
ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಅಬ್ಬರ ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಪ್ರಚಾರದ ಅಬ್ಬರದಲ್ಲಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಆಂತರಿಕ ಸಮೀಕ್ಷೆ ನಡೆಸಿದ್ದು, ಸರ್ಕಾರಕ್ಕೆ ಹಿನ್ನಡೆ ಆತಂಕ ಕಾಣಿಸಿದೆ ಎನ್ನಲಾಗಿದೆ. ಶಿಗ್ಗಾವಿಯಲ್ಲಿ ಹಿಂದೂ – ಮುಸ್ಲಿಂ ಮತಗಳು ಇಬ್ಬಾಗ ಆಗುತ್ತಿದ್ದು ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸುಲಭವಾಗಿ ಗೆಲುವು ದಕ್ಕಿಸಿಕೊಳ್ತಾರೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಪಡೆದುಕೊಂಡಿರುವ ರಿಪೋರ್ಟ್ನಲ್ಲೇ ಬಂದಿದೆ ಎನ್ನಲಾಗಿದೆ.ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಏನೇ ಪ್ರಚಾರ ನಡೆಸಿದರೂ ಸೋಲು ಖಚಿತ ಅನ್ನೋ ಮಾಹಿತಿ ಕಾಂಗ್ರೆಸ್ ಅಂಗಳ ತಲುಪಿದೆ.

ಇನ್ನೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಕಂಟಕ ತರುವ ಆತಂಕ ಸೃಷ್ಟಿಸಿದೆ ವಾಲ್ಮೀಕಿ ಹಗರಣ.ಕಳೆದ ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದ ಸರ್ಕಾರದ ವಿರುದ್ಧ ವಾಲ್ಮೀಕಿ ಜನಾಂಗ ತಿರುಗಿ ಬಿದ್ದಿದೆ ಎಂದು ಆಂತರಿಕ ವರದಿಗಳು ಹೇಳುತ್ತಿರುವುದರಿಂದ ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರು ಇ. ತುಕಾರಾಂ ಸೋಲಿಲ್ಲದ ಸರದಾರ ಅನ್ನೋ ಕಾರಣಕ್ಕೆ ಅವರ ಪತ್ನಿ ಅನ್ನಪೂರ್ಣ ಅವರಿಗೇ ಮಣೆ ಹಾಕಿದ್ದರು. ಆದರೆ ಈ ಬಾರಿ ಸಂಡೂರಲ್ಲಿ ಕೇಸರಿ ಬಾವುಟ ಹಾರುವುದು ಶತಸಿದ್ಧ ಎನ್ನಲಾಗ್ತಿದೆ.
ಇನ್ನೂ ಎಲ್ಲರ ಹಾಟ್ ಫೇವರಿಟ್ ಆಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಕಷ್ಟ ಆಗುವ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ಪ್ರಚಾರಕ್ಕೆ ಹೋಲಿಸಿದರೆ ಜೆಡಿಎಸ್ ಪ್ರಚಾರ ತುಸು ಹೆಚ್ಚಾಗಿಯೇ ಇದೆ. ಕಾಂಗ್ರೆಸ್ ನಾಯಕರು ಏನೇ ತಂತ್ರಗಾರಿಕೆ ಮಾಡಿದರೂ, ಎಷ್ಟೇ ಪ್ರಚೋದನೆ ಮಾಡಿದರೂ ಕುಮಾರಸ್ವಾಮಿ ತಿರುಗಿ ಬೀಳುತ್ತಿಲ್ಲ. ಮನಸೋ ಇಚ್ಚೆ ಮಾತನಾಡುತ್ತಿಲ್ಲ. ಬಹಳ ಗೌರವ ಪೂರ್ಣವಾಗಿ ಮಾತನಾಡುತ್ತಿರುವುದು, ಅಷ್ಟೇ ಅಲ್ಲದೆ ಈಗಾಗಲೇ ಎರಡು ಬಾರಿ ಸೋತಿರುವುದು ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಚೇತೋಹಾರಿ ಎನ್ನುವ ಮಾತುಗಳು ಇದ್ದರೂ ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಕಡೇ ದಿನದಲ್ಲಿ ಆಟವಾಡ್ತಾರೆ. ಆ ರಾಜಕೀಯ ಆಟದಲ್ಲಿ ಸೋಲುಗೆಲುವು ನಿರ್ಧಾರ ಆಗುತ್ತೆ ಅನ್ನೋ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲೂ ಡಿ.ಕೆ ಸುರೇಶ್ ಕೂಪನ್ಗಳನ್ನು ಹಂಚಿಕೆ ಮಾಡಿದ್ದರು. ಅದಕ್ಕೂ ಮೊದಲು ವಿಧಾನಸಭಾ ಚುನಾವಣೆಯಲ್ಲೂ ಕೂಪನ್ಗಳನ್ನು ಹಂಚಿ ಜನರಿಗೆ ಮೋಸ ಮಾಡಲಾಗಿತ್ತು. ಅದೇ ಕಾರಣಕ್ಕೆ ಜನರು ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮುಟ್ಟಿ ನೋಡುವಂತೆ ಬಾರಿಸಿದ್ದರು.ಈಗಲೂ ಮತ್ತೆ ಕಾಂಗ್ರೆಸ್ ಕೂಪನ್ ಹಂಚುವ ಕೆಲಸಕ್ಕೆ ಮುಂದಾಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆದರೆ ಜನರು ಯೋಗೇಶ್ವರ್ ಅವರನ್ನು ಹೇಗೆ ಸ್ವೀಕರಿಸ್ತಾರೆ ಅನ್ನೋದ್ರ ಮೇಲೆ ಫಲಿತಾಂಶ ನಿರ್ಧಾರ ಆಗಲಿದೆ. ಈಗಾಗಲೇ ಯೋಗೇಶ್ವರ್ ಸಾಕಷ್ಟು ಪಕ್ಷಗಳಿಗೆ ಹೋಗಿ ಚುನಾವಣೆ ಮಾಡಿದ್ದು, ಕುಮಾರಸ್ವಾಮಿ ಕುಟುಂಬದ ಎದುರು ರಾಜಕೀಯ ಅಷ್ಟು ಸುಲಭ ಅಲ್ಲ ಎನ್ನಲಾಗ್ತಿದೆ. ಒಂದು ವೇಳೆ ಯೋಗೇಶ್ವರ್ ಗೆಲುವು ಸಾಧಿಸಿದರೂ ಕೆಲವೇ ಕೆಲವು ವೋಟುಗಳಿಂದ ಸಾಧ್ಯ ಅಷ್ಟೆ ಎನ್ನುವ ಮಾತು ಕಾಂಗ್ರೆಸ್ ಸರ್ಕಾರ ಪಡೆದಿರುವ ಇಂಟಲಿಜೆನ್ಸ್ ರಿಪೋರ್ಟ್ ಬಯಲು ಮಾಡಿದೆ ಎನ್ನಲಾಗಿದೆ.