ಕಾಂಗ್ರೆಸ್ ಪಕ್ಷಕ್ಕೆ ಇದು ಬಹಳ ಅಗತ್ಯವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಾಗಲೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಆನಂತರ ಕರ್ನಾಟಕವೂ ಸೇರಿದಂತೆ ಹಲವು ವಿಧಾನಸಭಾ ಚುನಾವಣೆಗಳನ್ನು ಸೋತಿದೆ. 2019ರ ಲೋಕಸಭಾ ಚುನಾವಣೆಯನ್ನು ಸೋತಿದೆ. ಆಗಲಾದರೂ ಸೋಲಿಗೆ ಕಾರಣ ಹುಡುಕಬೇಕಿತ್ತು. ಆಗೆಲ್ಲಾ ತೋರಿದ ಅಸಡ್ಡೆಗೆ ಈಗ ದೊಡ್ಡ ಬೆಲೆ ತೆತ್ತಿದೆ. ದಯನೀಯವಾಗಿ ಸೋತಿದೆ. ಹಾಗಾಗಿಯೇ ಫಲಿತಾಂಶ ಹೊರ ಬಿದ್ದ ಮೂರೇ ದಿನಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದೆ.
ಸದ್ಯ ಕಾಂಗ್ರೆಸ್ ಪಕ್ಷ ಸ್ವತಃ ಬಲದ ಮೇಲೆ ಅಧಿಕಾರದಲ್ಲಿರುವುದು ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಮಾತ್ರ. ಇದಲ್ಲದೆ ಜಾರ್ಖಂಡ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರಗಳ ಪಾಲುದಾರಿಕೆ ಹೊಂದಿದೆ. ಮೂರು ಕಡೆ ಕಾಂಗ್ರೆಸ್ ಜೂನಿಯರ್ ಪಾಟ್ನರ್. ಇತ್ತೀಚೆಗೆ ನಡೆದ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಗೆಲ್ಲುವ ಮಾತೇ ಇರಲಿಲ್ಲ ಬಿಡಿ. ಕಡೆಯ ಪಕ್ಷ ಎರಡನೇ ಅತಿ ದೊಡ್ಡ ಅಂದರೆ 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದ ಪಂಜಾಬಿನಲ್ಲಿ ಇರುವ ಸರ್ಕಾರವನ್ನು ಉಳಿಸಿಕೊಳ್ಳಲು ಹೆಣಗಾಡಿತು. ಆಂತರಿಕ ಕಚ್ಚಾಟದ ಕಾರಣಕ್ಕೆ ಹೀನಾಯವಾಗಿ ಸೋಲು ಕಂಡಿತು. ಅಷ್ಟೇಯಲ್ಲ, ಕಾಂಗ್ರೆಸ್ ಮತಬುಟ್ಟಿಗೆ ಕೈಹಾಕುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ತಾನೇ ಖುದ್ದಾಗಿ ಅವಕಾಶ ಸೃಷ್ಟಿ ಮಾಡಿಕೊಟ್ಟಿತ್ತು.
ಇದೆಲ್ಲದರ ನಡುವೆ 60 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರಖಂಡಾದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬಹುದು, 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಗೋವಾದಲ್ಲಿ ಮಿತ್ರಪಕ್ಷಗಳ ಜೊತೆಗೂಡಿ ಅಧಿಕಾರ ಹಿಡಿಯಬಹುದು ಎಂದು ಭಾವಿಸಿತ್ತು. ಅದೂ ಸುಳ್ಳಾಗಿದೆ. ಮಣಿಪುರದ ಬಗ್ಗೆ ಅಷ್ಟೇನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹೀಗೆ ಎಲ್ಲೆಡೆ ತೀವ್ರ ಹಿನ್ನೆಡೆಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಪಾತಾಳಲೋಕ ತಲುಪಿದೆ. ಅದೇ ಕಾರಣಕ್ಕಾಗಿಯೇ ಅಪರೂಪಕ್ಕೆ ಇಷ್ಟು ಬೇಗ (ಮಾರ್ಚ್ 13ರಂದು) ಆತ್ಮಾವಲೋಕನ ಸಭೆ ಕರೆಯಲಾಗಿದೆ.
ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ ಸಂಬಂಧಪಟ್ಟವರನ್ನು ಸೋಲಿಗೆ ಹೊಣೆಗಾರರನ್ನಾಗಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದೇ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಪ್ರಭಾವಿಯೂ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಅವರೂ ಸೇರಿದಂತೆ ಚುನಾವಣೆಯಲ್ಲಿ ಸೋತ ಐದೂ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಉಸ್ತುವಾರಿಗಳಿಗೆ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದಲ್ಲದೆ ‘ಜಿ-23’ ನಾಯಕರು ಪದೇ ಪದೇ ಎಐಸಿಸಿಗೆ ಸಕ್ರೀಯವಾಗಿರುವ ಅಧ್ಯಕ್ಷರು ಬೇಕು ಎಂದು ಹೇಳುತ್ತಿರುವುದರಿಂದ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಮೊದಲಿಗೆ ಅಧ್ಯಕ್ಷರಾಗಲು ಒಪ್ಪದಿದ್ದ ರಾಹುಲ್ ಗಾಂಧಿ ಕಳೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಿರುವುದರಿಂದ ಹೊಸ ಅಧ್ಯಕ್ಷರ ಆಯ್ಕೆ ವಿಚಾರ ಈಗ ಕಗ್ಗಂಟಾಗಿಲ್ಲ. ಆದರೆ ಹೊಸ ಅಧ್ಯಕ್ಷರ ಆಯ್ಕೆ ಯಾವಾಗ ಎಂಬುದು ಈ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರವಾಗಬಹುದು.
ಎಐಸಿಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದರ ಜೊತೆಗೆ ಪ್ರಧಾನ ಕಾರ್ಯದರ್ಶಿಗಳ ನೇಮಕದ ಬಗ್ಗೆ ಕೂಡ ಚರ್ಚೆಯಾಗುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿಗಳ ನೇಮಕ ಕಾರ್ಯಕಾರಣಿ ಸಮಿತಿ ಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ 2024ರ ಲೋಕಸಭಾ ಚುನಾವಣೆ ದೃಷ್ಟಿಯನ್ನು ಇಟ್ಟುಕೊಂಡು ಪ್ರಧಾನ ಕಾರ್ಯದರ್ಶಿಗಳ ನೇಮಕವಾಗಬೇಕು ಎಂದು ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಇದೆಲ್ಲದರ ನಡುವೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಏಕೈಕ ದೊಡ್ಡ ರಾಜ್ಯ ಎಂದು ಹೇಳಲಾಗುತ್ತಿರುವ ಕರ್ನಾಟಕದ ಬಗ್ಗೆ ಕೂಡ ಚರ್ಚೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಪಂಜಾಬಿನಲ್ಲಿ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಆಂತರಿಕ ಕಚ್ಚಾಟದಿಂದ ಅಧಿಕಾರ ಕಳೆದುಕೊಂಡ ರೀತಿಯಲ್ಲಿ ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಇರುವ ಶೀತಲ ಸಮರದ ಕಾರಣಕ್ಕೆ ಅಧಿಕಾರ ಹಿಡಿಯುವ ಅವಕಾಶವನ್ನು ಕಳೆದುಕೊಳ್ಳಬಾರದು ಎನ್ನುವ ಹಿನ್ನಲೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.