ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರುಗಳು ನಿರಂತರವಾಗಿ ಎಡುವುತ್ತಾರೆ. ಪ್ರತಿ ಸಲ ಎಡವಿದಾಗಲೂ ಮುಂದಿನ ಸಲ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಇದು ಆ ಪಕ್ಷ ಮತ್ತು ಅದರ ನಾಯಕರಿಗೆ ಅಂಟಿದ ಮಹಾ ರೋಗ. ಮೊನ್ನೆ ಚಿತ್ರನಟ ಉಪೇಂದ್ರ ಗಾದೆ ಮಾತಿನ ನೆಪದಲ್ಲಿ ಮಾಡಿದ ಜಾತಿ ನಿಂದನೆಯ ಪ್ರಕರಣದಲ್ಲಿ ಆತನನ್ನು ರಕ್ಷಿಸಲು ಸಾಂಪ್ರದಾಯವಾದಿಗಳು ಮಾಡಿದ ಪ್ರಯತ್ನಗಳು ಸಣ್ಣವೇನಲ್ಲ. ಅದೇ ಬಿಜೆಪಿ ಹಿಂದುತ್ವದ ವಿರುದ್ಧ ಯಾರಾದರೂ ಮಾತನಾಡಿದರೆ ಹೇಗೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತದೆ ಎನ್ನುವುದನ್ನು ಕಾಂಗ್ರೆಸ್ ನೋಡಿ ಕಲಿಯಬೇಕಿದೆ. ಬಿಜೆಪಿ ಕ್ರೀಯಾಶೀಲ ಆಗುವುದೇ ಯಾರಾದರೂ ಹಿಂದುತ್ವದ ಮೌಢ್ಯಗಳನ್ನು ಟೀಕಿಸಿದಾಗ ಮತ್ತು ಗಲಭೆಗಳಾಗಿ ಹೆಣ ಬಿದ್ದಾಗ. ಅದರಲ್ಲೂ ಅಲ್ಪಸಂಖ್ಯಾತರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಸಂಗತಿಗಳಾಗಿದ್ದರೆ ಬಿಜೆಪಿಯ ಸಂತೋಷಕ್ಕೆ ಪಾರವವೇ ಇರುವುದಿಲ್ಲ. ಹೀಗೆ ಹೆಣ ಮತ್ತು ಅರಾಜಕತೆಗಳನ್ನೆ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿಗೆ ಅಗ್ರ ಪಾಲು.
ಚಿತ್ರನಟ ಚೇತನ್ ಬ್ರಾಹ್ಮಣ್ಯವನ್ನು ಟೀಕಿಸಿದಾಗ ಇಡೀ ಸಂಘ ಪರಿವಾರದ ಬ್ರಾಹ್ಮಣರು ಮತ್ತು ಬಿಜೆಪಿ ಆತನನ್ನು ಬಂಧಿಸದೆ ಬಿಡಲಿಲ್ಲ. ಬ್ರಾಹ್ಮಣ ಸಂಘದ ಅದ್ಯಕ್ಷನೇ ಆರಂಭದಲ್ಲಿ ದೂರು ನೀಡಿದ್ದ. ಸಹಜವಾಗಿ ಆಹಾರ ಪದ್ದತಿ ಮತ್ತು ಮಡಿವಂತಿಕೆಯ ಕುರಿತು ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖಾ ಅವರನ್ನು ಮಡಿವಂತರು ಹೇಗೆಲ್ಲ ತೊಂದರೆ ಕೊಟ್ಟರು ಎನ್ನುವುದು ನಾವು ನೋಡಿದ್ದೇವೆ. ನಟ ಉಪೇಂದ್ರ ಮೇಲ್ನೋಟಕ್ಕೆ ತಾನೊಂದು ರಾಜಕೀಯ ಪಕ್ಷದ ನಾಯಕನಂತೆ ವರ್ತಿಸುತ್ತಾನಾದರೂ ಆತನ ಗುಪ್ತ ಬೆಂಬಲ ಯಾವ ಪಕ್ಷಕ್ಕಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಮೊನ್ನಿನ ಉಪೇಂದ್ರನ ಜನಾಂಗ ನಿಂದನೆಯ ಗಾದೆ ಬಳಸಿದ ಉಡಾಫೆತನವನ್ನು ಬೆಂಬಲಿಸಿದವರು ಯಾವ ಸಿದ್ದಾಂತ ಮತ್ತು ರಾಜಕೀಯ ಪಕ್ಷದ ಬೆಂಬಲಿಗರೆಂದು ಎಲ್ಲರಿಗೂ ಗೊತ್ತು. ಉಪೇಂದ್ರನ ಜಾತಿವಾದಿ ಮನಸ್ಥಿತಿಯನ್ನು ಯಾವ ಅಳುಕಿಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಸಮರ್ಥಿಸಿದ್ದು ಬಿಜೆಪಿಯ ಶಾಸಕ ಸುರೇಶಕುಮಾರ್ ಎನ್ನುವದು ನಾವೆಲ್ಲ ಬಲ್ಲೆವು.
![](https://pratidhvani.com/wp-content/uploads/2023/08/Upendra_at_KLE_Societys_Law-College_Bangalore_2-1.jpg)
ಸಜ್ಜನ ರಾಜಕಾರಣಿ ಎಂದೆ ಮಂದಿ ಮಾಗದ ಮಾಧ್ಯಮಗಳಿಂದ ವರ್ಣಿಸಿಕೊಳ್ಳುವ ಸುರೇಶಕುಮಾರ ತನ್ನ ಕೆಳವರ್ಗದ ಬಗೆಗಿನ ಪರಂಪರಾಗತ ಮತ್ಸರ ಹಾಗು ಕುಹಕಗಳಿಗೆ ಕುಪ್ರಸಿದ್ದ. ಈತ ಗೌರಿ ಕೊಲೆಯನ್ನು ಪ್ರತಿಭಟಿಸಲು ಆಯೋಜಿಸಲಾಗಿದ್ದ ಸಭೆಗೆ ಬಂದಿದ್ದ ಹಳ್ಳಿಯ ಅನಕ್ಷರಸ್ತ ಹೆಣ್ಣು ಮಗಳೊಬ್ಬಳು ತನ್ನ ಕೊರಳಿಗೆ ತಲೆ ಕೆಳಗಾಗಿ ಹಾಕಿಕೊಂಡಿದ್ದ ‘ನಾನು ಗೌರಿ’ ಫಲಕದ ಜೊತೆಗೆ ಪ್ರತಿಭಟನಾ ಸ್ಥಳದಲ್ಲಿನ ಖಾಲಿ ಕುರ್ಚಿಗಳ ಚಿತ್ರಗಳನ್ನು ತನ್ನ ಫೇಸ್ಬುಕ್ ಗೋಡೆಯಲ್ಲಿ ಹಂಚಿಕೊಂಡು ವಿಕೃತ ಆನಂದ ಮೆರೆದದ್ದನ್ನು ನಾವು ನೋಡಿದ್ದೇವೆ. ಕೇವಲ ಕೋಮುವಾದವನ್ನೇ ಉಂಡುಟ್ಟು ಕುಳಿತಿರುವ ಬಿಜೆಪಿಯೊಳಗಿನ ಸಂಘಿಗಳು ಬಹುಜನರನ್ನು ಹೇಗೆಲ್ಲ ಅವಮಾನಿಸುತ್ತಾರೆ ಹಾಗು ತಮ್ಮ ವಿರುದ್ಧ ಬರುವ ಟೀಕೆಯ ಪ್ರಕಣಗಳನ್ನು ರಾಜಕೀಯಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾಂಗ್ರೆಸ್ಸಿನೊಳಗಿನ ಬಹುಜನ ಸಮುದಾಯದ ನಾಯಕರು ನೋಡಿ ಕಲಿಯಬೇಕು. ಕಾಂಗ್ರೆಸ್ಸಿಗರ ದಡ್ಡತನಕ್ಕೆ ಅನೇಕ ಕಾರಣಗಳಿವೆ.
ಇಂದು ಬಿಜೆಪಿ ಸಬಲ ನಾಯಕನಿಲ್ಲದೆ ರಾಜ್ಯದಲ್ಲಿ ಅತ್ಯಂತ ದುರ್ಬಲವಾಗಿದ್ದರೂ ಸಹ ಪರಿಸ್ಥಿತಿಯ ದುರ್ಲಾಭ ಪಡೆದು ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಾವತ್ತೂ ಅಶಕ್ತವಾಗಿಲ್ಲ. ತನ್ನ ಮೂರು ವರ್ಷಗಳ ಆಡಳಿತದುದ್ದಕ್ಕೂ ಯಾವತ್ತೂ ಸ್ವಂತಿಕೆ ಪ್ರದರ್ಶಿಸದ ಬೊಮ್ಮಾಯಿ ಈಗ ತನ್ನ ಪಕ್ಷ ಸೋತು ಸುಣ್ಣವಾಗಿರುವ ಸಂದರ್ಭದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವಲ್ಲಿ ಎಲ್ಲಕ್ಕಿಂತ ಮುಂದೆ ನಿಲ್ಲುವದನ್ನು ನೋಡಿದರೆ ಬಿಜೆಪಿಯ ಹಿಂದಿರುವ ಧರ್ಮಾಂಧ ಶಕ್ತಿಗಳ ಸಂಘಟನೆಯ ಬಲ ಅರ್ಥವಾಗಬಲ್ಲುದು. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದಾಗ ರಾಜ್ಯದಲ್ಲಿ ಮತೀಯ ದಂಗೆ ಹಾಗು ಅರಾಜಕತೆ ಹುಟ್ಟುಹಾಗುವ ಮಾಸ್ಟರ್ ಮೈಂಡ್ ಎಲೆಮೆಂಟ್ ಗಳು ಈಗಿನ ಸಂಪುಟದ ಮಂತ್ರಿಯೊಬ್ಬರು ತಮ್ಮ ವಿರುದ್ಧ ಅಬ್ಬರಿಸಿದ್ದಕ್ಕೆ ತಕ್ಷಣ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ಆ ಸಚಿವರ ಕ್ಷೇತ್ರಕ್ಕೆ ಬಂದು ಒಂದು ಸಭೆಯನ್ನು ಆಯೊಜಿಸಿ ಸಚಿವರಿಗೆ ಸವಾಲು ಹಾಕುವಷ್ಟು ಸಂಘಟಿತವಾಗಿವೆ ಎಂದರೆ ಇವುಗಳ ಹಿಂದೆ ಯಾರಿದ್ದಾರೆ ಊಹಿಸಿ.
ಅಂತಹ ಧರ್ಮಾಂಧ ಮಾಸ್ಟರ್ ಮೈಂಡ್ ಎಲೆಮೆಂಟ್ ಗಳು ವೈಯಕ್ತಿಕವಾಗಿ ಆಳುವ ಪಕ್ಷದ ಮಂತ್ರಿಯ ಕ್ಷೇತ್ರಕ್ಕೆ ಬಂದು ಸವಾಲು ಹಾಕುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಎಲೆಮೆಂಟ್ ಗಳಿಗೆ ಬೇಕಾಗುವ ಆರ್ಥಿಕˌ ನೈತಿಕ ಹಾಗು ಸಂಘಟನಾತ್ಮಕ ಸಂಪನ್ಮೂಲಗಳನ್ನು ಒದಗಿಸುವ ಗುಪ್ತ ಧರ್ಮಾಂಧ ಸಂಸ್ಥೆಗಳ ಅಪಾಯಕಾರಿ ಚಟುವಟಿಕೆಗಳ ಮೇಲೆ ಕಾಂಗ್ರೆಸ್ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದ ಮಿತಿಯೆ ಅದು. ಈಗ ಇಂತಹ ಧರ್ಮಾಂದ ಎಲೆಮೆಂಟ್ ಗಳು ಇನ್ನೂ ಹೆಚ್ಚು ಕ್ರೀಯಾಶೀಲವಾಗಿ ಕಾರ್ಯ ಮಾಡುತ್ತಿವೆ. ಆದರೆ ಗೃಹ ಇಲಾಖೆ ಅತ್ಯಂತ ದುರ್ಬಲ ವ್ಯಕ್ತಿಯ ಅಧಿನದಲ್ಲಿರುವುದೇ ಮಹಾ ದುರಂತ. ಡಾ. ಪರಮೇಶ್ವರ್ ಈ ಹಿಂದೆ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಾಗ ಅವರ ಪಕ್ಷ ವಿಧಾನ ಪರಿಷತ್ತಿಗೆ ಕಳಿಸಿ ಗೃಹ ಮಂತ್ರಿ ಮಾಡಲಾಗಿತ್ತು. ಆಗ ವಿಚಾರಣಾ ಹಂತದಲ್ಲಿದ್ದ ಡಾ. ಕಲಬುರಗಿ ಹಾಗು ಗೌರಿ ಕೊಲೆಯ ಪ್ರಕರಣಗಳಲ್ಲಿ ಕಿಂಚಿತ್ ಪ್ರಗತಿ ಸಾಧ್ಯವಾಗಲಿಲ್ಲ. ಮುಂದೆ ರಾಮಲಿಂಗಾ ರೆಡ್ಡಿ ಗೃಹ ಮಂತ್ರಿಯಾದ ಮೇಲೆ ವಿಚಾರಣೆ ಪ್ರಗತಿ ಕಂಡಿದ್ದನ್ನು ನಾವು ಬಲ್ಲೆವು.
![](https://pratidhvani.com/wp-content/uploads/2023/08/97685646_mediaitem97685645-833x1024.jpg)
ಡಾ. ಪರಮೇಶ್ವರ್ ವ್ಯಕ್ತಿಗತವಾಗಿ ಸಜ್ಜನರಾಗಿರಬಹುದು. ಅವರ ಸಜ್ಜನ ನಡತೆ ಇಂದಿನ ಧರ್ಮಾಂಧರ ಆಕ್ರಮಣಕಾರಿ ಕಾಲಮಾನದಲ್ಲಿ ನಿಸ್ಪ್ರಯೋಜಕ. ಸ್ವತಃ ಪರಮೇಶ್ವರ್ ಅವರು ಧರ್ಮಾಂಧ ಮೌಢ್ಯಗಳ ದಾಸರು ಹಾಗು ಧರ್ಮಾಂಧ ಮಠಗಳ ಭಕ್ತರು ಎನ್ನುವುದು ಇಲ್ಲಿ ಹೆಚ್ಚು ಗಮನಾರ್ಹ. ಬಿಜೆಪಿ ಐದು ವರ್ಷ ಆಡಳಿತ ಮಾಡಿದರೆ ಅದರ ಪರಿಣಾಮ ಐವತ್ತು ವರ್ಷ ನಮ್ಮನ್ನು ಭಾದಿಸುತ್ತದೆ. ಇಡೀ ಕಾರ್ಯಾಂಗ ಹಾಗು ಪೋಲಿಸ್ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಧರ್ಮಾಂಧರ ಪ್ರತಿಷ್ಠಾಪನೆಯಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಸ್ವಚ್ಚಗೊಳಿಸುವ ಎದೆಗಾರಿಕೆಯುಳ್ಳ ಮುಖ್ಯಮಂತ್ರಿ ಹಾಗು ಸೈದ್ದಾಂತಿಕ ಬದ್ಧತೆಯುಳ್ಳ ಗೃಹಮಂತ್ರಿಯ ಅಗತ್ಯವಿದೆ. ಆದರೆ ಇಲ್ಲಿ ಡಾ. ಪರಮೇಶ್ವರ ಗೃಹಮಂತ್ರಿಯಾಗಿ ಈ ಹಿಂದೆಯೂ ವಿಫಲರಾಗಿದ್ದಾರೆ. ಇಂತಹ ಸಜ್ಜನರಿಗೆ ಕಂದಾಯˌ ಕೃಷಿˌ ಲೋಕಪಯೋಗಿಯಂತ ಖಾತೆಗಳು ಹೇಳಿ ಮಾಡಿಸಿದಂತವು. ಇವರಿಗೆ ಗೃಹ ಖಾತೆಯಂತು ಸುತಾರಮ್ ನಿಭಾಯಿಸಲಾಗದ ಖಾತೆ ಎನ್ನಲೇಬೇಕಿದೆ.
ಧರ್ಮಸ್ಥಳದ ಸೌಜನ್ಯಳ ಅಚ್ಯಾಚಾರ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸದ್ದು ಮತ್ತು ನಟ ಉಪೇಂದ್ರನ ಉದ್ಧಟತನದ ಮಾತುಗಳನ್ನು ನಿಗ್ರಹಿಸಿ ಕಾನೂನಿನಂತೆ ಆತನಿಗೆ ಬಂಧಿಸದೆ ಇರುವುದು ಹಾಗು ಧರ್ಮಾಂಧ ಕಿಡಿಕೇಡಿ ಎಲೆಮೆಂಟ್ ಗಳ ಸೌಹಾರ್ದತೆ ಕೆಡಿಸುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟು ನಿಯಂತ್ರಿಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ಎಡವಿದೆ. ನಟ ಚೇತನ್ ಹಾಗು ಹಂಸಲೇಖಾ ವಿಷಯದಲ್ಲಿ ಬಿಜೆಪಿ ಆಡಳಿತ ನಡೆದುಕೊಂಡ ಬಗೆ ಕಾಂಗ್ರೆಸ್ ಆಡಳಿತಕ್ಕೆ ಮಾದರಿಯಾಗಬೇಕಿತ್ತು. ದಿನ ಬೆಳಗಾದರೆ ಸರಕಾರದ ಉಚಿತ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹರಡುವುದು ಮತ್ತು ನಾಡಿನ ವಿಚಾರವಾದಿಗಳಿಗೆ ಕೊಲೆ ಬೆದರಿಕೆಯ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇವನ್ನು ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಿಜೆಪಿಯ ಅಗತ್ಯ ಖಂಡಿತವಾಗಿಯೂ ಇಲ್ಲ. ಕಾಂಗ್ರೆಸ್ಸಿಗರು ಮಾಡಿಕೊಳ್ಳುವ ಅವಾಂತರಗಳೇ ಆ ಪಕ್ಷವನ್ನು ಮುಗಿಸಬಲ್ಲವು ಎನ್ನವುದರಲ್ಲಿ ಯಾವುದೆ ಅನುಮಾನ ಬೇಡ.
![](https://pratidhvani.com/wp-content/uploads/2023/04/g-parmeshwar-97595915-1024x768.jpg)
ಆ ಪ್ರಕರಣವನ್ನು ಇಲ್ಲಿಗೆ ಬಿಡೋಣ. ಈಗ ಕಾಂಗ್ರೆಸ್ ಪಕ್ಷದ ನಾಯಕರ ಎಡವಟ್ಟುಗಳನ್ನು ಚರ್ಚಿಸೋಣ. ಈಗಿನ ಪ್ರದೇಶ ಕಾಂಗ್ರೆಸ್ ಅದ್ಯಕ್ಷ ಹಾಗು ಉಪಮುಖ್ಯಮಂತ್ರಿ ಡಿಕೆಶಿಯಿಂದ ಹಿಡಿದು ಗೃಹಮಂತ್ರಿ ಡಾ. ಪರಮೇಶ್ವರ ವರೆಗೆ ಬಹುತೇಕ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ವೈದಿಕ ಜ್ಯೋತಿಷಿಗಳˌ ಮತ್ತು ಪುರೋಹಿತರ ಸಲಹೆಯ ಮೇರೆಗೆ ತನ್ನ ದಿನಚರಿಯನ್ನು ಆರಂಭಿಸುತ್ತಾರೆ. ಇವರು ಹೋಮ-ಹವನಗಳ ಆಚರಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಒಡನಾಟ ಇಟ್ಟುಕೊಂಡಿರುವ ಎಲ್ಲ ಜ್ಯೋತಿಷಿಗಳು ಮತ್ತು ಅವಧೂತರುಗಳು ಸಹಜವಾಗಿ ದಂಧೆಕೋರರಷ್ಟೇ ಅಲ್ಲದೆ ಬಲಪಂಥೀಯ ಮನಸ್ಥಿತಿಯುಳ್ಳವರು ಹಾಗೂ ಬಿಜೆಪಿ/ಸಂಘ ಪರಿವಾರದ ಹಿತಚಿಂತಕರು ಎಂದು ಬೇರೆ ಹೇಳುವ ಅಗತ್ಯವಿಲ್ಲ. ಇದಷ್ಟೇ ಆಗಿದ್ದರೆ ಇದನ್ನು ಈ ನಾಯಕರುಗಳ ವ್ಯಕ್ತಿಗತ ಧಾರ್ಮಿಕ ನಂಬಿಕೆ ಎಂದು ಉಪೇಕ್ಷಿಸಬಹುದಿತ್ತು. ಆದರೆ ಅದು ಹಾಗಾಗುವುದಿಲ್ಲ ಎನ್ನುವುದೇ ದುರಂತದ ಸಂಗತಿಯಾಗಿದೆ.
ಬಹುತೇಕ ಕಾಂಗ್ರೆಸ್ ನಾಯಕರ ಆಪ್ತ ಸಹಾಯಕರುˌ ಆಪ್ತ ಕಾರ್ಯದರ್ಶಿಗಳುˌ ಅವರ ವೈಯಕ್ತಿಕ ಸಾಮಾಜಿಕ ಜಾಲತಾಣಗಳಾದ ಟ್ವೀಟರ್ˌ ಫೆಸ್ಬುಕ್ ಪೇಜ್ ಗಳನ್ನು ನಿರ್ವಹಿಸುವವರು ಬಲಪಂಥೀಯ ಜನರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಿಸುವವರು ಬಿಜೆಪಿಯ ಒಬ್ಬ ತರುಣ ನಾಯಕನೊಂದಿಗೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದು ಮತ್ತು ಸಂಘ ಪರಿವಾರದ ಸಮುದಾಯಕ್ಕೆ ಸೇರಿದವರಾಗಿದ್ದದ್ದು ಹಾಗು ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಳನ್ನು ಬಿಜೆಪಿ ಪಕ್ಷಕ್ಕೆ ಗೌಪ್ಯವಾಗಿ ಮುಟ್ಟಿಸುತ್ತಿದ್ದ ಕುರಿತು ಆ ಪಕ್ಷದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಗೊಣಗಾಡುವುದು ಸಾಮಾನ್ಯವಾಗಿತ್ತು. ಕಾಂಗ್ರೆಸ್ ಪಕ್ಷದ ಬಹುತೇಕ ಮುಂಚೂಣಿ ನಾಯಕರಿಗೆ ಸೇರಿದ ಉದ್ಯಮ ಹಾಗು ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಸ್ಥಾನಗಳಲ್ಲಿ ನಡು ಬಗ್ಗಿಸಿ ನಿಲ್ಲುವ ˌ ಭಾರೀ ವಿಧೇಯರಂತೆ ವರ್ತಿಸುವ ಗುಪ್ತ ಸಂಘಿಗಳೆ ಇದ್ದಾರೆ.
ಈ ಎಲ್ಲ ನಾಯಕರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುವವರು ಕೂಡ ಬಲಪಂಥೀಯ ಒಲವುಳ್ಳ ಗುಪ್ತ ಸಂಘಿಗಳೆ. ಇದನ್ನು ನಾವು ಮುಖ್ಯವಾಗಿ ಎರಡು ಆಯಾಮಗಳಲ್ಲಿ ನೋಡಬಹುದಾಗಿದೆ: ಒಂದು;
ಈ ಕಾಂಗ್ರೆಸ್ ನಾಯಕರುಗಳು ನೇರ ನಡೆಯˌ ನಿಷ್ಟುರ ಮತ್ತು ಸೈದ್ಧಾಂತಿಕ ಬದ್ದತೆಯುಳ್ಳ ಸ್ವಾಭಿಮಾನಿ ಪ್ರತಿಭಾವಂತರನ್ನು ಇಚ್ಚಿಸುವುದಿಲ್ಲ. ಸದಾ ತಮ್ಮೆದುರಿಗೆ ನಡು ಬಗ್ಗಿಸಿ ನಿಲ್ಲುವˌ ಅನ್ಯರ ಬಗ್ಗೆ ಇಲ್ಲಸಲ್ಲದ ಸುಳ್ಳು ಚಾಡಿ ಹೇಳುವˌ ಭಾರೀ ವಿಧೇಯರಂತೆˌ ಜಾಣ/ಪ್ರತಿಭಾವಂತರಂತೆ ಪೋಜು ಕೊಡುವವವರನ್ನೆ ಈ ನಾಯಕರು ಇಷ್ಟ ಪಡುತ್ತಾರೆ ಮತ್ತು ಅಂತವರನ್ನೆ ತಮ್ಮ ಆಪ್ತ ವಲಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡು;
ಕಾಂಗ್ರೆಸ್ ನಾಯಕರುಗಳ ಕಾರ್ಯಸೂಚಿಗಳನ್ನು ಮತ್ತು ಅವರ ರಾಜಕೀಯˌ ಉದ್ಯಮˌ ವ್ಯವಹಾರ ಹಾಗೂ ಶಿಕ್ಷಣ ಸಂಸ್ಥೆಗಳ ಸೂಕ್ಷ್ಮವಾದ ಸಂಗತಿಗಳನ್ನು ತಿಳಿದುಕೊಂಡು ಬಲಪಂಥೀಯ ಸಂಘಟನೆಗಳಿಗೆ ಮತ್ತು ರಾಜಕೀಯ ಪಕ್ಷಕ್ಕೆ ಗುಪ್ತವಾಗಿ ಸುದ್ದಿ ತಿಳಿಸುವುದೇ ಈ ಅವಕಾಶವಾದಿಗಳ ಮುಖ್ಯ ಅಜೆಂಡಾ ಆಗಿರುತ್ತದೆ.
ಅದಕ್ಕಾಗಿ ಅವರು ಭಾರೀ ವಿಧೇಯರಂತೆ ನಟಿಸುತ್ತ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರ ಎಡಬಲದಲ್ಲಿ ಪ್ರತಿಷ್ಠಾಪನೆಗೊಂಡಿರುತ್ತಾರೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರುಗಳನ್ನು ಬಲಹೀನಗೊಳಿಸುವ ಬಲಪಂಥಿಯ ಸಂಘಟನೆಗಳ ವ್ಯವಸ್ಥಿತ ಹುನ್ನಾರವಾಗಿದೆ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ಕಾಂಗ್ರೆಸ್ ಪಕ್ಷದ ನಾಯಕರುಗಳು ಕೇವಲ ಪ್ರತಿಭೆ ಮತ್ತು ಕೃತಕ ವಿಧೇಯತೆಗಳನ್ನಷ್ಟೇ ಮಾನದಂಡಗಳಾಗಿ ಪರಿಗಣಿಸಿ ತಮ್ಮ ಆಪ್ತ ಸಹಾಯಕ/ಸಾಮಾಜಿಕ ಜಾಲತಾಣ ನಿರ್ವಾಹಕ/ಶಿಕ್ಷಣ ಸಂಸ್ಥೆಗಳೊಳಗಿನ ಆಯಕಟ್ಟಿನ ಹುದ್ದೆಗಳಿಗೆ ಜನರನ್ನು ನೇಮಿಸಿಕೊಳ್ಳುವ ಬದಲಿಗೆ ಆ ಹುದ್ದೆ ನಿಭಾಯಿಸಲು ಬೇಕಾಗುವ ಪ್ರತಿಭೆˌ ಕೌಶಲ್ಯ ಹಾಗು ಅವರಲ್ಲಿ ಇರಬೇಕಾದ ಸೈದ್ಧಾಂತಿಕ ಬದ್ಧತೆಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯವಿದೆ. ಜಾತ್ಯಾತೀತ ತತ್ವಗಳುˌ ಪ್ರಗತಿಪರ ನಿಲುವುˌ ಬರವಣಿಗೆಯ ಕೌಶಲ್ಯ ˌ ಜನರೊಂದಿಗಿನ ಸಂವಹನ ಜಾಣ್ಮೆ ˌ ಮತ್ತು ಆ ನಾಯಕರ ಬಗೆಗಿನ ಕೃತಕವಲ್ಲದ ನೈಜ ಅಭಿಮಾನ ಉಳ್ಳ ಜನರಿಗೇನು ರಾಜ್ಯದಲ್ಲಿ ಕೊರತೆಯಿಲ್ಲ.
ಆದರೆ ಅಂತವರ ಬಗ್ಗೆ ಇಲ್ಲಸಲ್ಲದ ಚಾಡಿ ಹೇಳಿ ಸದಾ ತಮ್ಮ ಭಟ್ಟಂಗಿತನದಿಂದ ಹಲ್ಲು ಗಿಂಜುತ್ತ ನಿಲ್ಲುವ ಈ ನಾಯಕರ ಸುತ್ತಲಿರುವ ಪಟಾಲಂ ಅಲ್ಲಿ ಪ್ರತಿಭಾವಂತರು ಬರದಂತೆ ನೋಡಿಕೊಳ್ಳುತ್ತ ಒಂದು ಸುರಕ್ಷಿತ ವೃತ್ತವನ್ನು ಸೃಷ್ಟಿಸುತ್ತಾರೆ. ಇದು ಈ ನಾಯಕರಿಗೆ ಅರ್ಥವಾಗುವುದೇ ಇಲ್ಲ. ವಿಧೇಯತೆ ಎಂದರೆ ಎದುರಿಗೆ ಬಂದಾಗ ಗಬಕ್ಕನೆ ಎದ್ದು ನಿಂತು ಹಲ್ಲು ಗಿಂಜುವುದುˌ ನಡು ಬಗ್ಗಿಸಿˌ ಕೈಕಟ್ಟಿಕೊಂಡು ನಿಲ್ಲುವುದುˌ ಸುಳ್ಳು ಚಾಡಿ ಹೇಳುವುದು ಎಂದು ಭಾವಿಸಿರುವ ಈ ಪುಢಾರಿಗಳು ಇಂತವರಿಂದ ಆಗಬಹುದಾದ ದೀರ್ಘಾವಧಿಯ ದುಸ್ಪರಿಣಾಮಗಳ ಬಗ್ಗೆ ಯೋಚಿಸುವುದೇ ಇಲ್ಲ. ಇದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರುಗಳ ದೌರ್ಬಲ್ಯವಾಗಿದೆ. ಈ ಹಿಂದೆ ದಿನೇಶ್ ಗುಂಡುರಾವ್ ಪ್ರದೇಶ್ ಕಾಂಗ್ರೆಸ್ ಅದ್ಯಕ್ಷರಾಗಿದ್ದಾಗ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಿಸುವವರ ಬಗ್ಗೆ ಕಾರ್ಯಕರ್ತರಲ್ಲಿದ್ದ ಅಸಮಾಧಾನ ಮತ್ತು ಅವರಿಗೆ ಬಿಜೆಪಿಯೊಂದಿಗಿದ್ದ ಗುಪ್ತ ನಂಟು ಬೀದಿ ಮಾತಾಗಿತ್ತು. ಇದು ನಿಷ್ಟಾವಂತ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸಿತ್ತು.
೨೦೧೯ ರ ಸಂಸತ್ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಆಯ್ಕೆ ಮಾಡುವುದರಲ್ಲಾದ ವಿಳಂಬ ನೀತಿ ಹಾಗೂ ಚುನಾವಣಾ ಸಮಯದಲ್ಲಿ ಪ್ರದೇಶ ಕಾಂಗ್ರೆಸ್ ಅದ್ಯಕ್ಷರು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಷಿ ಧಾರವಾಡ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ನೀಡಿದ ಹೇಳಿಕೆ ಪಕ್ಷದ ಸೋಲಿಗೆ ದೊಡ್ಡ ಕೊಡುಗೆ ನೀಡಿತ್ತು. ಇದು ಕಾಂಗ್ರೆಸ್ ಪಕ್ಷವನ್ನು ಬಲಪಂಥಿಯರು ಒಳಹೊಕ್ಕು ನಿಯಂತ್ರಿಸುವ ಮತ್ತು ಆ ಪಕ್ಷವನ್ನು ಬಲಹೀನಗೊಳಿಸುವ ಒಂದು ತಂತ್ರ ಎನ್ನುವುದು ಬಹಳಷ್ಟು ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲಿಯ ತನಕ ಗುಪ್ತ ಸಂಘಿಗಳಿಂದ ಮುಕ್ತರಾಗುವುದಿಲ್ಲವೊ ಅಲ್ಲಿಯ ವರೆಗೆ ಅವರಿಗೆ ಈ ರೀತಿಯ ಅವಘಡಗಳು ತಪ್ಪಿದ್ದಲ್ಲ. ಗುಪ್ತ ಸಂಘಿಗಳನ್ನು ಮಡಿಲಲ್ಲಿಟ್ಟುಕೊಂಡು ಕಾಂಗ್ರೆಸ್ಸಿಗರು ಜಾತ್ಯಾತೀತ ರಾಜ್ಯ ಕಟ್ಟುವುದು ಆಗದ ಮಾತು. ಈ ದಿಶೆಯಲ್ಲಿ ಕಾಂಗ್ರೆಸ್ಸಿಗರು ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಗಂಡಾಂತರ ಖಚಿತ.
~ ಡಾ. ಜೆ ಎಸ್ ಪಾಟೀಲ.