ಹುಬ್ಬಳ್ಳಿ ;ಏ.06: ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಸಿಗೆ ಇರಲಿಲ್ಲ, ಅವರದ್ದು ಕೇವಲ ಡೋಂಗಿತನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಬಿಜೆಪಿಗೆ ತಿರುಗು ಬಾಣ ಆಗಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಅವರು ನಮ್ಮ ನಿರ್ಧಾರಗಳು ಕಾಂಗ್ರೆಸ್ ಗೆ ತಿರುಗು ಬಾಣ ಆಗಲಿದೆ. ಕಾಂಗ್ರೆಸ್ ಮಾಡದೆ ಇದ್ದುದನ್ನು ಬಿಜೆಪಿ ಮಾಡಿ ತೋರಿಸಿದೆ ಎಂದರು.
ಇಷ್ಟು ದಿನದ ದೀನದಲಿತನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿತ್ತು. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಹತಾಶೆಯಿಂದ ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟುದಿನ ಅವರು ಹೇಳಿಕೊಂಡು ಬಂದಿದ್ದು ಅವರಿಗೇ ತಿರುಗು ಬಾಣ ಆಗಲಿದೆ ಎಂದರು.
ಅಂತಿಮ ಪಟ್ಟಿ ಬಿಡುಗಡೆ : ರಾಜ್ಯ ಕೋರ್ ಕಮಿಟಿ ಸಭೆ ನಿನ್ನೆ ಸಭೆ ಮುಕ್ತಾಯವಾಗಿದೆ. ಏಪ್ರಿಲ್ 8 ರಂದು ಸಭೆ ಸೇರಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು. ಸೆಲೆಬ್ರಿಟಿಗಳು ಬಿಜೆಪಿ ಪರ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ತೆಲಗು ಚಿತ್ರನಟ ಪವನ್ ಕಲ್ಯಾಣ್ ಅವರನ್ನು ಕೇಂದ್ರ ನಾಯಕರು ಭೇಟಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾದು ನೋಡಿ ಎಂದ ಅವರು, ಕೊಲೆ ಆರೋಪಿ ವಿನಯ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿನಯ್ ಕುಲಕರ್ಣಿ ಪ್ರಕರಣ ನ್ಯಾಯಾಲಯದಲ್ಲಿದೆ.ಕಾನೂನಾತ್ಮಕ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಈ ರೀತಿಯ ಪ್ರಕರಣಗಳಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.
ಪ್ರಕರಣದ ಹಂತ ಪರಿಶೀಲಿಸಿ ಟಿಕೆಟ್ : ಅಪರಾಧ ಹಿನ್ನೆಲೆಯುಳ್ಳವರಿಗೆ ಬಿಜೆಪಿ ಟಿಕೆಟ್ ನೀಡಿರುವ ಬಗ್ಗೆ ಮಾತನಾಡಿ, ಕಾನೂನು ಬಹಳ ಸ್ಪಷ್ಟವಾಗಿದೆ. ಪ್ರಕರಣಗಳು ವಿವಿಧ ಹಂತದಲ್ಲಿ ಇರುತ್ತವೆ. ಇದನ್ನೆಲ್ಲ ಗಮನಿಸಿ ಟಿಕೆಟ್ ನೀಡಲಾಗುವುದು ಎಂದರು. ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಮೂರು ನಾಲ್ಕು ಹಂತದಲ್ಲಿ ಪರಿಶೀಲಿಸಿ ವರದಿ ಪಡೆದುಕೊಳ್ಳಲಾಗಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು ಎಂದರು.
ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಅದಕ್ಕೆ ಯಾರು ಕಿವಿಗೊಡಬಾರದು ಎಂದರು.