ಬರ ಘೋಷಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಭಾನುವಾರ (ಆಗಸ್ಟ್ 12) ಪತ್ರ ಬರೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹಲವು ಸವಾಲುಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಜೀವನೋಪಾಯದ ಪ್ರಮುಖ ಮೂಲವಾಗಿರುವ ಕೃಷಿ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮಳೆ ಕೊರತೆಯಿಂದ ಬೆಳೆ ನಷ್ಟ, ಕುಡಿಯುವ ನೀರಿನ ಕೊರತೆ, ಬರಗಾಲ, ಗ್ರಾಮೀಣ ಸಮುದಾಯಗಳಿಗೆ ಸಾಮಾಜಿಕ-ಆರ್ಥಿಕ ಸಂಕಷ್ಟಗಳು ಸೇರಿದಂತೆ ತೀವ್ರ ಪರಿಣಾಮಗಳನ್ನು ಉಂಟುಮಾಡಿದೆ. ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಬರೆದಿರುವ ಪತ್ರದಲ್ಲಿ, ಮಾನ್ಸೂನ್ ಮಳೆ ಆಧರಿಸಿ ಬರ ಘೋಷಣೆ ಮಾಡಲಾಗುತ್ತದೆ. ಆದರೆ ವಿವಿಧ ರಾಜ್ಯ ಮತ್ತು ಪ್ರದೇಶದಲ್ಲಿ ಮಳೆಯ ಪ್ರಮಾಣ, ವಾತಾವರಣ ವಿಭಿನ್ನ ರೀತಿ ಇರುತ್ತದೆ. ಹೀಗಾಗಿ ಅಲ್ಲಿನ ಪ್ರದೇಶಗಳು. ಸ್ಥಳೀಯ ಪರಿಸರ ಅಂಶಗಳು, ನೀರಿನ ಲಭ್ಯತೆ ಮತ್ತು ಕೃಷಿ ಪದ್ಧತಿಗಳನ್ನು ಪರಿಗಣಿಸುವ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬರ ಘೋಷಣೆಯ ಮಾರ್ಗಸೂಚಿಗಳ ಬಗ್ಗೆ 8 ಅಂಶಗಳ ಸಲಹೆಯನ್ನು ಸಿದ್ದರಾಮಯ್ಯ ಅವರು ಪತ್ರದಲ್ಲಿ ಹೇಳಿದ್ದಾರೆ. ಬರಗಾಲ ಘೋಷಣೆಗೆ ಕೇಂದ್ರದ ಈಗಿನ ಬರ ಘೋಷಣೆ ಮಾರ್ಗಸೂಚಿ ಅಡ್ಡಿಯಾಗಿದೆ. ಸದ್ಯದ ನಿಯಮಗಳ ಪ್ರಕಾರ ಬರ ಘೋಷಣೆ ಮಾಡಲು ಕೇಂದ್ರದ ನಿಯಾಮಾವಳಿ ಪಾಲನೆ ಕಡ್ಡಾಯವಾಗಿದ್ದು, ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿದರೆ ಕೆಲವು ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ನಿಯಾಮಾವಳಿಗಳ ಸಡಿಲಿಕೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ
ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಶೇ. 33 ಬೆಳೆಹಾನಿಗೆ ಪರಿಹಾರದ ಅವಕಾಶವಿದೆ ಆದರೆ ಬರಕ್ಕೆ ಶೇ. 50 ಹಾನಿ ಆಗಬೇಕು ಎಂದಿದ್ದಾರೆ. ಅಲ್ಲದೇ, ಬರ ಘೋಷಣೆಗೆ ಕನಿಷ್ಟೆ ಶೇ.60 ಮಳೆ ಕೊರತೆ ಇರಬೇಕಿದ್ದು, ಕನಿಷ್ಠ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು ಎಂಬ ನಿಯಮವಿದೆ. ಹಾಗಾಗಿ ಮಳೆ ಕೊರತೆ ಪ್ರಮಾಣವನ್ನು ಶೇ. 60 ರಿಂದ 30 ಕ್ಕೆ ಇಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದಲ್ಲಿ ಹೇಳಿದ್ದಾರೆ.
ಈ ಕನಿಷ್ಠ ಮಾನದಂಡದ ಅಡಿ ನಿಯಮಾವಳಿಗೆ ತಿದ್ದುಪಡಿಗೆ ಅನುಮತಿಸಬೇಕು. ಕೇಂದ್ರದ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಬರ ಘೋಷಣೆ ಅಡಿ ಪರಿಹಾರ ಮತ್ತು ರಿಯಾಯಿತಿ ಪಡೆಯಲು ಸರ್ಕಾರಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ ತಮ್ಮ ಕೆಲವು ಸಲಹೆಯನ್ನ ಪರಿಗಣಿಸಿ ಬರ ಘೋಷಣೆಗೆ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.