ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜೂನ್ ಮೂರನೇ ವಾರದಿಂದ ಅಕ್ಟೋಬರ್ ವರೆಗೂ ಸೋಂಕು ಹೆಚ್ಚಳವಾಗಬಹುದು ಎಂದು ಕಾನ್ಪುರ ಐಐಟಿ ವರದಿ ನೀಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಮೂರನೇ ವಾರದಿಂದ ಅಕ್ಟೋಬರ್ ವರೆಗೂ ಕರೋನಾ ಸೋಂಕು ಹೆಚ್ಚಳವಾಗಬಹುದು ಎಂದು ಕಾನ್ಪುರ ಐಐಟಿ ವರದಿ ನೀಡಿದೆ. ನಾವೂ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಬರುತ್ತಿರುವ ಕೋವಿಡ್ ಪ್ರಭೇದ ಸೌಮ್ಯ ಲಕ್ಷಣ ಇರುವುದರಿಂದ ಜನ ಸಾಮಾನ್ಯರು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ಎರಡು ಶಾಲೆಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಘೊಷಿಸಿಲಾಗಿದೆ. ಕರೋನಾ ನಿಯಂತ್ರಣಕ್ಕೆ ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಚೆಕ್ ಮಾಡಲು ಸೂಚಿಸಿದ್ದೇವೆ. ಶಾಲೆಗಳಲ್ಲಿ ಎಲ್ಲಾ ನಿಯಮ ಪಾಲನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮೂರನೇ ಅಲೆ ಬಂದುಹೋಗಿದೆ. ಮೂರನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿ ಕಂಡು ಬಂದಿಲ್ಲ . ಲಸಿಕೆಯ ಕಾರಣದಿಂದ ಕೋವಿಡ್ ಅಷ್ಟೊಂದು ಹರಡಲಿಲ್ಲ . ನಮ್ಮ ಸರ್ಕಾರ ಗರಿಷ್ಠ ಲಸಿಕೆ ನೀಡಿದೆ. ನಮ್ಮ ರಾಜ್ಯ ದಲ್ಲಿ ಎರಡು ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರುವುದಿಲ್ಲ ಎಂದಲ್ಲ , ಆದರೆ ಸಾವು ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆಯಿದೆ. ಮುಂದಿನ ಅಲೆ ಬರುವ ತನಕ ಕಾಯುವುದು ಬೇಡ ಲಸಿಕೆ ಲಭ್ಯವಿದ್ದಾಗ ತೆಗೆದುಕೊಳ್ಳಿ ಎಂದರು.
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ ಸುಧಾಕರ್, ಕಾಂಗ್ರೆಸ್ ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅದಕ್ಕೆ ಅವರೇ ಹೊಣೆ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ನವರೇ ನೈತಿಕ ಹೊಣೆ ಹೊರಬೇಕು. ಅವರು ಪ್ರತಿಭಟನೆ ಮಾಡಿದೋದಾದರೆ ಫ್ರೀಡಂ ಪಾರ್ಕ್ ನಲ್ಲಿ ಮಾಡಲಿ. ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಇವತ್ತು ರಾಜಭವನ ಚಲೋ ಮಾಡ್ತಿದ್ದಾರೆ. ಇವತ್ತಿನ ಹೋರಾಟಕ್ಕೆ ಕೊವೀಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿ ಗಳ ಜೊತೆ ಮಾತಾಡ್ತೇನೆ ಎಂದ ಸುಧಾಕರ್ ಹೇಳಿದರು.






