2014ರಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತವನ್ನು ಕಾಂಗ್ರೆಸ್ ಮುಕ್ತವಾಗಿಸುವ ಪಣತೊಟ್ಟಿತ್ತು. ಸಾಲು ಸಾಲು ಚುನಾವಣೆಗಳನ್ನು ಗೆದ್ದರೂ, ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸೋಲಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ಬಿಜೆಪಿಯ ರಣತಂತ್ರಕ್ಕೆ ಕಾಂಗ್ರೆಸ್ ರೂಪಿಸಿದ ಪ್ರತಿತಂತ್ರವೇ ಈಗ ಪಕ್ಷಕ್ಕೆ ಮುಳುವಾಗಿದೆ.
ಹಿಂದೆ ಕೇವಲ ಬಿಜೆಪಿ ಮಾತ್ರವೇ ಕಾಂಗ್ರೆಸ್ ಅನ್ನು ನಿರ್ಮೂಲನೆ ಮಾಡುವತ್ತ ತನ್ನ ಚಿತ್ತ ನೆಟ್ಟಿತ್ತು. ಆದರೆ, ಈಗ ಆ ಸಾಲಿಗೆ ಅನೇಕ ಪಕ್ಷಗಳು ಸೇರಿಕೊಂಡಿವೆ. ಬಹುತೇಕ ಪ್ರಾದೇಶಿಕ ಪಕ್ಷಗಳು (ಅವುಗಳಲ್ಲಿ ಕೆಲವೊಂದು ರಾಷ್ಟ್ರೀಯ ಪಕ್ಷಗಳೆಂದು ಕರೆಯಲ್ಪಡುತ್ತವಾದರೂ, ಅವುಗಳ ಕಾರ್ಯವ್ಯಾಪ್ತಿಗೆ ಅನುಗುಣವಾಗಿ ಪ್ರಾದೇಶಿಕ ಪಕ್ಷಗಳೆಂದು ಹೇಳಲಾಗಿದೆ) ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವತ್ತ ಹೊರಟಿವೆ. ಅಚ್ಚರಿಯೆಂದರೆ, ಈಗ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ಕೂಡಾ ಕಾಂಗ್ರೆಸ್ ಮುಕ್ತ ಭಾರತ ಮಾಡುವ ಹಂಬಲ ಸೂಚಿಸಿವೆ.
ಓಟ್ ಬ್ಯಾಂಕ್ ಬಿಕ್ಕಟ್ಟು:
ಮೊದಲನೇಯದಾಗಿ, ಬಹುತೇಕ ಪ್ರಾದೇಶಿಕ ಪಕ್ಷಗಳ ಓಟ್ ಬ್ಯಾಂಕ್ ಕಾಂಗ್ರೆಸ್’ನ ಓಟ್ ಬ್ಯಾಂಕಿನ ಭಾಗವಾಗಿದೆ. ಟಿಎಂಸಿ, ಆಮ್ ಆದ್ಮಿ ಪಾರ್ಟಿ, ಎನ್ ಸಿ ಪಿ, ಎಸ್ ಪಿ, ಬಿ ಎಸ್ ಪಿ, ಟಿ ಆರ್ ಎಸ್, ಡಿಎಂಕೆ ಅಥವಾ ವೈ ಎಸ್ ಆರ್ ಕಾಂಗ್ರೆಸ್ ಕಾಂಗ್ರೆಸ್’ನ ಸಾಂಪ್ರದಾಯಿಕ ಮತಗಳನ್ನು ಸೆಳೆದು ಬಲವಾಗಿ ಬೇರೂರಿರುವ ಪಕ್ಷಗಳು. ಈ ಪಕ್ಷಗಳು ಬಿಜೆಪಿಯ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿಲ್ಲ. ಮುಂದೆ ಮಾಡುವ ಸಾಧ್ಯತೆಗಳೂ ಕಡಿಮೆ. ಹಾಗಾಗಿ ಈಗ ಕಾಂಗ್ರೆಸ್ ಪಡೆಯುತ್ತಿರುವ ಮತಗಳು ಕೂಡಾ ಆಯಾ ಪ್ರಾದೇಶಿಕ ಪಕ್ಷಗಳಿಗೇ ಸಿಕ್ಕಿದ್ದಲ್ಲಿ, ಅವುಗಳ ಬಲ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಮತಗಳ ವಿಭಜನೆಯಾಗುತ್ತಿರುವುದರಿಂದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಮತ ಹಂಚಿಕೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಕಳೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್ ಪಡೆದ ಮತಗಳ ಪ್ರಮಾಣ ಸುಮಾರು 20-30 ಶೇಕಡದಷ್ಟಿತ್ತು. ಆದರೆ, 2014 ಮತ್ತು 2019ರಲ್ಲಿ ಈ ಪ್ರಮಾಣ 20%ಕ್ಕಿಂತಲೂ ಕೆಳಗೆ ತಲುಪಿದೆ. ಇನ್ನೊಂದೆಡೆ ಪ್ರಾದೇಶಿಕ ಪಕ್ಷಗಳು ಇದರಿಂದಾಗಿ ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸಿವೆ. ಹಿಂದಿನ ಐದು ಚುನಾವಣೆಗಳಲ್ಲಿ 30-40 ಶೇಕಡದಷ್ಟಿಇದ್ದ ಮತಗಳ ಪ್ರಮಾಣ 2019ರಲ್ಲಿ 26.4%ಕ್ಕೆ ಕುಸಿದಿದೆ. ಇದರ ನೇರ ಲಾಭ ದೊರಕಿದ್ದು ಬಿಜೆಪಿಗೆ.
ಕಾಂಗ್ರೆಸ್ ಇನ್ನೂ ಕೂಡಾ ಚೇತರಿಸಿಕೊಳ್ಳುವ ಲಕ್ಷಣ ತೋರದಿದ್ದರಿಂದ, ಪ್ರಾದೇಶಿಕ ಪಕ್ಷಗಳು ಈ ಅವಕಾಶವನ್ನು ಬಳಸಿಕೊಳ್ಳಲು ಆರಂಭಿಸಿವೆ. ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಎಡರಂಗ ಮೈತ್ರಿಕೂಟವು ಅತ್ಯಂತ ಹೀನಾಯ ಸೋಲು ಅನುಭವಿಸಿತ್ತು. ಇಲ್ಲಿ ಕಾಂಗ್ರೆಸ್ ಮತಗಳು ವಿಭಜನೆಯಾಗಿ ಬಹುತೇಕ ಮತಗಳು ಟಿಎಂಸಿ ಪಾಲಾಗಿದ್ದವು. ಕೆಲವು ಭಾಗ ಬಿಜೆಪಿ ಪಾಲಾಗಿತ್ತು.
ದೆಹಲಿಯಲ್ಲಿ ಕಾಂಗ್ರೆಸ್ ಮತದಾರರ ಬಹುದೊಡ್ಡ ಪಾಲು ಆಮ್ ಆದ್ಮಿ ಪಕ್ಷದ ಮತದಾರರಾಗಿ ಬದಲಾವಣೆಯಾಗಿದೆ. ಸದ್ಯಕ್ಕೆ ದೆಹಲಿಯಲ್ಲಿ ಒಂದೇ ಒಂದು ಕ್ಷೇತ್ರವನ್ನು ಕೂಡಾ ಗೆಲ್ಲುವ ಕ್ಷಮತೆ ಕಾಂಗ್ರೆಸ್ ಬಳಿ ಉಳಿದಿಲ್ಲ. ಇದೇ ರೀತಿ ತೆಲಂಗಾಣದಲ್ಲಿ ಟಿಆರ್ಎಸ್, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್, ತಮಿಳುನಾಡಲ್ಲಿ ಡಿಎಂಕೆ ಕೂಡಾ ತನ್ನ ಮತ ಬ್ಯಾಂಕ್ ಅನ್ನು ವೃದ್ಧಿಸುವಲ್ಲಿ ಸಫಲವಾಗಿದೆ.
ತವರು ರಾಜ್ಯಗಳಲ್ಲಿ ಕಾಂಗ್ರೆಸ್ ಬೆಂಬಲದ ಅಗತ್ಯವಿಲ್ಲ:
ಬಹುತೇಕ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ತವರು ರಾಜ್ಯದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಅಗತ್ಯವಿಲ್ಲ. ಉದಾಹರಣೆಗೆ ಟಿಎಂಸಿ, ಡಿಎಂಕೆ, ವೈಎಸ್ಆರ್ ಕಾಂಗ್ರೆಸ್ ಹಾಗು ಟಿಆರ್ಎಸ್ ಪಕ್ಷಗಳು ತಮ್ಮ ಸ್ವಂತ ಬಲದಲ್ಲಿ ಬಹುಮತವನ್ನು ಪಡೆಯುವ ಕ್ಷಮತೆಯನ್ನು ಹೊಂದಿವೆ. ಇಂತಹ ಪಕ್ಷಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನು ಹೊಂದಿದ್ದರೆ ಮಾತ್ರ, ಬೇರೆ ರಾಜ್ಯಗಳಲ್ಲಿ ನೆಲೆಯೂರಲು ಕಾಂಗ್ರೆಸ್ ಮತಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಒಂದು ವೇಳೆ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದರೆ, ಬೇರೆ ರಾಜ್ಯಗಳಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮತದಾರರನ್ನು ತಮ್ಮತ್ತ ಸೆಳೆಯಲು ಈ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್’ನ ಅಗತ್ಯವೂ ಇರುವುದಿಲ್ಲ. ಈಗ ಟಿಎಂಸಿಯು ತನ್ನ ನೆಲೆಯನ್ನು ದೇಶದೆಲ್ಲೆಡೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಅಸ್ಸಾಂ, ಗೋವಾ, ತ್ರಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ರಾಜ್ಯಗಳಲ್ಲಿಯೂ ಪ್ರಮುಖ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಅಸ್ಸಾಂನಲ್ಲಿ ಸುಶ್ಮಿತಾ ದೇವ್, ಗೋವಾದಲ್ಲಿ ಲುಝೀನೋ ಫಲೇರೋ ಹಾಗೂ ಪ್ರದ್ಯೋತ್ ದೇಬ್ ಬರ್ಮನ್ ಸೇರಿದಂತೆ ಇತರ ಪ್ರಭಾವಿ ಕಾಂಗ್ರೆಸ್ ನಾಯಕರ ಸಹಯೋಗದೊಂದಿಗೆ ಟಿಎಂಸಿಯ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ. ಇದರಿಂದ ಮತ್ತೆ ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಕಾಂಗ್ರೆಸ್ ಮೇಲಿದ್ದ ನಂಬಿಕೆ ಕಳೆದುಕೊಂಡ ಪ್ರಾದೇಶಿಕ ಪಕ್ಷಗಳು:
ಈಗಾಗಲೇ 2014ರ ಬಳಿಕ ನಡೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಲವೆಡೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಹೊಂದಿದೆ. ಕೇಂದ್ರದಲ್ಲಿ ಯುಪಿಎಯನ್ನು ಜೀವಂತವಾಗಿಡುವ ಸಲುವಾಗಿ ದ್ರಾವಿಡ ನೆಲವನ್ನು ಸಂಪೂರ್ಣವಾಗಿ ಡಿಎಂಕೆಗೆ ಬಿಟ್ಟುಕೊಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಗೆ ಕೇವಲ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮಾತ್ರ ಕಾಂಗ್ರೆಸ್’ಗೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಬಲಿಷ್ಠವಾಗಿ ಬೆಳೆದ ಡಿಎಂಕೆಗೆ ಈಗ ಕಾಂಗ್ರೆಸ್’ನ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೇಲಾಗಿ, ಬಿಜೆಪಿಯಂತಹ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ಅಸಮರ್ಥ ಎಂಬ ಭಾವನೆ ಬೆಳೆಯಲು ಆರಂಭವಾಗಿದೆ. ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳಿಂದ ಈಗ ಸಾಧ್ಯವಾಗದೇ ಇರುವ ಕಾರಣಕ್ಕಾಗಿ, ಆ ಪಕ್ಷಗಳು ಕಾಂಗ್ರೆಸ್’ನ ನೆರಳಲಲ್ಲಿ ನಿಂತಿವೆ. ಇದಕ್ಕೆ ಒಂದೇ ಕಾರಣವೆಂದರೆ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಈಗಾಗಲೇ ನೆಲೆ ಹೊಂದಿದೆ. ಒಂದು ವೇಳೆ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾದರೆ, ಈ ಪ್ರಾದೇಶಿಕ ಪಕ್ಷಗಳು ಉತ್ತಮ ಅವಕಾಶವನ್ನು ಹುಡುಕುವ ಸಾಧ್ಯತೆಗಳು ಕೂಡಾ ಇವೆ.
ಕಾಂಗ್ರೆಸ್ ಮುಕ್ತವಾಗದಿದ್ದರೆ ನೆಲೆ ಕಳೆದುಕೊಳ್ಳುವ ಭಯ:
ಸದ್ಯಕ್ಕೆ ಬಹುತೇಕ ಪ್ರಾದೇಶಿಕ ಪಕ್ಷಗಳು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಏರುವಷ್ಟು ಮಟ್ಟಿಗೆ ಬೆಳೆದಿವೆಯಾದರೂ, ಒಂದು ವೇಳೆ ಮತ್ತೆ ಕಾಂಗ್ರೆಸ್ ಪುಟಿದೆದ್ದರೆ, ಈ ಪಕ್ಷಗಳ ಮತಗಳಿಗೆ ಬಹುದೊಡ್ಡ ನಷ್ಟವುಂಟಾಗುತ್ತದೆ. ಟಿಎಂಸಿ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್, ಆಪ್ ಬಿಜೆಪಿ ವಿರುದ್ದ ಏಕಾಂಗಿಯಾಗಿ ಹೋರಾಡುವ ಶಕ್ತಿಯನ್ನು ಈಗ ಪಡೆದುಕೊಂಡಿವೆ. ಆದರೆ, ಅಲ್ಲಿ ಮತ್ತೆ ಕಾಂಗ್ರೆಸ್ ಚಿಗುರೊಡೆದರೆ, ಈ ಪಕ್ಷಗಳ ಬುಡಕ್ಕೆ ಕೊಡಲಿ ಏಟು ಬೀಳಲಿದೆ. ಹಾಗಾಗಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಇವೂ ಶ್ರಮಿಸುತ್ತಿವೆ.
ಹೀಗೆ ಬಿಜೆಪಿಯನ್ನು ತನ್ನ ಮೊದಲ ಶತ್ರು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ಪ್ರಾದೇಶಿಕ ಪಕ್ಷಗಳು ಸದ್ದಿಲ್ಲದೇ ಕಾಂಗ್ರೆಸ್ ನಿರ್ನಾಮಕ್ಕೆ ಮುಹೂರ್ತವನ್ನು ಇಡುತ್ತಿವೆ. ಕಾಂಗ್ರೆಸ್’ನ ಮತ ಬ್ಯಾಂಕನ್ನು ನಿಧಾನವಾಗಿ ನುಂಗಿ, ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪಕ್ಷವೊಂದನ್ನು ದೇಶದಿಂದ ಬುಡಸಮೇತ ಕಿತ್ತುಹಾಕುವತ್ತ ದೃಷ್ಟಿ ನೆಟ್ಟಿವೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಾಣದ ಅಗತ್ಯತೆ ಬಿಜೆಪಿಗಿಂತಲೂ ಹಲವು ಪ್ರಾದೇಶಿಕ ಪಕ್ಷಗಳಿಗೆ ಇದೆ ಎಂದರೆ ತಪ್ಪಾಗಲಾರದು.