ಯುಎಸ್ಎ (USA) ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರದ (Cold War) ಕಾಲದಲ್ಲಿ ಎರಡೂ ಶಕ್ತಿ ಕೇಂದ್ರಗಳಿಂದ ದೂರವುಳಿದು ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಮತ್ತು ಯುಗೊಸ್ಲಾವಿಯದ ಅಧ್ಯಕ್ಷ ಜೋಸಿಫ್ ಬ್ರೋಜ್ ಟಿಟೋ ಅವರ ನೇತೃತ್ವದಲ್ಲಿ ಮೂರನೇ ರಂಗವಾಗಿ ಆಲಿಪ್ತ ಚಳವಳಿ (Non Aligned Movement) ಪ್ರಾರಂಭವಾಗಿತ್ತು. ಸಾಮ್ರಾಜ್ಯಶಾಹಿ, ವಸಾಹತುಶಾಹಿ, ನವ ವಸಾಹತುಶಾಹಿ, ವರ್ಣ ಭೇದ ನೀತಿ, ವಿದೇಶಿ ಆಕ್ರಮಣ ಶೀಲತೆ ಮುಂತಾದ ದಮನಕಾರಿ ರಾಜಕೀಯವನ್ನು ವಿರೋಧಿಸುವ ನೀತಿಯನ್ನು ಆಲಿಪ್ತ ರಾಷ್ಟ್ರಗಳು ಹೊಂದಿದ್ದವು.
ಆದರೆ 1991ರ ಡಿಸೆಂಬರ್ 31ರಂದು ಸೋವಿಯತ್ ಒಕ್ಕೂಟವು (Soviet Fall) ಅರ್ಮೇನಿಯಾ, ಎಸ್ಟೋನಿಯಾ, ಜಾರ್ಜಿಯಾ, ಕಝಕಿಸ್ತಾನ್, ಕಿರ್ಗಿಸ್ತಾನ್, ಲಾಟ್ವಿಯಾ, ಲಿಥುಬೇನಿಯಾ , ಮೊಲ್ಡೊವಾ, ರಷ್ಯಾ, ಉಕ್ರೇಬಿಸ್ತಾನ್, ಉಝ್ಬೇಕಿಸ್ತಾನ್, ಉಕ್ರೇನ್, ಬೆಲಾರಸ್ ಗಳೆಂಬ15 ಸ್ವತಂತ್ರ ರಾಷ್ಟ್ರಗಳಾದವು. ಸೋವಿಯತ್ ಒಕ್ಕೂಟದ ಪತನೊಂದಿಗೆ ಶೀತಲ ಸಮರವೂ ಮುಕ್ತಾಯವಾಗಿತ್ತು.
1922ರಲ್ಲಿ ಸ್ವಇಚ್ಛೆಯಿಂದ ಸೋವಿಯತ್ ಸೇರಿದ್ದ ಉಕ್ರೇನ್ ಮತ್ತು ರಷ್ಯಾ ನಡುವೆ ಸರಿಯಾಗಿ ನೂರು ವರ್ಷಗಳ ನಂತರ ಸಂಬಂಧ ಹಳಸಿದ್ದು ಯುದ್ಧ ಪ್ರಾರಂಭವಾಗಿದೆ. ಅಮೆರಿಕ ಸೇರಿದಂತೆ ಜಾಗತಿಕ ನಾಯಕರು ಯುದ್ಧದಿಂದ ಹಿಂದೆ ಸರಿಯುವಂತೆ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೆನಡಾ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದೆ. ನ್ಯಾಟೋ ಒಕ್ಕೂಟಕ್ಕೆ ಸೇರುವ ನಿರ್ಧಾರದಿಂದ ಉಕ್ರೇನ್ ಹಿಂದೆ ಸರಿಯಬೇಕು ಮತ್ತು ಯುರೋಪಿಯನ್ ರಾಷ್ಟ್ರಗಳು ಎಂದೂ ಉಕ್ರೇನನ್ನು ನ್ಯಾಟೋಗೆ ಸೇರಿಸುವುದಿಲ್ಲವೆಂದು ಪ್ರಮಾಣೀಕರಿಸಬೇಕು ಎನ್ನುವುದು ಯುದ್ಧದಿಂದ ಹಿಂದೆ ಸರಿಯಲು ರಷ್ಯಾ ಒಡ್ಡಿದ ಷರತ್ತುಗಳು. ನ್ಯಾಟೋ ಆಗಲಿ ಉಕ್ರೇನ್ ಆಗಲಿ ಈ ಷರತ್ತನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಆದರೆ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ರಷ್ಯಾ ಮತ್ತು ಭಾರತದ ನಡುವೆ ನಿಕಟ ಸಂಬಂಧ ಬೆಳೆದಿತ್ತು. ರಷ್ಯಾ ಮತ್ತು ಭಾರತ ಎರಡೂ ಈ ಸಂಬಂಧವನ್ನು “ವಿಶೇಷ ಮತ್ತು ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆ (special and privileged strategic partnership)” ಎಂದು ಕರೆಯುತ್ತವೆ. 2014 ರ ಬಿಬಿಸಿ ವರ್ಲ್ಡ್ ಸರ್ವೀಸ್ ಪೋಲ್ ಪ್ರಕಾರ, 85% ರಷ್ಯನ್ನರು ಭಾರತವನ್ನು ಧನಾತ್ಮಕವಾಗಿ ನೋಡುತ್ತಾರೆ ಮತ್ತು ಕೇವಲ 9% ಜನರು ಮಾತ್ರ ನಕಾರಾತ್ಮಕ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ, ಮಾಸ್ಕೋ ಮೂಲದ ಸರ್ಕಾರೇತರ ಥಿಂಕ್ ಟ್ಯಾಂಕ್ ‘ಲೆವಾಡಾ-ಸೆಂಟರ್’ನ 2017 ರ ಅಭಿಪ್ರಾಯ ಸಂಗ್ರಹವು ರಷ್ಯನ್ನರು ಭಾರತವನ್ನು ತಮ್ಮ ಪ್ರಮುಖ ಐದು ಸ್ನೇಹಿತರಲ್ಲಿ ಒಂದು ಎಂದು ಗುರುತಿಸಿದ್ದಾರೆ ಎಂದು ಹೇಳುತ್ತದೆ.
ಈಗ ಈ ವಿಶೇಷ ಬಂಧವನ್ನು ಮುಂದಿಟ್ಟುಕೊಂಡು ಭಾರತಕ್ಕೆ ಮಾಡಿದ ಮನವಿಯಲ್ಲಿ, ಉಕ್ರೇನಿಯನ್ ರಾಜತಾಂತ್ರಿಕ ಇಗೊರ್ ಪೊಲಿಖಾ ಅವರು ಎಲ್ಲಾ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಕೇಳಿದ್ದಾರೆ ಮತ್ತು ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವಿನಿಂದ ಉಕ್ರೇನ್ ಗೆ ತೀವ್ರವಾಗಿ ಅತೃಪ್ತಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಪೊಲಿಖಾ ತಿಳಿಸಿದ್ದಾರೆ.
ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು. ನೀವು ರಶಿಯಾದೊಂದಿಗೆ ವಿಶೇಷ ಸವಲತ್ತು ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದ್ದೀರಿ ಎಂದು ನಿಮಗೆ ತಿಳಿದಿದೆ. ಪುಟಿನ್ ವಿಶ್ವ ನಾಯಕರ ಮಾತಗಳನ್ನು ಎಷ್ಟು ಕೇಳುತ್ತಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಮ್ಮ ಪರವಾಗಿ ಮೋದಿಯವರ ಧ್ವನಿಯಿಂದಾಗಿ, ಪುಟಿನ್ ಕನಿಷ್ಠ ಯೋಚಿಸುತ್ತಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹಿರಿಯ ಉಕ್ರೇನಿಯನ್ ರಾಜತಾಂತ್ರಿಕರಾದ ಪೊಲಿಖಾ ಹೇಳಿದ್ದಾರೆ.
ಭಾರತವು ‘ಉಕ್ರೇನಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ’ ಎಂದು ಹೇಳಿರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, “ನಾವು ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದೇವೆ. ನಿಕಟವಾಗಿ ಗಮನಿಸುತ್ತಿದ್ದೇವೆ ಎಂಬ ಮಾತಿನ ಅರ್ಥವೇನು?” ಎಂದು ಕೇಳಿದ್ದಾರೆ.

ರಷ್ಯಾದ ಕ್ರಮಗಳಿಗೆ ತಮ್ಮ ವಿರೋಧವನ್ನು ಸೂಚಿಸಲು ಎಲ್ಲಾ ದೇಶಗಳಿಗೆ ಕರೆ ನೀಡಿದ ಅವರು, ಮೌಖಿಕ ಖಂಡನೆ ಅಥವಾ ಮಾನವೀಯ ನೆರವು ಯಾವುದೇ ರೂಪದಲ್ಲಾದರೂ ಸರಿ ವಿರೋಧ ಸೂಚಿಸಿ ಎಂದು ಹೇಳಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ (pak pm imran khan) ಅವರ ಮಾಸ್ಕೋ ಭೇಟಿಯ ಬಗ್ಗೆಯೂ ವ್ಯಂಗ್ಯವಾಡಿದ ಅವರು, ರಷ್ಯಾದೊಂದಿಗಿನ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಎಲ್ಲಾ ದೇಶಗಳು ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ. “ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ನಡೆಸಲು ಇದು ಸರಿಯಾದ ಸಮಯವಲ್ಲ” ಎಂದಿದ್ದಾರೆ. ಭಾರತದ ಸುಮಾರು 15,000 ವಿದ್ಯಾರ್ಥಿಗಳು ಉಕ್ರೇನಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರೆಲ್ಲರನ್ನು ಭಾರತಕ್ಕೆ ಕರೆತರುವ ಪ್ರಯತ್ನ ಜಾರಿಯಲ್ಲಿದೆ. ಈ ನಡುವೆ ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಲಿಂಡ್ನರ್ “ಸಮರ್ಥನೀಯವಲ್ಲದ ರಷ್ಯಾದ ಮಿಲಿಟರಿ ಆಕ್ರಮಣದ ವಿರುದ್ಧ ಉಕ್ರೇನ್ನೊಂದಿಗೆ ‘ಐಕ್ಯಮತ’ ವನ್ನು ತೋರಿಸಲು ಸಭೆ ನಡೆಸಲಾಗಿದೆ. ಶಾಂತಿ ಮತ್ತು ನಿಯಮಾಧಾರಿತ ಅಂತರಾಷ್ಟ್ರೀಯ ಕಾನೂನಿನೊಂದಿಗೆ ನಿಲ್ಲುವ ಸಮಯವಾಗಿದೆ ಇದು” ಎಂದು ಹೇಳಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ (ukraine crisis) ಕುರಿತಾಗಿ ಯಾವುದೇ ಅಧಿಕೃತ ನಿಲುವನ್ನು ಇದುವರೆಗೆ ತೆಗೆದುಕೊಳ್ಳದ ಭಾರತ ಕಾದು ನೋಡುವ ನಿಲುವನ್ನು ತಾಳಿದಂತೆ ಕಾಣುತ್ತಿದೆ. ಎರಡೂ ಕಡೆಯವರು ಶಾಂತಿ ಪಾಲಿಸಿ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಮಾತಾಡಿರುವ ಭಾರತವು ತನ್ನ ಬಹುಕಾಲದ ಗೆಳೆಯ ರಷ್ಯಾದ ಜೊತೆ ನಿಲ್ಲುತ್ತಾ ಅಥವಾ ಉಕ್ರೇನ್ನ ಪರ ವಹಿಸುತ್ತಾ ಎಂಬ ಕುತೂಹಲ ಜಾಗತಿಕ ನಾಯಕರಲ್ಲಿ ಮನೆ ಮಾಡಿದೆ.






