• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಾಲಿನ್ಯ ಸ್ವಚ್ಚತೆ ಮತ್ತು ಬೌದ್ಧಿಕ ಅಸ್ವಸ್ಥತೆ : ನಾ ದಿವಾಕರ ಅವರ ಬರಹ

ನಾ ದಿವಾಕರ by ನಾ ದಿವಾಕರ
December 31, 2023
in ಅಂಕಣ, ಅಭಿಮತ
0
ಮಾಲಿನ್ಯ ಸ್ವಚ್ಚತೆ ಮತ್ತು ಬೌದ್ಧಿಕ ಅಸ್ವಸ್ಥತೆ : ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram


ದೈಹಿಕ ಶ್ರಮವನ್ನು ಕೀಳರಿಮೆಯಿಂದ ನೋಡುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕಿದೆ

ADVERTISEMENT

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ಆಧಾರವೇ ದುಡಿಮೆ ಮತ್ತು ದುಡಿಮೆಯು ಸೃಷ್ಟಿಸುವಂತಹ ಸಾಮಾಜಿಕ-ಆರ್ಥಿಕ ನೆಲೆಗಳು. ಕಾಯಕವನ್ನು ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎಂದು ವಿಂಗಡಿಸುವ ಮೂಲಕ ಭಾರತದ ಶ್ರೇಣಿ ವ್ಯವಸ್ಥೆ ಸಮಾಜವನ್ನು ಮೇಲು-ಕೀಳುಗಳ ಸ್ತರಗಳಲ್ಲಿ ಸ್ಥಾಪಿಸಿದೆ. ನಾಗರಿಕತೆಯು ಮುಂದುವರೆದಂತೆಲ್ಲಾ ಪ್ರಾಚೀನ ನಡವಳಿಕೆಗಳನ್ನು, ಆಚರಣೆಗಳನ್ನು ವರ್ಜಿಸಿ ಮುನ್ನಡೆವ ಯಾವುದೇ ಸಮಾಜದಲ್ಲಿ ಇಂತಹ ವ್ಯತ್ಯಯಗಳನ್ನು ಸುಧಾರಣೆಗೊಳಪಡಿಸುತ್ತಾ, ಹಿಂಬದಿಗೆ ಸರಿಸುತ್ತಾ ಒಂದು ಹಂತವನ್ನು ತಲುಪಿದ ಮೇಲೆ ಸಂಪೂರ್ಣವಾಗಿ ವರ್ಜಿಸುವ ಹಂತವನ್ನು ತಲುಪುತ್ತದೆ. ಇದು ವಿಶ್ವದಾದ್ಯಂತ ಎಲ್ಲ ನಾಗರಿಕತೆಗಳಲ್ಲೂ ಕಾಣಬಹುದಾದ ಸಮಾನ ಅಂಶ.

ಈ ಮಾದರಿಯ ಬೆಳವಣಿಗೆಯೇ ಮನುಜ ಸಮಾಜವನ್ನು ಆಧುನಿಕತೆಗೆ ಅರ್ಹವಾಗಿಸುತ್ತದೆ. ಮುಂದುವರೆದ ನಾಗರಿಕತೆ ಮತ್ತು ಆಧುನಿಕತೆಯನ್ನು ಸಮೀಕರಿಸಿ ನೋಡಿದಾಗ, ಸಮಾಜದೊಳಗಿನ ಪ್ರಾಚೀನ ಆಚರಣೆ/ನಡವಳಿಕೆಗಳು, ಚರಿತ್ರೆಯ ಪಳೆಯುಳಿಕೆಗಳಂತೆ ಕಾಣಬೇಕೇ ಹೊರತು, ಢಾಳಾಗಿ ಕಾಣುವಂತಹ ಜ್ವಲಂತ ನಿದರ್ಶನಗಳಾಗಿ ಕಾಣಬಾರದು. 21ನೆಯ ಶತಮಾನದ ಮಾನವ ಸಮಾಜ ಈ ಎಚ್ಚರಿಕೆಯೊಂದಿಗೇ ತನ್ನ ಜನಜೀವನದ ಮಾದರಿಗಳನ್ನು ಪುನಾರೂಪಿಸಿಕೊಳ್ಳುತ್ತಾ, ಸಮಾಜದ ಆಂತರ್ಯದಲ್ಲಿ ಉಳಿದಿರಬಹುದಾದ ಪ್ರಾಚೀನತೆಯ ಪಳೆಯುಳಿಕೆಗಳನ್ನೂ ಕಿತ್ತು ಹಾಕುವ ನಿಟ್ಟಿನಲ್ಲಿ ಸಾಗುವುದು ಕಾಲದ ಅನಿವಾರ್ಯತೆ ಎನ್ನಬಹುದು.

ಸಮಾನತೆಯ ನಾನಾರ್ಥಗಳು

ಆದರೆ ಆಧುನಿಕ ಭಾರತೀಯ ಸಮಾಜ, ವಿಜ್ಞಾನ-ತಂತ್ರಜ್ಞಾನದ ಕ್ರಾಂತಿಕಾರಕ ಹೆಜ್ಜೆಗಳನ್ನೂರುತ್ತಾ ಬಾಹ್ಯಾಕಾಶವನ್ನೇ ಭೇದಿಸಿ ಅನ್ಯ ಗ್ರಹಗಳ ಮೇಲೆ, ಚಂದ್ರನಂಗಳದಲ್ಲಿ ನೆಲೆಕಾಣಲು ಸಜ್ಜಾಗುತ್ತಿದ್ದರೂ, ತಾನು ಬದುಕುವ ಭೂಮಿಯ ಮೇಲಿರುವ ಅತಿ ಪ್ರಾಚೀನ ಮನುಜ-ಸಹಜ ನಡವಳಿಕೆಗಳನ್ನು, ಪದ್ಧತಿಗಳನ್ನು ಸರಿಪಡಿಸಿಕೊಳ್ಳಲು ಹೆಣಗಾಡುತ್ತಿರುವುದು ವಿಡಂಬನೆಯೇ ಸರಿ. ಸಮಾನತೆ ಎಂಬ ಉದಾತ್ತ ಪದ ಸಾರ್ವತ್ರಿಕವಾಗಿ ಬಳಕೆಗೆ ಬಂದು ಶತಮಾನಗಳೇ ಕಳೆದಿದ್ದರೂ, ಈ ಪದದ ಔನ್ನತ್ಯವಾಗಲೀ, ಇದರ ಹಿಂದಿನ ಸ್ಥಾಯಿಭಾವವಾಗಲೀ ಅಥವಾ ನಾಗರಿಕತೆ ಬೆಳೆದುಬಂದ ಹಾದಿಯಲ್ಲಿ ʼಸಮಾನತೆʼಯ ಪರಿಕಲ್ಪನೆ ಪಡೆದುಕೊಂಡಂತಹ ಮಾನವೀಯ ಮೌಲ್ಯವಾಗಲೀ ಈವರೆಗೂ ಆಧುನಿಕ ಸಮಾಜಕ್ಕೆ ಅರ್ಥವಾಗದಿರುವುದು ದುರಂತವಲ್ಲವೇ ?

ಸಾರ್ವಜನಿಕ ಬದುಕಿನಲ್ಲಿ ಸಮಾನ ಅವಕಾಶಗಳಿಗೂ, ಆರ್ಥಿಕ ನೆಲೆಯಲ್ಲಿ-ಸಂಪತ್ತಿನ ವಿತರಣೆಯಲ್ಲಿ ಸಮಾನ ಸ್ಥಾನಮಾನಗಳಿಗೂ ನಡುವೆ ಮನುಷ್ಯನ ನಿತ್ಯ ಬದುಕಿನಲ್ಲಿ ಒಂದು ಸಮಾನತೆಯ ಆಶಯ ಪ್ರತಿ ವ್ಯಕ್ತಿಯಲ್ಲೂ ಇದ್ದೇ ಇರುತ್ತದೆ. ತನ್ನನ್ನು ಇತರರು ಸಮಾನವಾಗಿ ಕಾಣಬೇಕೆಂಬ ಸಹಜ ಹಂಬಲ ಮನುಷ್ಯಜೀವಿಗಳಲ್ಲಿ ನೈಸರ್ಗಿಕವಾಗಿ ಬಂದಿರಬಹುದಾದ ಮನೋವೃತ್ತಿಯಾಗಿರುತ್ತದೆ. ಒಂದು ಸಮಾಜದಲ್ಲಿ ಕಾಣುವಂತೆಯೇ ಯಾವುದೇ ಕುಟಂಬದೊಳಗೂ ಸಹ ವ್ಯಕ್ತಿಗತ ನೆಲೆಯಲ್ಲಿ ಈ ಸಮಾನತೆಯ ಹಂಬಲ ಇದ್ದೇ ಇರುತ್ತದೆ. ಬಾಲ್ಯಾವಸ್ಥೆಯ ಮಕ್ಕಳೂ ಸಹ ಕುಟುಂಬದೊಳಗೆ ತಾರತಮ್ಯಗಳನ್ನು ವಿರೋಧಿಸುವುದನ್ನು ಗಮನಿಸಬಹುದು. ಇದೇ ಪ್ರಮೇಯವನ್ನು ವಿಶಾಲ ಸಮಾಜಕ್ಕೂ ವಿಸ್ತರಿಸಿದಾಗಿ ವ್ಯಕ್ತಿಗತವಾಗಿ ಸಮಾನತೆ ಎನ್ನುವುದು ಮನುಷ್ಯನ ಮೂಲಭೂತ ಹಕ್ಕು ಎನ್ನುವಷ್ಟು ಮಟ್ಟಿಗೆ ಮಾನವ ಸಮಾಜದಲ್ಲಿ ವ್ಯಕ್ತವಾಗುತ್ತಿರುತ್ತದೆ. ಈ ಸಮಾನತೆಯನ್ನೇ ʼ ಮಾನವ ಘನತೆ ʼ ಎಂದು ಬಣ್ಣಿಸಲಾಗುತ್ತದೆ.

ಡಾ. ಬಿ.ಆರ್‌.ಅಂಬೇಡ್ಕರ್‌ ರಾಜಕೀಯ ಸಮಾನತೆಯೊಂದಿಗೆ ಸಾಮಾಜಿಕ-ಆರ್ಥಿಕ ಸಮಾನತೆಗಳಿಗಾಗಿಯೂ ಆಗ್ರಹಿಸಿದ್ದು ಈ ಮಾನವ ಘನತೆಯ ರಕ್ಷಣೆಯ ದೃಷ್ಟಿಯಿಂದಲೇ. ಮಾನವ ಸಮಾಜ ರೂಢಿಗತವಾಗಿ ಆಚರಿಸಿಕೊಂಡು ಬಂದಿರುವ ಸಾಂಸ್ಕೃತಿಕ ಪದ್ಧತಿಗಳು, ಧಾರ್ಮಿಕ ಆಚರಣೆಗಳು, ಸಾಂಪ್ರದಾಯಿಕ ನಡಾವಳಿಗಳು ಈ ಮಾನವ ಘನತೆಗೆ ಚ್ಯುತಿ ಬರುವಂತಿದ್ದರೆ ಅಂತಹ ಯಾವುದೇ ವಿದ್ಯಮಾನಗಳು ತಿರಸ್ಕಾರಾರ್ಹವಾಗಿಯೇ ಕಾಣುತ್ತವೆ. ಭರತ ಭೂಮಿ ಶತಮಾನಗಳಿಂದಲೂ ಕಂಡಿರುವ ಸಮಾಜ ಸುಧಾರಣೆಯ ಧ್ವನಿಗಳೆಲ್ಲವೂ ಈ ʼಮಾನವ ಘನತೆʼಯನ್ನು ಪ್ರತಿಪಾದಿಸಿರುವುದನ್ನು ಗಮನಿಸಬಹುದು. ಈ ಅಪೇಕ್ಷಣೀಯ ನೈಸರ್ಗಿಕ ಘನತೆಯನ್ನು ನಿರಾಕರಿಸುವ ಕಾರಣಕ್ಕಾಗಿಯೇ ಫುಲೆ, ಅಂಬೇಡ್ಕರ್‌ ಮೊದಲಾದ ದಾರ್ಶನಿಕರು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ.

ಶ್ರೇಣಿ ವ್ಯವಸ್ಥೆಯ ಸಂಹಿತೆಗಳು

21ನೆಯ ಶತಮಾನದ ಭಾರತವು ತಂತ್ರಜ್ಞಾನ ಹಾಗೂ ವಿಜ್ಞಾನದ ಮೇರು ಶಿಖರ ತಲುಪಿದೆ. ಸಂವಿಧಾನಬದ್ಧ ರಾಜಕೀಯ ಸಮಾನತೆಯನ್ನು ಸಾಧಿಸಿದೆ. ಅತ್ಯಾಧುನಿಕ ಮೆಟ್ರೋಪಾಲಿಟನ್‌ ಸಂಸ್ಕೃತಿಯ ನಗರಗಳನ್ನು ಮೈಗೂಡಿಸಿಕೊಂಡಿದೆ. ಬೌದ್ಧಿಕವಾಗಿ ವಿಶ್ವಮಾನ್ಯತೆ ಗಳಿಸಿದೆ. ಆದಾಗ್ಯೂ ಇಂದಿಗೂ ʼ ಮಾನವ ಘನತೆ ʼಯ ಅಂತಃಸತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೋತಿರುವುದು ವಿಪರ್ಯಾಸವಲ್ಲವೇ ? ಇದಕ್ಕೆ ಅರಿವಿನ ಕೊರತೆ ಕಾರಣವಲ್ಲ ಅಥವಾ ಸಾರ್ವಜನಿಕ ಪ್ರಜ್ಞೆಯ ಕೊರತೆಯೂ ಅಲ್ಲ. ಬುದ್ಧ ಬಸವರಾದಿಯಾಗಿ ಗಾಂಧಿ-ಅಂಬೇಡ್ಕರರವರೆಗೂ ಸಮಾಜ ಸುಧಾರಣೆಯ ಧ್ವನಿಗಳು ನಮ್ಮ ಸಮಾಜದ ನರನಾಡಿಗಳಲ್ಲೂ ಪ್ರವಹಿಸುವ ಮೂಲಕ ಜನಸಾಮಾನ್ಯರಲ್ಲಿ “ಸಕಲ ಜೀವಚರಗಳನ್ನೂ ಸಮಾನವಾಗಿ ಕಾಣಬೇಕು” ಎನ್ನುವ ಚಿಂತನೆಯ ಸೂಕ್ಷ್ಮ ಎಳೆಯಾದರೂ ಸ್ಥಾಪಿತವಾಗಿದೆ. ಭಾರತದ ಸಾಹಿತ್ಯ ಹಾಗೂ ಕಲಾ ಪ್ರಕಾರಗಳಲ್ಲೂ ಸಮಾನತೆಯ ಧ್ವನಿ ಗಟ್ಟಿಯಾಗಿ ಕೇಳಿಬರುತ್ತಲೇ ಇದೆ.

ಆದರೆ ʼ ಸಮಾನತೆ ʼಯ ಆಶಯಗಳಿಗೂ ʼ ಮಾನವ ಘನತೆ ʼಯ ರಕ್ಷಣೆಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲು ನಮ್ಮ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಶ್ರೇಣಿ ಸಮಾಜ ದೈಹಿಕ ದುಡಿಮೆ ಮತ್ತು ಬೌದ್ಧಿಕ ದುಡಿಮೆಯ ನಡುವೆ ನಿರ್ಮಿಸಿರುವ ಬಹುದೊಡ್ಡ ಕಂದರ. ಮನುಷ್ಯನ ಕಾಯಕವನ್ನು ಉಚ್ಛಮಟ್ಟದಲ್ಲಿರಿಸಿ ದೈವೀಕರಿಸುವ ಒಂದು ಸಮಾಜವೇ ತನ್ನೊಡಲಲ್ಲಿ ಸದಾ ಕ್ರಿಯಾಶೀಲತೆಯಿಂದಿರುವ ಕೆಲವು ದುಡಿಮೆಗಳನ್ನು ಕೀಳರಿಮೆಯಿಂದ ಕಾಣುವ ಒಂದು ದ್ವಂದ್ವವನ್ನು ಈ ಹೊತ್ತಿನಲ್ಲೂ ಗುರುತಿಸಬಹುದು. ಇದೇ ಪ್ರಮೇಯವನ್ನು ವಿಸ್ತರಿಸಿ ನೋಡಿದಾಗ ಸಣ್ಣ ಕುಟುಂಬದಿಂದ ವಿಶಾಲ ಸಮಾಜದವರೆಗೂ ಸೂಕ್ಷ್ಮವಾಗಿ ಕಣ್ಣಾಡಿಸಿದಾಗ ಪ್ರತ್ಯಕ್ಷವಾಗಿ ಕಾಣಬಹುದಾದ ವಾಸ್ತವ ಎಂದರೆ ಪ್ರತಿಯೊಂದು ಸ್ತರದಲ್ಲೂ ಬೌದ್ಧಿಕ ಶ್ರಮ ಅಥವಾ ದುಡಿಮೆ ತನ್ನ ಆಧಿಪತ್ಯವನ್ನು ಸಾಧಿಸಿರುವುದು ಗೋಚರಿಸುತ್ತದೆ. ಆಧುನಿಕ ಕೌಟುಂಬಿಕ ಜೀವನದಲ್ಲೂ ಸಹ ಒಂದು ಕುಟುಂಬದಲ್ಲಿ ಕಡಿಮೆ ವಿದ್ಯಾರ್ಹತೆ ಅಥವಾ ಶಿಕ್ಷಣ ಪಡೆದ ಸದಸ್ಯರು ಹೆಚ್ಚಿನ ದೈಹಿಕ ದುಡಿಮೆಗೆ ಒಳಗಾಗುವುದನ್ನು ಗಮನಿಸಬಹುದು. ಅಥವಾ ನಿರ್ದಿಷ್ಟ ಸನ್ನಿವೇಶಗಳಲ್ಲಿ ಬೌದ್ಧಿಕವಾಗಿ ಉನ್ನತಿ ಪಡೆದಿರುವ ಸದಸ್ಯರು ಹೆಚ್ಚಿನ ಮಾನ್ಯತೆ ಪಡೆಯುವುದನ್ನು ಗಮನಿಸಬಹುದು.

ಇದು ಒಂದು ನೆಲೆಯಲ್ಲಿ ನಮ್ಮ ಶ್ರೇಣಿ ವ್ಯವಸ್ಥೆಯ ಮೂಲ ಧಾತುವನ್ನು ಬಿಂಬಿಸಿದರೆ ಮತ್ತೊಂದೆಡೆ ಶತಮಾನಗಳ ಯಜಮಾನಿಕೆಯ ಸಂಸ್ಕೃತಿಯನ್ನೂ ಬಿಂಬಿಸುತ್ತದೆ. ಕಲಿತವರು ಕಲಿಯದವರ ಮೇಲೆ, ಬಲಿತವರು ಬಲಿಯದವರ ಮೇಲೆ ಯಜಮಾನಿಕೆಯನ್ನು ಸಾಧಿಸುವ ಸಾಮಾಜಿಕ ಪ್ರವೃತ್ತಿಯನ್ನು ವ್ಯಕ್ತಿಗತ ನೆಲೆಯಲ್ಲಿ ಕಾಣುವಷ್ಟೇ ಪ್ರಧಾನವಾಗಿ ಸಮಾಜದ ನೆಲೆಯಲ್ಲೂ ಕಾಣಬಹುದು. ಆರ್ಥಿಕ ಪ್ರಗತಿಯ ಕಾರಣದಿಂದ ಬೌದ್ಧಿಕ ಉನ್ನತಿ ಸಾಧಿಸುವ ಸಮಾಜದ ಒಂದು ವರ್ಗ ಮೂಲ ಜಾತಿ ನೆಲೆಗಳನ್ನೂ ಲೆಕ್ಕಿಸದೆ ದೈಹಿಕ ಶ್ರಮವನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತದೆ. ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸುವ ತನ್ನ ಸದುದ್ದೇಶಕ್ಕೆ ಇದೇ ಸಮಾಜವು ತಳಸಮುದಾಯಗಳನ್ನು ಅಥವಾ ಅಲ್ಲಿಯೂ ನಿಕೃಷ್ಟರಾದವರನ್ನು ಯಾವುದೇ ಸಂಕೋಚ ಇಲ್ಲದೆ ಬಳಸಿಕೊಳ್ಳುತ್ತದೆ.

ಸ್ವಚ್ಚತಾ ಕಾರ್ಯದ ನಿಮಿತ್ತಗಳು

ಈ ಮನೋವೃತ್ತಿಯು ಶತಮಾನಗಳಿಂದ ಬೇರೂರಿರುವುದರಿಂದಲೇ ಇಂದಿಗೂ ಸಹ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಳಮಟ್ಟದ ಜಾತಿಸಮುದಾಯಗಳ ಹೆಗಲಿಗೆ ಹೊರಿಸಲಾಗಿದೆ. ತ್ಯಾಜ್ಯವನ್ನು ಹರಡುವ ಕೈಗಳು ಅದನ್ನು ಹೆಕ್ಕಿ ತೆಗೆಯಲು ಹಿಂಜರಿಯುವ ಒಂದು ವಿಚಿತ್ರ ಸನ್ನಿವೇಶವನ್ನು ಸಮಾಜದ ಪ್ರತಿಯೊಂದು ಸ್ತರದಲ್ಲೂ ಗುರುತಿಸಬಹುದು. ತಾನು ವಿಸರ್ಜಿಸುವ ಮಲಮೂತ್ರಗಳನ್ನು ತೆಗೆದುಹಾಕಲು ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಮನೋವೃತ್ತಿಯೇ ಭಾರತೀಯ ಸಮಾಜದಲ್ಲಿ ಸ್ವಚ್ಚತಾ ಕಾರ್ಯಗಳನ್ನು ಜಾತಿನಿರ್ದಿಷ್ಟ ಕಸುಬುಗಳನ್ನಾಗಿ ಮಾಡಿಬಿಟ್ಟಿದೆ. ಇದನ್ನೇ ಕುಟುಂಬದ ಪರಿಸರಕ್ಕೆ ವಿಸ್ತರಿಸಿದಾಗ, ಎಳೆಯ ಮಕ್ಕಳ ಹೇಲು ಉಚ್ಚೆಯನ್ನು ಬಾಚಿ ತೆಗೆಯುವ ಕಾಯಕ ಮನೆಯ ಹೆಣ್ಣುಮಕ್ಕಳ ಜವಾಬ್ದಾರಿಯಾಗುವುದೇ ಹೊರತು, ಪುರುಷರ ಹೊಣೆ ಆಗುವುದಿಲ್ಲ. ಇಲ್ಲಿ ಸಾಮಾಜಿಕ ಪ್ರಾಬಲ್ಯ ಮುನ್ನೆಲೆಗೆ ಬರುತ್ತದೆ.

ಈ ಹಿನ್ನೆಲೆಯಲ್ಲೇ ಇತ್ತೀಚಿನ ಹಲವು ಪ್ರಕರಣಗಳಲ್ಲಿ ಶಾಲೆ-ವಸತಿ ಶಾಲೆ-ಹಾಸ್ಟೆಲ್‌ಗಳಲ್ಲಿ ಶೌಚಾಲಯವನ್ನು ಮಕ್ಕಳಿಂದ ಶುಚಿಗೊಳಿಸುವ ಹೀನ ಕೃತ್ಯಗಳನ್ನು ನೋಡಬೇಕಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುವ ನೆಪದಲ್ಲಿ ಮಲಗುಂಡಿಯನ್ನು/ಶೌಚಗುಂಡಿಯನ್ನು ಸ್ಚಚ್ಚಗೊಳಿಸುವಂತೆ ಮಾಡಿರುವುದು ವರದಿಯಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ತ್ವರಿತ ಕ್ರಮವನ್ನೂ ಕೈಗೊಂಡಿದೆ. ಈ ನಾಲ್ವರೂ ಮಕ್ಕಳು ಕೆಳಜಾತಿಗಳಿಗೆ ಸೇರಿದವರೆನ್ನುವುದು ಹೇಳದಿದ್ದರೂ ಅರ್ಥವಾಗುವ ವಿಚಾರ. ಏಕೆಂದರೆ ಮೇಲ್ಜಾತಿಯ ಮಕ್ಕಳನ್ನು ಈ ರೀತಿಯ ದುಡಿಮೆಗೆ ಹಚ್ಚುವ ಸಾಧ್ಯತೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು. ನಮ್ಮ ಸಮಾಜ ಇನ್ನೂ ಆ ಮಟ್ಟಿಗೆ ಪ್ರಜಾಸತ್ತಾತ್ಮಕವಾಗಿಲ್ಲ ಅಥವಾ ಪ್ರಬುದ್ಧವಾಗಿಲ್ಲ. ಈ ಪ್ರಸಂಗ ಮತ್ತು ಇಂತಹುದೇ ಹಲವು ಪ್ರಕರಣಗಳಲ್ಲಿ ನಾವು ಕೆಲವು ಸುಡು ವಾಸ್ತವಗಳನ್ನು ಕಾಣಬಹುದು.

ಇಲ್ಲಿ ಮಕ್ಕಳು ಮಾಡಿರಬಹುದಾದ ತಪ್ಪಿಗೆ ಶಿಕ್ಷೆಯ ರೂಪದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಹಚ್ಚಿದ್ದಾರೆ ಎನ್ನುವುದು ಅರ್ಧಸತ್ಯ ಮಾತ್ರ. ಮೂಲತಃ ಇಲ್ಲಿರುವುದು ತ್ಯಾಜ್ಯದ ಉತ್ಪಾದನೆ, ಹರಡುವಿಕೆ, ವಿನಿಮಯ ಹಾಗೂ ನಿವಾರಣೆ. ತಾವು ಪವಿತ್ರ ಎಂದು ಪೂಜಿಸುವ ಗೋವಿನ ಸಗಣಿಯನ್ನು ಬಾಚುವುದಕ್ಕೇ ಮತ್ತೊಬ್ಬರನ್ನು ಆಶ್ರಯಿಸುವ ಮೇಲ್ಜಾತಿಯ ಮನಸುಗಳು, ಮನುಷ್ಯನ ಮಲಮೂತ್ರಗಳನ್ನು ಹೇಗೆ ಸ್ವಚ್ಚಗೊಳಿಸಲು ಸಾಧ್ಯ ? ಇಲ್ಲಿ ನಮ್ಮ ಜಾತಿ ಶ್ರೇಣೀಕರಣದ ಪಾರಂಪರಿಕ ಧೋರಣೆ ಹಾಗೂ ಸಾಂಸ್ಕೃತಿಕ ಅರಿವು ಮುನ್ನೆಲೆಗೆ ಬರುತ್ತದೆ. ತ್ಯಾಜ್ಯವನ್ನು ಉತ್ಪಾದಿಸಿ ಬಿಸಾಡುವ ಹಕ್ಕು ನಮ್ಮದು ಎಂದು ಭಾವಿಸುವ ಮೇಲ್ವರ್ಗದ ಸಮಾಜದಲ್ಲಿ ತಾವೇ ಬಿಸಾಡಿದ ತ್ಯಾಜ್ಯವನ್ನು ತೆಗೆದುಹಾಕುವ ವ್ಯವಧಾನವೂ ಇಲ್ಲದಿರುವುದನ್ನು ಕಾಣಬಹುದಲ್ಲವೇ ? ಏಕೆಂದರೆ ಅದನ್ನು ತೆಗೆಯಲೆಂದೇ ಜನರಿದ್ದಾರೆ, ಕೆಲವು ಜಾತಿಗಳಿವೆ, ಕೆಲವು ದುಡಿಮೆಗಳಿವೆ. ಕೆಳದರ್ಜೆಯದು ಎಂದು ಭಾವಿಸಲಾಗುವ ಇಂತಹ ದೈಹಿಕ ದುಡಿಮೆಗಳಿಂದ ಮೇಲ್ಜಾತಿ-ಮೇಲ್ವರ್ಗಗಳು ಸ್ವತಃ ವಿನಾಯಿತಿ ಪಡೆದುಕೊಳ್ಳುತ್ತವೆ. ನಮ್ಮ ಸಮಾಜವನ್ನು ನಿರ್ದೇಶಿಸುವ ಸಾಂಸ್ಕೃತಿಕ ಜೀವನವು ಈ ವಿನಾಯಿತಿಗೆ ಅಧಿಕೃತತೆಯನ್ನು ಒದಗಿಸುತ್ತದೆ.

ಜಾತಿ ಶ್ರೇಷ್ಠತೆಯ ನೆರಳಲ್ಲಿ

ಜಾತಿ ಶ್ರೇಣೀಕರಣದಲ್ಲಿ ಇಂದಿಗೂ ನಿಕೃಷ್ಟವಾಗಿ ಕಾಣಲ್ಪಡುವ ತಳಮಟ್ಟದ ಜನಸಮುದಾಯಗಳಿಗೆ ಈ ದೇಶದ ಸಂವಿಧಾನ ರಾಜಕೀಯ ಸಮಾನತೆಯನ್ನು ಕಲ್ಪಿಸಿದೆ. ಸಾಮಾಜಿಕವಾಗಿಯೂ ಎಲ್ಲರಂತೆ ತಾವೂ ಬದುಕಬಹುದಾದ ಸಮಾನತೆಯನ್ನು ಕೊಂಚ ಮಟ್ಟಿಗೆ ಕಲ್ಪಿಸಿದೆ. ಇಡೀ ಸಮಾಜವು ಜಾತಿಶ್ರೇಷ್ಠತೆ ಮತ್ತು ಪಾವಿತ್ರ್ಯತೆಯ ನೆಪದಲ್ಲಿ ಮರು ಅಗ್ರಹಾರೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಈ ಸಮಾನತೆ ಒಮ್ಮೊಮ್ಮೆ ಅಪಭ್ರಂಶದಂತೆ ಕಾಣುತ್ತದೆ. ಆಂಗ್ಲ ಗಾದೆಯೊಂದು ಧ್ವನಿಸುವಂತೆ “ ಇಲ್ಲಿ ಎಲ್ಲರೂ ಸಮಾನರು ಆದರೆ ಕೆಲವು ಇತರರಿಗಿಂತಲೂ ಹೆಚ್ಚಿನ ಸಮಾನರು” ಎಂಬ ಮಾತುಗಳನ್ನು ಸಾಕ್ಷಾತ್ಕರಿಸುವ ರೀತಿಯಲ್ಲಿ ನಮ್ಮ ಸುತ್ತಲಿನ ವಸತಿ ನೆಲೆಗಳು ರೂಪುಗೊಳ್ಳುತ್ತಿರುವುದನ್ನು ಗಮನಿಸಬೇಕಿದೆ. ನವ ಅಗ್ರಹಾರಗಳಲ್ಲಿ ಸಮಾನತೆ ಸಾಧ್ಯವಾದರೂ ಮಾನವ ಘನತೆಯನ್ನು ನಿರ್ಲಕ್ಷಿಸುತ್ತಲೇ ಸಮಾಜ ಮುನ್ನಡೆಯುತ್ತಿರುತ್ತದೆ. ಸಂವಿಧಾನದ ಫಲಾನುಭವಿಗಳಾಗಿ ಆಧುನಿಕೀಕರಣಗೊಂಡು ಸಾಮಾಜಿಕ ಔನ್ನತ್ಯ ಪಡೆದಿರುವ ವರ್ಗಗಳು, ಜಾತಿ ಎಲ್ಲೆಗಳನ್ನು ಮೀರಿ, ಈ ಅಗ್ರಹಾರವಾಸಿಗಳಾಗಿ ಜೀವನ ನಡೆಸುತ್ತಿರುವುದು ವಾಸ್ತವ.

ಈ ಮನಸ್ಥಿತಿಯೇ ಮಾಲೂರು ಶಾಲೆಯಲ್ಲಿ ನಡೆದಂತಹ ಘಟನೆಗಳಿಗೆ ಮೂಲ ಕಾರಣವಾಗಿರುತ್ತದೆ. ಸಂವಿಧಾನದ ಮೂಲ ಆಶಯಗಳಾದ ಸಮಾನತೆ-ಮಾನವ ಘನತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಕ ವರ್ಗವೂ ಈ ಮನಸ್ಥಿತಿಗೆ ಹೊರತಾಗಲು ಸಾಧ್ಯವಿಲ್ಲ. ಏಕೆಂದರೆ ಅವರು ವಿಶಾಲ ಸಮಾಜದ ಒಂದು ಭಾಗವಾಗಿಯೇ ಉಳಿದಿರುತ್ತಾರೆ. ಸಂವಿಧಾನವನ್ನು ವಿದ್ಯುಕ್ತವಾಗಿ ಅನುಸರಿಸುತ್ತಲೇ ಮನುಸ್ಮೃತಿಯ ಮೂಲ ಧಾತುವನ್ನು ಅನುಸರಿಸುವ ಒಂದು ದ್ವಂದ್ವವನ್ನು ಇಲ್ಲಿ ಗುರುತಿಸಬಹುದು. ಇದಕ್ಕೆ ಜಾತಿ ಶ್ರೇಷ್ಠತೆ-ಪಾರಮ್ಯ ಒಂದು ಕಾರಣವಾದರೆ ಸಾಮಾಜಿಕ ಅಂತಸ್ತು ಮತ್ತೊಂದು ಕಾರಣವಾಗುತ್ತದೆ. ʼಸಮಾನತೆʼಗೂ ಹಾಗೂ ʼಮಾನವ ಘನತೆʼಗೂ ನಡುವೆ ಕಡಲ ವ್ಯಾಪ್ತಿಯಷ್ಟು ಅಂತರ ಇರುವುದನ್ನು ಅಧುನಿಕ ಸಮಾಜ ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನವನ್ನು ನಾವು ಅರಿತುಕೊಂಡಿದ್ದೇವೆ, ಸಾಂವಿಧಾನಿಕ ಆಶಯಗಳನ್ನು ಮೈಗೂಡಿಸಿಕೊಂಡಿರುವ ಭ್ರಮೆಯಲ್ಲಿದ್ದೇವೆ ಆದರೆ ಮಾನವ ಘನತೆಯನ್ನು ಎತ್ತಿಹಿಡಿಯುವ ಸಂವಿಧಾನದ ಅಂತಃಸತ್ವವನ್ನು ನಮ್ಮೊಳಗೆ ಇಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದು ನಮ್ಮನ್ನು ಕಾಡಬೇಕಾದ ಪ್ರಶ್ನೆ.
-೦-೦-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಂಸದ ಪ್ರತಾಪ್ ಸಿಂಹ ತಮ್ಮ ವಿಕ್ರಂ ಸಿಂಹ ಬಂಧನ : ಅರಣ್ಯ ಸಚಿವ ಈಶ್ವರ್ ಖಂಡ್ರೆ ಫಸ್ಟ್ ರಿಯಾಕ್ಷನ್

Next Post

37 IPS ಅಧಿಕಾರಿಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ರಾಜ್ಯ ಸರ್ಕಾರದ ಆದೇಶ

Related Posts

Top Story

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

by ಪ್ರತಿಧ್ವನಿ
December 17, 2025
0

ವಿಶೇಷ ಆಂಬ್ಯುಲೆನ್ಸ್'ಗಳು ರಸ್ತೆ ಅಪಘಾತದ ಸ್ಥಳಗಳನ್ನು ನಿಮಿಷಗಳಲ್ಲಿ ತಲುಪುವಂತೆ ನೋಡಿಕೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಯನ್ನ ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ...

Read moreDetails

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
ಹೊರಟವರೂ ನೀವೇ.. ಕಾಡುವವರೂ ನೀವೇ..!

ಹೊರಟವರೂ ನೀವೇ.. ಕಾಡುವವರೂ ನೀವೇ..!

December 17, 2025

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

December 16, 2025
Next Post
10 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

37 IPS ಅಧಿಕಾರಿಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ರಾಜ್ಯ ಸರ್ಕಾರದ ಆದೇಶ

Please login to join discussion

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada