ಕರೋನ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಶಾಲೆಗಳ ಭೌತಿಕ ತರಗತಿ ಆರಂಭಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ ನಾಳೆ ಆಗಸ್ಟ್ 15ರಂದು ರಾಜ್ಯದ್ಯಂತ ಎಲ್ಲಾ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯಾರ್ಥಿಗಳಿಲ್ಲದೇ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯಿಲ್ಲದೇ, ಎಲ್ಲಾ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಆಯಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯರ ಉಪಸ್ಥಿತಿಯಲ್ಲಿ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೂ ಆದೇಶಿಸಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಪ್ರತಿ ವರ್ಷ ಆಗಸ್ಟ್ 15ರಂದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದು ಅತ್ಯಂತ ಪ್ರಾಮುಖ್ಯದ ದಿನ ಕೂಡ ಆಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತಂತೆ ಕೇಂದ್ರ ಗೃಹ ಮಂತ್ರಾಲಯ ತಿಳಿಸಿರುವಂತೆ ಶಾಲೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರುಸುವುದು, ಸ್ಯಾನಿಟೈಜೇಶನ್ ಮಾಡಿಕೊಳ್ಳುವುದು, ಗುಂಪುಗೂಡುವುದನ್ನು ತಡೆಗಟ್ಟುವುದು ಇತ್ಯಾದಿ ಅಂಶಗಳ ಜೊತೆಗೆ ಕೋವಿಡ್-19ರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲು ತಿಳಿಸಿರುತ್ತಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಶಾಲೆಗಳು ಭೌತಿಕವಾಗಿ ಪ್ರಾರಂಭಿಸಲು ಅನುಮತಿ ಇಲ್ಲವಾದ್ದರಿಂದ, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಆದರೆ, ಸ್ವಾತಂತ್ರ್ಯ ದಿನಾಚರಣೆಯ ಪೂರ್ವದಲ್ಲಿ ಹಾಗೂ ನಂತರದ ಶಾಲಾ ಮಕ್ಕಳಿಗೆ ಸ್ವಾತಂತ್ರ್ಯ ದಿನೋತ್ಸವ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಚರ್ಚೆ, ರಸಪ್ರಶ್ನೆ, ದೇಶಭಕ್ತಿಯ ಕುರಿತಾದ ಪ್ರಬಂಧ ಸ್ಪರ್ಧೆ, ದೇಶಭಕ್ತಿ ಕವನಗಳನ್ನು ರಚಿಸುವ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ಹಮ್ಮಿಕೊಂಡು, ಶಾಲಾ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸ, ಇದರಲ್ಲಿ ಮಹನೀಯರು ನೀಡಿದ ತ್ಯಾಗ ಬಲಿದಾನ ಮುಂತಾದವುಗಳ ಮಹತ್ವವನ್ನು ತಿಳಿಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಆದೇಶಿಸಿದೆ.
ಮುಂದುವರೆದು, ಈ ಬಾರಿ ರಾಜ್ಯಾಧ್ಯಂತ ಎಲ್ಲಾ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಆಯಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಇತರರು ಮಾತ್ರ ಭಾಗವಹಿಸಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಶಿಷ್ಟಾಚಾರದೊಂದಿಗೆ ಆಚರಿಸಲು ತಿಳಿಸಿದೆ. ಆಯಾ ಶಾಲಾ ಮಕ್ಕಳಿಗೆ ಈ ಆಚರಣೆಯ ಛಾಯಾ ಚಿತ್ರಗಳನ್ನು ಲಭ್ಯ ಆನ್ ಲೈನ್ ಮಾಧ್ಯಮಗಳ ಮೂಲಕ ಹಚ್ಚಿಕೊಳ್ಳಲು ಕ್ರಮ ವಹಿಸುವಂತೆಯೂ ತಿಳಿಸಿದೆ.
