
ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ
ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ವಿಚಾರಣಾ ಆಯೋಗವು ದಿನಾಂಕ: 12.03.2025 ರಂದು ಈ ಕೆಳಕಂಡಂತೆ ಎರಡು ಪ್ರತ್ಯೇಕ ತನಿಖಾ ವರದಿಗಳನ್ನು ಸಲ್ಲಿಸಿದೆ.
1) ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪಗಳ ತನಿಖಾ ವರದಿ
2) ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 01 ರಿಂದ 18 ರವರೆಗಿನ ಉಪ/ಸೀಳು ಕಾಲುವೆಗಳ ಆಧುನೀಕರಣ ಅಂದಾಜು ಪಟ್ಟಿ – ತನಿಖಾ ವರದಿ
ಮೇಲಿನ ಕ್ರಮಸಂಖ್ಯೆ (1)ರ ತನಿಖಾ ವರದಿಯಲ್ಲಿ:
- ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇಕಡ 40 ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಇದಲ್ಲದೆ ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್.ಆರ್. ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿಯ ಜಾರಿ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಿಕೆ, ಸೀನಿಯಾರಿಟಿ ಮೇಲೆ ಬಿಲ್ ಪಾವತಿ, ಕೆ.ಆರ್.ಐ.ಡಿ.ಎಲ್. ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡಿಕೆ ತಪ್ಪಿಸುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆಯೂ ತನಿಖೆ ನಡೆಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.. ಈ ಸಂಬಂಧ ವಿಚಾರಣಾ ಆಯೋಗವು ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ವಿವರವಾದ ಅಧ್ಯಯನ ಮಾಡಿ ತನಿಖೆ ನಡೆಸಿ ಪ್ರಸ್ತುತ ವರದಿಯನ್ನು ಸಲ್ಲಿಸಿದೆ.
- ಇದೊಂದು ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಿಸಿದ ಆರೋಪವಾಗಿರುವುದರಿಂದ ಸಾರ್ವಜನಿಕರ ಹೇಳಿಕೆಗಳು ಮತ್ತು ವಿವರಗಳು ಬಹು ಮುಖ್ಯ ಎಂಬುದನ್ನು ಮನಗಂಡು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆಯೂ ಆಯೋಗವು ಕೂಲಂಕಷವಾಗಿ ತನಿಖೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳೊಂದಿಗೆ ವರದಿ ತಯಾರಿಸಲಾಗಿದೆ.
- ಗುತ್ತಿಗೆದಾರರ ಸಂಘದ ಆರೋಪಗಳ ತನಿಖೆ ನಡೆಸುತ್ತಿದ್ದ ಜೊತೆ ಜೊತೆಯಲ್ಲಿಯೇ ಸರ್ಕಾರವು ರಾಜ್ಯದ ಪ್ರಮುಖ ಐದು ಇಲಾಖೆಗಳಲ್ಲಿ ದಿನಾಂಕ:26.07.2019 ರಿಂದ 31.03.2023ರ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ ವರದಿಯನ್ನು ನೀಡಬೇಕೆಂದು ತಿಳಿಸಿತು. ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗವು ವೈಜ್ಞಾನಿಕವಾಗಿ ರ್ಯಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ತನಿಖೆಗೆ ಆಯ್ಕೆ ಮಾಡಿಕೊಂಡಿದೆ. ಈ ಆಯ್ಕೆಯಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ
ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಮತ್ತು ಎಲ್ಲಾ ಮೊತ್ತದ ಕಾಮಗಾರಿಗಳನ್ನು ಪರಿಗಣಿಸಲಾಗಿದೆ.

- ಕಾಮಗಾರಿಗಳ ತನಿಖೆಯು ಕಡತಗಳ ಪರಿಶೀಲನೆ, ಸ್ಥಳ ಪರಿಶೀಲನೆ ಮತ್ತು ಲೆಕ್ಕಪತ್ರಗಳ ಪರಿಶೀಲನೆ ಅಂಶಗಳನ್ನು ಒಳಗೊಂಡಿರುತ್ತದೆ.
- ತನಿಖಾ ವರದಿಯು ಅನುಬಂಧಗಳೊಂದಿಗೆ ಸುಮಾರು ಇಪ್ಪತ್ತು ಸಾವಿರ ಪುಟಗಳನ್ನು ಹೊಂದಿದೆ.
ಮೇಲಿನ ಕ್ರಮಸಂಖ್ಯೆ (2)ರ ತನಿಖಾ ವರದಿಯಲ್ಲಿ: - ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 01 ರಿಂದ 18 ರವರೆಗಿನ ಉಪ/ಸೀಳು ಕಾಲುವೆಯ ಆಧುನೀಕರಣ ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಂಜೂರಾದ ಪತ್ರಿಕೆಗಳಲ್ಲಿ ಅಳವಡಿಸಿಕೊಂಡಿರುವ ಹಾಗೂ ಸದರಿ ಅಂದಾಜು ಪತ್ರಿಕೆಗಳನ್ನು ಪರಿಶೀಲಿಸಿ ಪ್ರಸಕ್ತ ನಿಗಮದ ಅಂದಾಜು ಪರಿಶೀಲನಾ ಸಮಿತಿಯು ಗಮನಿಸಿರುವ ತಾಂತ್ರಿಕ ನ್ಯೂನತೆಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಸಿದ್ದಗಂಗಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಿದ ತಾಂತ್ರಿಕ ತಜ್ಞರ ಸಮಿತಿಯನ್ನು ವಿಸರ್ಜಿಸಿ ವಿಚಾರಣಾ ಆಯೋಗಕ್ಕೆ ಹೆಚ್ಚುವರಿಯಾಗಿ ವಹಿಸಿರುವ ತನಿಖೆಯನ್ನು ಆಯೋಗವು ನಡೆಸಿ ತನಿಖಾ ವರದಿಯನ್ನು ಸಲ್ಲಿಸಿದೆ.
- ತನಿಖಾ ವರದಿಯು ಅನುಬಂಧಗಳೊಂದಿಗೆ ಸುಮಾರು ಸಾವಿರದ ಎಂಟುನೂರು ಪುಟಗಳನ್ನು ಹೊಂದಿದೆ.
