ಸಚಿವ ಸಂಪುಟದ ಬದಲಾವಣೆ ನಿರಂತರ ಜ್ಯೋತಿ ಇದ್ದಂಗೆ. ಅದು ಬದಲಾವಣೆ ಆಗುತ್ತಲೇ ಇರುತ್ತದೆ. ಆದರೂ ಸಹ ಎಲ್ಲೂ ಬದಲಾವಣೆ ಕಂಡು ಬಂದಿಲ್ಲ, ಮಂತ್ರಿ ಮಂಡಲದಲ್ಲಿ ಚರ್ಚೆ ಆಗ್ತಿಲ್ಲ. ಈದೆಲ್ಲ ಮಾಧ್ಯಮ ಮೂಲಕ ಪ್ರತಿದಿನ ಚರ್ಚೆ ಆಗ್ತಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ ಅನ್ಯಾಯವಾಗಿದೆ. ಯತ್ನಾಳ ಅವರು ಮಂತ್ರಿ ಆಗೇ ಆಗ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಹಿಂದೆ ಕೇಂದ್ರ ಮಂತ್ರಿಯಾಗಿದ್ದವರು. ರಾಜ್ಯ ಸರ್ಕಾರದಲ್ಲಿ ಮಂತ್ರಿ ಆಗಬೇಕು, ಏನೋ ಅಡರು ತೊಡರುಗಳಿಂದ ಉಳಿದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಯತ್ನಾಳ ಅವರನ್ನು ಮಂತ್ರಿ ಮಾಡಬೇಕು. ಯತ್ನಾಳ ಮಂತ್ರಿ ಮಾಡೋಕೆ ನಾವು ಎಲ್ಲಾ ಸಪೋರ್ಟ್ ಮಾಡುತ್ತೇವೆ ಎಂದರು.
ಗುಪ್ತ ಸಭೆಗಳ ವಿಚಾರ –
ನಮ್ಮದು ಗುಪ್ತಸಭೆ ಅಲ್ಲ, ನಮ್ಮ ಜಿಲ್ಲೆಯ ಮಹಾಂತೇಶ ಕವಟಗಿಮಠ ಅವರ ಸೋಲು ಹೇಗಾಯಿತು, ಕಾರಣವೇನು ಎಂಬುದರ ಬಗ್ಗೆ ಚರ್ಚೆ ಮಾಡಿದೀವಿ. ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ಹತ್ತು ಜನ ಶಾಸಕರು ಸೇರಿ ಚರ್ಚೆ ಮಾಡಿದಿವಿ ಎಂದು ವಿವರಿಸಿದರು.
ಬಿಜೆಪಿಯವರು ಕಾಂಗ್ರೆಸ್ ಬಾಗಿಲು ಬಡಿಯುವ ವಿಚಾರ ಸುಳ್ಳು. ಯಾರು ಹೋಗ್ತಾರೆ ಒಂದೆರಡು ಹೆಸರು ಹೇಳಲಿ. ಕಾಂಗ್ರೆಸ್ ನವರು ದಿನಾ ಹೀಗೆ ಹೇಳ್ತಾರೆ, ನಾವು ಯಾರೂ ಕಾಂಗ್ರೆಸ್ ಬಾಗಿಲು ತಟ್ಟುತ್ತಿಲ್ಲ. ಬಿಜೆಪಿ ಬಿಟ್ಟು ಯಾರೂ ಹೊಗೋದಿಲ್ಲ, ಇನ್ನೂ ಒಂದೂವರೆ ವರ್ಷ ಅಧಿಕಾರ ಇದೆ, ಅಧಿಕಾರದಲ್ಲಿ ಇರ್ತೀವಿ, ಒಳ್ಳೆ ಸರ್ಕಾರ ಕೊಡ್ತಿವಿ ಎಂದರು.