ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವಿಚಾರ ದಿನದಿಂದ ದಿನಕ್ಕೆ ಕಾವೇರಿರುತ್ತಿದೆ. ಈ ಕುರಿತು ಈಗ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.
ಚಾಮರಾಜನಗರದಲ್ಲಿ ಸಿಎಂ ರಾಜಿನಾಮೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವೆ ನಡೆದಿದ್ದ ಒಪ್ಪಂದದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಒಂದು ಒಪ್ಪಂದವಾಗಿತ್ತು. ಅಧಿಕಾರಕ್ಕೆ ಏರುವ ಮುನ್ನವೇ ಹೈಕಮಾಂಡ್ ಯಡಿಯೂರಪ್ಪಗೆ ನೀವು 2 ವರ್ಷಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದೀರಿ. ನಿಮಗೆ ವಯಸ್ಸಾಗಿದ್ದರೂ ನಾವು ನಿಮ್ಮ ಕೈಗೆ ಅಧಿಕಾರ ನೀಡುತ್ತಿದ್ದೇವೆ. ಆದರೆ ಈ ಅಧಿಕಾರದಲ್ಲಿ 2ವರ್ಷ ಮಾತ್ರ ನೀವು ಮುಂದುವರಿಯಲಿದ್ದೀರಿ ಎಂದು ಹೈಕಮಾಂಡ್ ಮೊದಲೇ ಬಿಎಸ್ವೈಗೆ ಹೇಳಿತ್ತು ಎಂದು ಸ್ಫೋಟಕ ಮಾಹಿತಿಯೊಂದನ್ನ ಬಾಯ್ಬಿಟ್ಟಿದ್ದಾರೆ.
75 ವರ್ಷಕ್ಕಿಂತ ಮೇಲ್ಪಟ್ಟವರನ್ನ ಸಿಎಂ ಮಾಡಬಾರದು ಅನ್ನೋದು ಬಿಜೆಪಿಯ ನಿಲುವು. ಆದರೆ ವಿಶೇಷ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರು. ಇದೀಗ ಹೈಕಮಾಂಡ್ ನೀಡಿದ್ದ ಅವಧಿ ಕೊನೆಗೊಂಡಿದ್ದು ಈ ಹಿಂದಿನ ಮಾತುಕತೆಯಂತೆಯೇ ಯಡಿಯೂರಪ್ಪ ನಡೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರದಲ್ಲಿ ಮುಂದುವರೆಯುವಂತೆ ಹಲವಾರು ಮಠಾಧೀಶರ ಒಂದು ಕಡೆ ಲಾಬಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸಿಎಂ ಕುರ್ಚಿಗಾಗಿ ಹಗ್ಗ ಜಗ್ಗಾಟ:
ಕಳೆದ ಒಂದು ವಾರದಿಂದ ಸಿಎಂ ಬದಲಾವಣೆ ಮಾಡದಂತೆ ಅನೇಕ ವೀರಶೈವ ಲಿಂಗಾಯತ ಮಠಗಳು ಸಿಎಂ ಯಡಿಯೂರಪ್ಪನವರಿಗೆ ಬಲವಾಗಿ ನಿಂತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸುತ್ತಿರುವುದು ಒಂದುಡೆಯಾದರೆ. ಮತ್ತೊಂದು ಕಡೆ ಅನೇಕ ರಾಜ್ಯದ ಬಿಜೆಪಿ ಶಾಸಕರು ಸಿಎಂ ಕುರ್ಚಿಗಾಗಿ ಹಗ್ಗ ಜಗ್ಗಾಟ ಮಾಡುತ್ತಿದ್ದಾರೆ. ಸಚಿವ ಈಶ್ವರಪ್ಪ ಮುಂದಿನ ಸಿಎಂ ಆಗಲಿ ಎಂದು ಹಿಂದುಳಿದ ವರ್ಗಗಳ ಮುಖಂಡರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ಸಿಎಂ ಸ್ಥಾನದ ಕುರಿತು ಖುದ್ದು ಈಶ್ವರಪ್ಪ ಪ್ರತಿಕ್ರಿಯಿಸಿ, ಸಿಎಂ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡ್ತಾರೆ ನನಗೆ ಸಿಎಂ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ಸಿದ್ದ ಎನ್ನುವಂತ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಸಿ.ಟಿ.ರವಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಸರನ್ನು ಸಂಘಪರಿವಾರ ಸೂಚಿಸಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದು ಬಿಜೆಪಿ ಹಿರಿಯ ನಾಯಕ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಯಡಿಯೂರಪ್ಪ ಷರತ್ತಿನಂತೆ ಹೋದರೆ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಅವರಲ್ಲಿ ಒಬ್ಬರನ್ನು ಸಿಎಂ ಮಾಡಬೇಕಾಗುತ್ತದೆ. ಆದರೆ, ಸಂಘಪರಿವಾರ ಮತ್ತು ಯಡಿಯೂರಪ್ಪ ವಿರೋಧಿ ಬಣದ ಆಯ್ಕೆಗಳು ಪ್ರಹ್ಲಾದ್ ಜೋಷಿ, ಸಿ ಟಿ ರವಿ ಮತ್ತು ಮುರುಗೇಶ್ ನಿರಾಣಿಯಾಗಿದ್ದಾರೆ. ಈ ಮೂವರೂ ಯಡಿಯೂರಪ್ಪ ವಿರೋಧಿ ಪಾಳೆಯದ ಪ್ರಮುಖರು.