ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗುವ ಸಾಧ್ಯತೆಗಳು ಗೋಚರ ಆಗ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಭಾನುವಾರ ರಾತ್ರಿ ಬೆಂಗಳೂರು ಶಾಸರನ್ನು ಸೇರಿಸಿಕೊಂಡು ಮಹತ್ವದ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆಗಳಿದ್ದು, ಬಿಜೆಪಿಯನ್ನು ಹೇಗೆ ಗೆಲ್ಲಿಸಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಗೋಪಾಲಯ್ಯ, ಎಸ್.ಆರ್ ವಿಶ್ವನಾಥ್, ಉದಯ ಗರುಡಾಚಾರ್, ಮುನಿರಾಜು ಸೇರಿ ಹಲವರು ಭಾಗಿಯಾಗಿದ್ರು. ಆದರೆ ಆರ್. ಅಶೋಕ್, ಮುನಿರತ್ನ, ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್, ಸತೀಶ್ ರೆಡ್ಡಿ, ಮಂಜುಳಾ ಲಿಂಬಾವಳಿ, ಸುರೇಶ್ ಕುಮಾರ್ ಗೈರಾಗಿದ್ರು.
ಶಾಸಕರಿಗೆ ಯಡಿಯೂರಪ್ಪ ಕೊಟ್ಟ ಸಲಹೆಗಳು ಏನು..?
ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು, ಅಧಿಕಾರ ಹೋಯ್ತು ಎಂದು ಚಿಂತಿಸಬೇಡಿ. ನಾಯಕತ್ವದ ಬಗ್ಗೆ ವರಿಷ್ಠರು ನಿರ್ಧಾರ ಮಾಡ್ತಾರೆ. ನಮ್ಮದು ಏನಿದ್ರು ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸೋದು. ಕಾಂಗ್ರೆಸ್ ಸರ್ಕಾರ ಬಂದ ಆರೇ ತಿಂಗಳಲ್ಲೇ ಸಾಲು ಸಾಲು ಭ್ರಷ್ಟಾಚಾರ ಪ್ರಕರಣ ಗಳು ಹೊರಗೆ ಬರುತ್ತಿವೆ. ಇದರ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡಬೇಕಿದೆ. ಆಗ ಮಾತ್ರ ನಾವು ಪ್ರತಿಪಕ್ಷವಾಗಿ ಕೆಲಸ ಮಾಡ್ತಿದ್ದೇವೆ ಎಂದು ಜನರಿಗೆ ತಿಳಿಯುತ್ತೆ. ಇಲ್ಲವಾದಲ್ಲಿ ನಾವು ಏನು ಮಾಡಿದ್ರು ಪ್ರಯೋಜನ ಆಗುವುದಿಲ್ಲ. ಚುನಾವಣೆಯಲ್ಲಿ ಪಕ್ಷ ಸೋತ ನಂತರ ಕಾರ್ಯಕರ್ತರು ಬೇಸರ ಆಗಿದ್ದಾರೆ. ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೊಳ್ಳುವ ಕೆಲಸ ಮಾಡಿ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಬರ ಅಧ್ಯಯನ ಮಾಹಿತಿ ಸಂಗ್ರಹಕ್ಕೆ ಎಲ್ಲರೂ ಬನ್ನಿ!
ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೂ, ನಾನು ನಿಮ್ಮ ಪರವಾಗಿ ಇರುತ್ತೇನೆ. ಕೆಲವೇ ದಿನಗಳಲ್ಲಿ ಚಳಿಗಾಲದ ಅಧಿವೇಶನ ಕೂಡ ಬರುತ್ತಿದೆ. ಅಷ್ಟೊತ್ತಿಗೆ ನಾವು ಬೆಂಗಳೂರಿನ ಸಮಸ್ಯೆಗಳ ಇಂಚಿಂಚು ಪಟ್ಟಿ ಮಾಡಿಕೊಳ್ಳಬೇಕು. ಆ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಬೇಕು. ನಿಮ್ಮ ನಿಮ್ಮ ಏನೇ ಆಸೆ, ಆಕಾಂಕ್ಷೆಗಳು ಇದ್ದರೂ ಅದರ ಬಗ್ಗೆ ವರಿಷ್ಠರು ನಿರ್ಧಾರ ಮಾಡ್ತಾರೆ. ಆದರೆ ನಾವು ಇಲ್ಲಿ ಒಟ್ಟಾಗಿ ಕೆಲಸ ಮಾಡಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಿದೆ. ಪಂಚರಾಜ್ಯಗಳ ಚುನಾವಣೆ ಬಳಿಕ ವರಿಷ್ಠರು ನಾಯಕತ್ವ ತೀರ್ಮಾನ ಮಾಡಬಹುದು. ನವೆಂಬರ್ 3 ರಿಂದ ಆರಂಭ ಆಗುತ್ತಿರುವ ಬರ ಅಧ್ಯಯನ ಪ್ರವಾಸದಲ್ಲಿ ಬೆಂಗಳೂರು ಅಧ್ಯಯನ ತಂಡದಲ್ಲಿ ನಾನಿದ್ದು, ನೀವೆಲ್ಲರೂ ನನ್ನ ಜೊತೆ ಬರಬೇಕು ಎಂದು ಶಾಸಕರಿಗೆ ತಿಳಿಸಿದ್ದಾರೆ. ನಿಮ್ಮ ನಿಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ವರದಿ ರೆಡಿ ಮಾಡಿಕೊಡಿ ಎಂದು ಶಾಸಕರಿಗೆ ತಿಳಿಸಿದ್ದಾರೆ. ಸಭೆಗೆ ಬಾರದ ಶಾಸಕರು ಕೂಡ ಬರ ಅಧ್ಯಯನ ಪ್ರವಾಸಕ್ಕೆ ಬರಬೇಕು ಎಂದು ಒತ್ತಿ ಹೇಳಿದ್ದಾರೆ.

ಬೆಂಗಳೂರು ಪ್ರವಾಸವೇ ಯಡಿಯೂರಪ್ಪಗೆ ಸವಾಲು..!
ಬೆಂಗಳೂರಿನಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಸಪೋರ್ಟ್ ಮಾಡಲಿಲ್ಲ ಅಂತಾ ಆರ್. ಅಶೋಕ್ ಕೊಂಚ ದೂರ ಸರಿದಿದ್ದಾರೆ. ಇನ್ನು ಎಸ್.ಟಿ ಸೋಮಶೇಖರ್ ಹಾಗು ಬೈರತಿ ಬಸವರಾಜ್ ಕಾಂಗ್ರೆಸ್ಗೆ ಪರೋಕ್ಷವಾಗಿ ಸಪೋರ್ಟ್ ಮಾಡ್ತಿದ್ದಾರೆ ಅಂತಾ ಪಕ್ಷವೇ ಸ್ವಲ್ಪ ಬದಿಗೆ ಸರಿಸಿದೆ. ಇನ್ನು ಶಾಸಕ ಮುನಿರತ್ನ, ಸತೀಶ್ ರೆಡ್ಡಿ, ಮಂಜುಳಾ ಲಿಂಬಾವಳಿ ಹಾಗು ಸುರೇಶ್ ಕುಮಾರ್ ಗೈರು ಹಾಜರಿಗೆ ನಿಖರ ಕಾರಣ ಗೊತ್ತಾಗಿಲ್ಲ. ಇವರು ಬರ ಪ್ರವಾಸಕ್ಕೆ ಬರುವಂತೆ ಮಾಡುವುದು ಯಡಿಯೂರಪ್ಪಗೆ ಇರುವ ಸವಾಲು. ಬರ ಪ್ರವಾಸ ಒಂದು ರೀತಿಯಲ್ಲಿ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ ಅಂತಾನೇ ಹೇಳಬಹುದು. ಒಂದು ವೇಳೆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು 17 ತಂಡಗಳ ನಾಯಕರಿಗೆ ಸವಾಲು ಆಗಿದೆ. ರಾಜ್ಯದಲ್ಲಿ ಎದುರಾಗಿರುವ ಬರಕ್ಕೆ ಪರಿಹಾರ ಕೊಡದೆ ಇದ್ದರೆ ಕಾಂಗ್ರೆಸ್ ಸರ್ಕಾರ ಮುಗಿ ಬೀಳುತ್ತಿದೆ. ಒಂದು ವೇಳೆ ಪರಿಹಾರ ಕೊಡುವುದಾದರೆ ಹೇಗೆ ಕೊಡಬೇಕು ಅನ್ನೋದನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರ ವರದಿ ಬಯಸಿದೆ ಅಂತಾನೇ ಹೇಳಬಹುದು.