ಮೈಸೂರು : ಈ ಬಾರಿಯ ಹೈವೋಲ್ಟೇಜ್ ಕಣವಾಗಿರುವ ವರುಣದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತಗಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗದ್ದಲ ಸಂಭವಿಸಿದೆ. ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಸೋಮಣ್ಣ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಬೂತ್ ಬಳಿ ಸೋಮಣ್ಣ ತೆರಳಬಾರದು ಎಂದು ಒಂದು ಗುಂಪು ಗಲಾಟೆ ಆರಂಭಿಸಿತ್ತು. ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಿದ ಸೋಮಣ್ಣ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಇರುವ ಜನರೆಲ್ಲ ಇಲ್ಲಿಯವರಲ್ಲ. ಅವರನ್ನು ಒಮ್ಮೆ ವಿಚಾರಿಸಿ ಎಂದು ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.
ಬೂತ್ ಪರಿಶೀಲನೆಗೆ ಸೋಮಣ್ಣ ಹೋಗಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರೆ ಬೂತ್ ತೆರಳಲೇಬೇಕು ಎಂದು ಬಿಜೆಪಿ ಕಾರ್ಯಕರ್ತರು ಕ್ಯಾತೆ ತೆಗೆದಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸ್ ಬಂದೋಬಸ್ತ್ನಲ್ಲಿ ಸೋಮಣ್ಣ ಬೂತ್ ಪರಿಶೀಲನೆ ಮಾಡಿ ತೆರಳಿದ್ದಾರೆ.