ಅಖಂಡ ಆಶೀರ್ವಾದದ ಬಲ ಇದೆ ಎಂದು ತಿಳಿದುಕೊಳ್ಳಬಹುದೇ?

ನಿಮ್ಮ ಪಕ್ಷದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಪರಸ್ಪರ ಷಾಮೀಲಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಬೆಡ್ ದಂಧೆ ಮಾಡಿದ್ದರು. ಡಿ.ಜೆ ಹಳ್ಳಿಯ ನಿಮ್ಮ ಪಕ್ಷದ ನಾಯಕರು ಕೊರೊನಾ ವೈರಸ್ ನಲ್ಲಿ ಹಿಂದೂ-ಮುಸ್ಲಿಮ್ ಧರ್ಮಗಳ ತಳಿಗಳನ್ನು ಹುಡುಕಿ ಕೋಮುಗಲಭೆಗೆ ಕಿಡಿ ಹಾರಿಸಿದರು. ಕರ್ನಾಟಕದಲ್ಲಿ ಹೆಚ್ಚು ಜನರು ಸಾವಿಗೀಡಾದದ್ದು ಕೋರೊನಾ ವೈರಸ್ ನಿಂದ ಅಲ್ಲ, ಡಾ.ಸುಧಾಕರ್ ಅವರ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಿಂದ.
ಕೊರೊನಾ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿ ಜನರ ಮುಂದಿಟ್ಟಾಗ ರೋಷಾವೇಶದಿಂದ ಡಾ.ಸುಧಾಕರ್ ಅವರು ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿ ನೇಣು ಹಾಕ್ಕೋತೀನಿ ಎಂದು ಸವಾಲು ಹಾಕಿದ್ದರು. ಕೊರೊನಾ ಭ್ರಷ್ಟಾಚಾರದ ತನಿಖೆಗಾಗಿಯೇ ನಿವೃತ್ತಿ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ಮಾಡಿದ್ದೆವು. ನೇಣು ಹಾಕ್ಕೊಳೋದೇನು ಬೇಡ, ಈಗ ಅವರು ಜೈಲಿಗೆ ಹೋಗೋಕೆ ರೆಡಿಯಾಗಿದ್ದರೆ ಸಾಕು ಎಂದು ಬಿಜೆಪಿ ವಿರುದ್ಧ ಸಿಎಂ ಕೆಂಡ ಉಗುಳಿದ್ದಾರೆ.