ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಕುರಿತು ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಒಂಬತ್ತು ಅಂಶಗಳ ಪತ್ರಕ್ಕೆ ಸರ್ಕಾರದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀಮತಿ ಗಾಂಧಿ ಅವರಿಗೆ ಬಹುಶಃ ಸಂಪ್ರದಾಯಗಳ ಬಗ್ಗೆ ತಿಳಿದಿಲ್ಲ. ಅಧಿವೇಶನ ಪ್ರಾರಂಭವಾದ ನಂತರವೇ ಸರ್ಕಾರವು ಪ್ರತಿಪಕ್ಷಗಳೊಂದಿಗೆ ಅಜೆಂಡಾವನ್ನು ಚರ್ಚಿಸುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸುವ ಬಗ್ಗೆ ರಾಜಕೀಯ ಕೋಲಾಹಲದ ನಡುವೆಯೇ ಶ್ರೀಮತಿ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಯಾವುದೇ ಕಾರ್ಯಸೂಚಿಯನ್ನು ಘೋಷಿಸಲಾಗಿಲ್ಲ ಎಂದು ಒತ್ತಿಹೇಳಿದ ಅವರು ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿದ್ದು, ಅವುಗಳ ಮೇಲೆ ಚರ್ಚೆಗೆ ಒತ್ತಾಯಿಸಿದರು.
“ನೀವು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಕರೆದಿರುವಿರಿ. ಈ ವಿಶೇಷ ಅಧಿವೇಶನವನ್ನು ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಕರೆಯಲಾಗಿದೆ. ನಮ್ಮಲ್ಲಿ ಯಾರಿಗೂ ಅದರ ಕಾರ್ಯಸೂಚಿಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ” ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
ಬೆಲೆ ಏರಿಕೆ, ಅತಿವೃಷ್ಟಿ- ಅನಾವೃಷ್ಟಿ, ಹೆಚ್ಚುತ್ತಿರುವ ನಿರುದ್ಯೋಗ, ರೈತ ಸಂಘಟನೆಗಳಿಗೆ ಮಾಡಿದ ಬದ್ಧತೆ, ಅದಾನಿ ವ್ಯಾಪಾರ ಸಮೂಹದ ವಹಿವಾಟುಗಳ ತನಿಖೆ, ಹರ್ಯಾಣ ಸೇರಿದಂತೆ ಇತರೆಡೆಯಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ, ಹದಗೆಡುತ್ತಿರುವ ಕೇಂದ್ರ-ರಾಜ್ಯ ಸಂಬಂಧ, ಮಣಿಪುರದ ಹಿಂಸಾಚಾರ ಮತ್ತು ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಸೋನಿಯಾ ಗಾಂಧಿ ಆಗ್ರಹಿಸಿದ್ದರು.
ಇದಾಗಿ ಕೆಲವೇ ಗಂಟೆಗಳಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಪ್ರತಿಕ್ರಿಯಿಸಿದ್ದು, “ಸಂಪ್ರದಾಯ ಅನುಸರಿಸಿ ಅಧಿವೇಶನ ಕರೆಯಲಾಗಿದೆ. ಬಹುಶಃ ನೀವು ಸಂಪ್ರದಾಯಕ್ಕೆ ಗಮನ ಕೊಡುತ್ತಿಲ್ಲ. ಸಂಸತ್ತಿನ ಅಧಿವೇಶನ ಕರೆಯುವ ಮೊದಲು ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಚರ್ಚೆಯಾಗಲೀ ಅಥವಾ ವಿಷಯಗಳ ಬಗ್ಗೆ ಚರ್ಚೆಯಾಗಲೀ ಇಲ್ಲ. ರಾಷ್ಟ್ರಪತಿಗಳು ಅಧಿವೇಶನ ಕರೆದ ನಂತರ ಮತ್ತು ಮೊದಲು ಅಧಿವೇಶನದ ಪ್ರಾರಂಭದಲ್ಲಿ ಎಲ್ಲಾ ಪಕ್ಷಗಳ ನಾಯಕರ ಸಭೆ ಇದೆ, ಅದರಲ್ಲಿ ಸಂಸತ್ತಿನಲ್ಲಿ ಎತ್ತುವ ಸಮಸ್ಯೆಗಳು ಮತ್ತು ಕೆಲಸಗಳ ಬಗ್ಗೆ ಚರ್ಚಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಕಾರ್ಯನಿರ್ವಹಣೆಯನ್ನು ರಾಜಕೀಯಗೊಳಿಸಲು ಮತ್ತು ಅನಗತ್ಯ ವಿವಾದಗಳನ್ನು ಸೃಷ್ಟಿಸಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.