ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಸ್ಸು ಬಹಳ ಕಡಿಮೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನವರು ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅವರ ತಪ್ಪುಗಳನ್ನು ಸದಾ ಎಳೆಎಳೆಯಾಗಿ ಜನರ ಮುಂದಿಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಈ ಸರ್ಕಾರವೇ ಬೇಡ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಇದರ ಅವಧಿ ಇನ್ನೊಂದು ವರ್ಷವಾದರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು.

24 ಶಾಸಕರನ್ನು ಕರೆದುಕೊಂಡು ಗುಂಡ್ಲುಪೇಟೆ ಚಾಮರಾಜನಗರದ ಕಡೆ ಹೋಗಲು ಜಾರಕಿಹೊಳಿ ಮುಂದಾಗಿದ್ದರು. ಜಾರಕಿಹೊಳಿ ಬ್ರದರ್ಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ನಾವು ಉಳಿಯುವುದಿಲ್ಲ ಎಂದು ಡಿಸಿಎಂ ಶಿವಕುಮಾರರಿಗೂ ಗೊತ್ತಿದೆ ಎಂದು ತಿಳಿಸಿದರು. ಚುನಾವಣೆಗೆ ಹಣ ಕೊಡದಿದ್ದರೆ ಹೈಕಮಾಂಡಿನ ಸಮಸ್ಯೆ. ಕಲೆಕ್ಷನ್ಗೆ ಇಳಿದರೆ ಇಲ್ಲಿ ಸಮಸ್ಯೆ. ಕಾಂಗ್ರೆಸ್ ಹಲವಾರು ತುಂಡುಗಳಾಗಿದೆ. ಇದು ಹೊರಗಡೆ ಬರಲು ಕೆಲವೇ ದಿನಗಳು ಉಳಿದಿವೆ ಎಂದು ತಿಳಿಸಿದರು.
ಬರಗಾಲ ಬಂದರೂ ಯಾರೂ ಕೂಡ ಪ್ರವಾಸ ಮಾಡುತ್ತಿಲ್ಲ. ಡಿ ಕೆ ಶಿವಕುಮಾರರು ಬೆಳಗಾವಿಗೆ ಹೋಗಿದ್ದು ಬೇರೆ ಉದ್ದೇಶಕ್ಕೆ, ಅಲ್ಲಿನ ಜಿಲ್ಲಾ ಸಚಿವರೇ ಅವರನ್ನು ಸ್ವಾಗತಿಸಿಲ್ಲ. ಸತೀಶ್ ಜಾರಕಿಹೊಳಿ ಸಂಬಂಧ ಸಮಸ್ಯೆ ಶುರುವಾಗಿದೆ.