ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ದೇಶಾದ್ಯಂತ ಸದ್ದು ಮಾಡಿದೆ. ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾಗಿಯಾಗಿದ್ದಾರೆ ಆರೋಪ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ. ಎ1 ಸಿಎಂ ಸಿದ್ದರಾಮಯ್ಯ ಮತ್ತು ಎ2 ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆಗಿದ್ದಾರೆ. ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ, ಸರ್ಕಾರ ಅಲ್ಪ ಮಟ್ಟಿಗೆ ಅಲುಗಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಆರೋಪ ಕೇಳಿಬರುತ್ತಿದ್ದಂತೆ ಸಚಿವರು, ಹೈಕಮಾಂಡ್, ಶಾಸಕರು ಮತ್ತು ಕಾರ್ಯಕರ್ತರು ಸಿಎಂ ಪರವಾಗಿ ನಾವಿದ್ದೇವೆ ಎಂದು ಹೇಳಲು ಆರಂಭಿಸಿದರು. ಆದರೆ ಇದೀಗ, ಸ್ವತಃ ಸಂಪುಟದ ಸಚಿವರು ಹಗರಣದ ವಿಚಾರವಾಗಿ ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇಡೀ ಪ್ರಕರಣವನ್ನು ನಿಭಾಯಿಸಿದ ರೀತಿ ಬಗ್ಗೆ ಸಚಿವರು ಒಳಗೊಳಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಟೀಂ ಮೊದಲೆ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳಲಿಲ್ಲ. ದೂರುದಾರರನ್ನು ಬಹಳ ಸದರವಾಗಿ ತೆಗೆದುಕೊಂಡರು. ದೂರುದಾರರ ಬಳಿ ದಾಖಲೆ ಸಂಗ್ರಹವಾಗುತ್ತಿದ್ದರೂ ಕೂಡ ಸಿಎಂ ಕಚೇರಿ ಗಮನಕ್ಕೆ ಬರಲಿಲ್ಲ ಎಂದಿದ್ದಾರೆ.
ಮೊದಲ ದೂರು ರಾಜ್ಯಪಾಲರಿಗೆ ಸಲ್ಲಿಕೆ ಆದಾಗಲೂ ಸಿಎಂ ಕಚೇರಿ ಗಮನಕ್ಕೆ ಬಂದಿಲ್ಲ. ಮುಡಾ ತಾಂತ್ರಿಕ ಸಮಿತಿ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ಅಯಕಟ್ಟಿನ ಜಾಗದಲ್ಲೇ ಮುಂದುವರಿಸಲಾಯಿತು. ಮೈಸೂರಿನ ಸಿಎಂ ಆಪ್ತ ನಾಯಕರು ಅನಗತ್ಯವಾಗಿ ದೂರುದಾರರನ್ನು ಎದುರು ಹಾಕಿಕೊಂಡರು. ಕೋರ್ಟ್ ಮೆಟ್ಟಿಲು ಹತ್ತಿದಾಗಲೂ ವಾದ ಮಾಡಿದ ರೀತಿ ಸಮರ್ಪಕವಾಗಿ ಇರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.