ಕಾಂಗ್ರೆಸ್ನ ವಿರುದ್ಧ ಮಮತ ಬ್ಯಾನರ್ಜಿ ಕಿಡಿಕಾರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜತೆಗಿನ ನೆಂಟಸ್ಥಿಕೆಯನ್ನು ಬಿಡಲು ಕಾಂಗ್ರೆಸ್ ನವರಿಗೆ ಮನಸ್ಸಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಯುಪಿಎ ಎಲ್ಲಿದೆ ಎಂದು ನಿಮ್ಮ (ಕಾಂಗ್ರೆಸ್) ಅಸ್ತಿತ್ವದ ಪ್ರಶ್ನೆ ಮಾಡಿದ್ದ ಮಮತಾ ಬ್ಯಾನರ್ಜಿಯವರು ಈ ಹಿಂದೆ ಸೋನಿಯಾ ಗಾಂಧಿಯವರ ಬಗ್ಗೆಯೂ ಕೊಂಕು ಮಾತನಾಡಿದ್ದರು.
ಆದರೂ ಕಾಂಗ್ರೆಸ್ನವರಿಗೆ ಟಿಎಂಸಿ ಜತೆಗಿನ ನೆಂಟಸ್ಥಿಕೆ ಬಿಡಲು ಮನಸಿಲ್ಲ. ಮಲ್ಲಿಕಾರ್ಜುನ ಖರ್ಗೆಯವರೇ, ಜೀವನದಲ್ಲಿ ಕಿಂಚಿತ್ತಾದರೂ ಸ್ವಾಭಿಮಾನ ಬೇಕಲ್ಲವೇ’ ಎಂದು ಪ್ರಶ್ನಿಸಿದೆ.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ್ದರು. ಈ ಭೇಟಿ ವೇಳೆ ಮಮತಾ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರಲಿಲ್ಲ. ಈ ಕುರಿತು ಪ್ರಶ್ನೆಯಲ್ಲಿ ಕೇಳಿದ ಪತ್ರಕರ್ತರಿಗೆ ಉತ್ತರಿಸಿದ ಮಮತ, ‘ರಾಷ್ಟ್ರದಲ್ಲಿ ಯುಪಿಎ ಎಲ್ಲಿದೆ. ದೆಹಲಿಗೆ ಬಂದಾಗೆಲ್ಲ ಸೋನಿಯಾ ಅವರನ್ನು ಭೇಟಿ ಮಾಡಬೇಕು ಎಂದು ಸಂವಿಧಾನಿಕ ನಿಯಮವೇನಿಲ್ಲ. ಆದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಮಾನ ಮನಸ್ಕ ಪ್ರತಿಪಕ್ಷಗಳನ್ನು ಒಟ್ಟುಗೂಡಲು ಕರೆ ನೀಡಲಾಗಿದೆ’ ಎಂದು ಹೇಳಿದ್ದರು.
ಇತ್ತಿಚೆಗೆ ಟಿಎಂಸಿ ಮುಖವಾಣಿ ಜಾಗೋ ಬಾಂಗ್ಲಾ’ ಪತ್ರಿಕೆಯಲ್ಲಿ, ಕಾಂಗ್ರೆಸ್ ಡೀಪ್ ಪ್ರೀಜರ್ ನಲ್ಲಿದೆ ಮತ್ತು ಬಿಜೆಪಿ ಎದುರಿಸಲು ವಿರೋಧ ಪಕ್ಷಗಳು ಪ್ರಬಲವಾದ ಮುಖ್ಯಸ್ಥರನ್ನು ನೋಡುತ್ತಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾತ್ರ ಎಂದು ವರದಿ ಮಾಡಿದ್ದರು.