ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಲು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅಂದರೆ ಕಾಂಗ್ರೆಸ್ ಸರ್ಕಾರ ಅಕ್ರಮವನ್ನು ಒಪ್ಪಿಕೊಂಡಿದೆ. ಅಕ್ರಮದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಆದರೆ ಈ ತನಿಖಾ ತಂಡ ಓರ್ವ ಸಚಿವರನ್ನು ಪ್ರಶ್ನೆ ಮಾಡಲು ಸಾಧ್ಯವೇ..? ಓರ್ವ ಸಚಿವರನ್ನು ಕರೆದು ಎಸ್ಐಟಿ ತನಿಖೆ ಮಾಡುತ್ತದೆ ಎನ್ನುವುದಾರೆ, ಸಚಿವರಿಂದ ಸತ್ಯ ಕಕ್ಕಿಸಲು ಸಾಧ್ಯವಿದೆಯೇ..? 187 ಕೋಟಿ ಸರ್ಕಾರದ ಹಣ ಅಂದರೆ ಸಾರ್ವಜನಿಕರ ತೆರಿಗೆ ಪಾಲು. ಅದೂ ಅಲ್ಲದೆ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ಡೆತ್ನೋಟ್ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಈಗ ಕ್ರಮ ತೆಗೆದುಕೊಳ್ಳಲು ಹಿಂದು ಮುಂದು ನೋಡ್ತಿರೋದ್ಯಾಕೆ..?
![](https://pratidhvani.com/wp-content/uploads/2024/05/download-3.jpg)
ಭಾರತೀಯ ಜನತಾ ಪಾರ್ಟಿ ಈ ಬಗ್ಗೆ ಗಟ್ಟಿ ದನಿಯಲ್ಲಿ ಹೋರಾಟ ರೂಪಿಸುವಲ್ಲಿ ಎಡವಿರಬಹುದು. ರಾಜಕೀಯ ಪ್ರಬುದ್ಧತೆಯ ಕೊರತೆಯೂ ಇರಬಹುದು. ಆದರೆ ಸದಾ ಕಾಲ ಬಡವರ ಬಗ್ಗೆ ಕಾಳಜಿ ತೋರಿಸುವ ಸಿಎಂ ಸಿದ್ದರಾಮಯ್ಯ, ಪರಿಶಿಷ್ಟ ಸಮುದಾಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದವರ ಪರವಾಗಿ ಯಾಕೆ ನಿಂತಿದ್ದಾರೆ. ಸರ್ಕಾರ ಹಾಗು ಸಚಿವರು ಒಪ್ಪಿರುವಂತೆ ಸುಮಾರು 90 ಕೋಟಿ ಸರ್ಕಾರ ಅಕೌಂಟ್ನಿಂದ ಅಕ್ರಮವಾಗಿ ವರ್ಗಾವಣೆ ನಡೆದಿದೆ ಎಂದಿದ್ದರು. ಕೋಟಿ ಲೆಕ್ಕ ಬೇಡ, ಒಂದೇ ರೂಪಾಯಿ ಆಗಿದ್ದರೂ ಸರಿ ಅಕ್ರಮ ನಡೆದಿದೆ ಎಂದಾದ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಅಡ್ಡಿಯಾಗಿರುವುದು ಏನು..? ಸಿಎಂ ಸಿದ್ದರಾಮಯ್ಯನವರೇ ಇದೇನಾ ಬಡವರ ಬಗ್ಗೆ ನಿಮ್ಮ ಕಾಳಜಿ..?
![](https://pratidhvani.com/wp-content/uploads/2024/05/IMG_8042.jpeg)
ಎಸ್ಐಟಿ ರಚನೆಯನ್ನು ಭಾರತೀಯ ಜನತಾ ಪಾರ್ಟಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರನ್ ಸಾವಿಗೂ ಮುನ್ನ ಬರೆದ ಡೆತ್ ನೋಟ್ನಲ್ಲಿ ಉಲ್ಲೇಖ ಆಗಿರುವಂತೆ ಸ್ವತಃ ಸಚಿವ ಬಿ ನಾಗೇಂದ್ರ ಹೆಸರು ಇರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು. ಆದರೆ ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದರ ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳದೆ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಟೀಕೆ ಮಾಡಿದೆ.
‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಎಸ್ಐಟಿ ರಚನೆ ಮಾಡಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿದೆ. ಈ ಪ್ರಕರಣ ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಹಗರಣ ಆಗಿದೆ. ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ತನಿಖೆಯನ್ನು ಭಾರತೀಯ ಜನತಾ ಪಾರ್ಟಿ ಒಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿದೆ. ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವ ತನಕ ಹಾಗು ಆರೋಪಿತ ಸಚಿವ ಬಿ. ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ನಾವು ಹೋರಾಟ ಮಾಡ್ತೇವೆ ಎಂದಿದ್ದಾರೆ. ಆದರೆ ಪ್ರಕರಣ ನಡೆದು ವಾರ ಆಗ್ತಿದ್ರೂ ಹೋರಾಟದ ಕಾವು ಏರಿಕೆ ಕಂಡಿಲ್ಲ.
![](https://pratidhvani.com/wp-content/uploads/2024/05/download-2-1.jpg)
ಬಿಜೆಪಿ ಒತ್ತಾಯ ಮಾಡಿದೆ ಎನ್ನುವ ಕಾರಣಕ್ಕೆ ಸಿಬಿಐ ತನಿಖೆ ಕೊಡಬೇಕು ಅನ್ನೋದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಆದರೆ ಎಸ್ಐಟಿ ರಚನೆ ಮಾಡಿರುವ ಸರ್ಕಾರ ಅಧಿಕಾರಿಗೆ ಸಾವಿಗೆ ನ್ಯಾಯ ಕೊಡಿಸಬೇಕು. ಅಷ್ಟೇ ಅಲ್ಲದೆ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುವ ಯತ್ನ ಮಾಡಿರುವ ಅಧಿಕಾರಿಗಳು ಹಾಗು ಡೆತ್ನೋಟ್ನಲ್ಲಿ ಉಲ್ಲೇಖ ಆಗಿರುವ ಸಚಿವರ ವಿರುದ್ಧ ತನಿಖೆ ನಡೆಯಬೇಕಿದೆ. ಒಳ್ಳೆ ರೀತಿಯಲ್ಲಿ ತನಿಖೆ ನಡೆಯಬೇಕು ಎನ್ನುವುದಾದರೆ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅದೇ ರೀತಿ ಸಚಿವರು ವಿಚಾರಣೆಗೆ ಒಳಗಾಗಬೇಕು ಅಂದರೆ ಸಚಿವ ಸ್ಥಾನದಿಂದ ಮೊದಲು ಬಿಡುಗಡೆ ಮಾಡಬೇಕಿದೆ. ರಾಜ್ಯದಲ್ಲಿ ಉತ್ತಮ ವಿರೋಧ ಪಕ್ಷ ಇಲ್ಲ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರ ಲಾಭ ಮಾಡಿಕೊಳ್ಳುವುದು ಬಿಡಬೇಕಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಪಡೆದು ತನಿಖೆ ಮಾಡಿಸಿದರೆ ಉತ್ತಮ ಅಲ್ಲವೇ..?
ಕೃಷ್ಣಮಣಿ