ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಉದ್ಘಾಟನೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕುಟುಂಬ ಸಮೇತ ಮಂಗಳವಾರ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ.
ಇದೇ ವೇಳೆ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ 12 ರಾಜ್ಯಗಳ ಸಿಎಂಗಳು ಹಾಗೂ 9 ಡಿಸಿಎಂಗಳು ಪಾಲ್ಗೊಳ್ಳಲಿದ್ದಾರೆ. ಮಧ್ಯಪ್ರದೇಶ, ತ್ರಿಪುರಾ, ಮಣಿಪುರ, ಉತ್ತರ ಪ್ರದೇಶ , ಉತ್ತರಾಖಂಡ್, ಅರುಣಾಚಲ ಪ್ರದೇಶ, ಅಸ್ಸಾಂ, .ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ ರಾಜ್ಯದ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಉಪಸ್ಥಿತ ಇರುವರು ಎಂದು ತಿಳಿದು ಬಂದಿದೆ.
ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿರುವ ಫೋಟೋಗಳನ್ನು ಸಿಎಂ ಬೊಮ್ಮಾಯಿ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಅಧಿವೇಶನದಲ್ಲಿ ಭಾಗಿಯಾದ ನಂತರ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಅಧಿವೇಶನದ ಸಂದರ್ಭದಲ್ಲಿ ಮೂರು ದಿನಗಳ ಬೇರೆ ರಾಜ್ಯಕ್ಕೆ ತೆರಳುತ್ತಿರುದಕ್ಕೆ ಟೀಕೆ ವ್ಯಕ್ತವಾದ ಕೂಡಲೇ ಎಚ್ಚೆತ್ತ ಸಿಎಂ ಬೊಮ್ಮಾಯಿ ಒಂದು ದಿನಕ್ಕೆ ತಮ್ಮ ಪ್ರವಾಸವನ್ನ ಕಡಿತಗೊಳಿಸಿಕೊಂಡಿದ್ದಾರೆ.
![](https://pratidhvani.com/wp-content/uploads/2021/12/FGiivCgUUAAbC9t.jpg)
ಕಾಶಿ ವಿಶ್ವನಾಥ ಕಾರಿಡಾರ್ ವೀಕ್ಷಿಸಿ ಅದ್ಭುತವಾಗಿದೆ ಎಂದು ಸಿಎಂ ಬೊಮ್ಮಾಯಿ ಕೊಂಡಾಡಿದ್ದಾರೆ. ಮುಂದಿನ ತಿಂಗಳು ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ, ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಮುಖ್ಯಮಂತ್ರಿಗಳ ಬದಲಾವಣೆಗೆ ಮುಂದಾಗುವ ಕುರಿತು ಚಿಂತನೆ ನಡೆಸುತ್ತಿದೆ ಎಂಬ ಚರ್ಚೆಯ ನಡುವೆಯೇ ಸಿಎಂ ದೇವರ ಮೊರೆ ಹೋಗಿದ್ದಾರೆ ಅನ್ನೋ ಪ್ರಶ್ನೆ ಕೂಡ ಮೂಡಿದೆ.