ಕಳೆದ ಮೂರು-ನಾಲ್ಕು ದಶಕಗಳಿಂದ ಭಾರತದ ರಾಜಕೀಯದಲ್ಲಿ ಗಣನೀಯ ಪ್ರಮಾಣದ ಬದಲಾವಣೆ ಆಗಿದೆ. ದೇಶಕ್ಕಾಗಿ ನಿರ್ಮಾಣಗೊಂಡ ಕೆಲ ಪಕ್ಷಗಳು ಇಂದು ಕೋಮು ಹಾಗೂ ಜಾತಿಗಳ ಬೂಟು ನೆಕ್ಕುವ ಪರಂಪರೆಗೆ ನಾಂದಿ ಹಾಡಿದೆ. ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯಗಳಿಗೆ ಕೊಳ್ಳಿ ಇಟ್ಟು, ಚುನಾವಣಾ ತಂತ್ರಗಳಿಗೆ ಮಾತ್ರ ಅವುಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವತ್ತು ಭಾರತವನ್ನ ಅಕ್ಷರಶಃ ಸುಡುತ್ತಿರುವುದು ಬಡತನವಲ್ಲ, ಕೆಲ ಪ್ರಮುಖ ರಾಜಕೀಯ ಪಕ್ಷಗಳು ಸೃಷ್ಟಿಸಿದ ಕೋಮು ದಳ್ಳುರಿ..
ಭಾರತ ಮೂಲತಃ ಪ್ರಕೃತಿ ಆರಾಧಕರ ದೇಶ, ಈ ನೆಲದ ಸಂತರೂ ಸೇರಿದ ಹಾಗೆ ನೈಜ ದಾರ್ಶನಿಕರು ಕೂಡ ಭಾರತೀಯರ ಪ್ರಕೃತಿ ಆರಾಧನೆ ಮತ್ತು ಸೌಹಾರ್ದಯುತ ಬದುಕಿನ ಬಗ್ಗೆ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ, ಕೋಮುವಾದಿಗಳು ಮತ್ತು ಜಾತಿವಾದಿ ಮನಸ್ಥಿತಿಗಳು ಆ ನೈಜ ಇತಿಹಾಸ ಮತ್ತು ಪರಂಪರೆಯನ್ನು ತಿದ್ದುವ ಕೆಲಸವನ್ನು ಯಶಸ್ವಿಯಾಗಿ ಮಾಡಿವೆ ಮತ್ತು ಮಾಡುತ್ತಿವೆ ಇದು ಭಾರತದ ನೈಜ ಚಿತ್ರಣ.

ಇಂದು ಭಾರತದ ಮೂಲ ಆಶಯಗಳಿಗೆ ಧಕ್ಕೆ ಬಂದಿರುವುದು ಕೂಡ ರಾಜಕೀಯ ಪಕ್ಷಗಳ ಜಾತಿವಾದ ಮತ್ತು ಕೋಮುವಾದದಿಂದ. ಇವತ್ತು ಈ ಎರಡು ವಿಚಾರಗಳನ್ನ ಜನರ ಮನಸ್ಸಿನಲ್ಲಿ ಭಿತ್ತದೇ ಹೋದರೆ ಮುಂಬರುವ ದಿನಗಳಲ್ಲಿ ಮತ ವಿಭಜನೆ ಮಾಡಲು ಸಾದ್ಯವಿಲ್ಲ ಎಂಬುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಹೀಗಾಗಿ ಭಾರತೀಯ ಸಮಾಜದಲ್ಲಿ ಎಂದಿಗೂ ಕೂಡ ಕೋಮು ಮತ್ತು ಜಾತಿಗಳ ನಡುವೆ ಸಾಮರಸ್ಯ ಎಂಬುವುದನ್ನು ಕಾಣಲು ಕೂಡ ಸಾಧ್ಯವಾಗಿಲ್ಲ, ಇದಕ್ಕೆ ಆಯಾ ಸಮುದಾಯಗಳ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಎಂಬುವುದನ್ನ ತಳ್ಳಿ ಹಾಕಲು ಸಾಧ್ಯವಿಲ್ಲ, ಆದರೆ ಇದನ್ನೇ ಪ್ರಬಲ ರಾಜಕೀಯ ಪಕ್ಷಗಳು ಲಾಭವಾಗಿ ಬಳಸಿಕೊಂಡಿರೋದು ಸುಳ್ಳಲ್ಲ

ಈ ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ ; ಕಾಶ್ಮೀರ | ರಜೆಯ ಮೆಲೆ ಊರಿಗೆ ಬಂದಿದ್ದ ಯೋಧ ನಾಪತ್ತೆ ; ವ್ಯಾಪಕ ಶೋಧ
ಇವತ್ತು ಭಾರತದ ರಾಜಕೀಯ ಪರಿಸ್ಥಿತಿ ಇವುಗಳ ಒಳಗೆ ಸಿಲುಕಿಕೊಂಡಿದೆ. ಇಂತಹ ಜಾತಿಯ ಇಂತಹ ಪ್ರಬಲ ನಾಯಕ ಆ ಪಕ್ಷದಲ್ಲಿದ್ದಾನೆ ಎಂದರೆ ಮುಗಿತು, ಬಹುತೇಕ ಆ ಜಾತಿ ಆಧಾರಿತ ಪ್ರಮುಖ ಸಮುದಾಯಗಳೆಲ್ಲ ಆ ಪಕ್ಷಗಳ ಹಿಂದೆ ಓಡಿಬಿಡುತ್ತವೆ, ಇದು ಕೇವಲ ಯಾವುದೋ ಒಂದು ಪಕ್ಷದ ಕತೆಯಲ್ಲ, ಇವತ್ತು ದೇಶದ ಪ್ರಮುಖ ಪಕ್ಷಗಳಲ್ಲೂ ಕೂಡ ಇಂತಹದ್ದೇ ಕೆಟ್ಟ ರಾಜಕಾರಣವನ್ನ ಮಾಡಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕೆ ಇವತ್ತು ಬಿಜೆಪಿ, ಕಾಂಗ್ರೆಸ್ ಸೇರಿದ ಹಾಗೆ ವಿವಿಧ ಪಕ್ಷದ ಪ್ರಮುಖರು ದೇಶದ ಎಲ್ಲಾ ಮೂಲೆಗಳಿಂದಲೂ ಕೂಡ, ಅಲ್ಲಿ ಸ್ಥಳೀಯ ಸಮುದಾಯದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರನ್ನೇ ರಾಜಕೀಯಕ್ಕೆ ಕರೆತರಲಾಗುತ್ತಿದೆ. ಆ ಮೂಲಕ ಎಲ್ಲಾ ಪಕ್ಷಗಳು ತಮ್ಮ ಓಟ್ ಬ್ಯಾಂಕ್ ಬಲಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಒಟ್ಟರೆಯಾಗಿ ಇವತ್ತು ಭಾಷಣಗಳಿಗೆ, ದೊಡ್ಡ ದೊಡ್ಡ ಘೋಷಣೆಗಳಿಗೆ ಮತ್ತು ತಮ್ಮ ಪಕ್ಷಗಳ ಲಾಭಕ್ಕಾಗಿ ಮಾತ್ರ ಜಾತ್ಯಾತೀತ ಎಂಬ ಪದಗಳನ್ನ ಹೇಳಿಕೊಳ್ಳಲಾಗುತ್ತಿದೆ (ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖಾಸಗಿ ವಾಹಿನಿಯೊಂದರಲ್ಲಿ ನೀಡಿದ್ದ ಸಂದರ್ಶನದಲ್ಲಿನ ವೇಳೆ ನೀಡಿದ ಹೇಳಿಕೆ). ಆದರೆ ಈ ರೀತಿಯಾಗಿ ಜಾತ್ಯಾತೀತ ಸಿದ್ದಾಂತವನ್ನ ತಮ್ಮ ಅಧಿಕಾರದ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದು ನಿಜಕ್ಕೂ ಕೂಡ ಬಹುದೊಡ್ಡ ದುರಂತ ಎಂದರೆ ತಪ್ಪಾಗೋದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ರಾಜಕೀಯ ಪಕ್ಷಗಳು ಈ ಜಾತಿವಾದ, ಕೋಮುವಾದ ಸಿದ್ಧಾತಂಗಳನ್ನು ಬಿಟ್ಟುಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಈ ಸಿದ್ಧಾಂತಗಳನ್ನ ನಮ್ಮ ರಾಜಕೀಯ ಪಕ್ಷಗಳು ತೊರೆದಿದ್ದರೆ ಭಾರತ ಸಮಗ್ರವಾಗಿ ಬದಲಾಗುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ ಬದಲಾಗಿ ಪ್ರಜ್ಞಾವಂತ ನಾಗರೀಕರು ಆಗಾಗ ಈ ರಾಜಕೀಯ ಪಕ್ಷಗಳನ್ನ ಎಚ್ಚರಿಸುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.. ಆದರೆ ಎಚ್ಚೆತ್ತುಕೊಳ್ಳುವ ಮನಸ್ಥಿತಿ ಮಾತ್ರ ಯಾವ ರಾಜಕೀಯ ಪಕ್ಷದ ಬಳಿಯೂ ಇಲ್ಲದಂತಾಗಿದೆ ಎಂಬುವುದು ಸುಳ್ಳಲ್ಲ..