
ಕರ್ನಾಟಕದ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸಂಪುಟಕ್ಕೆ ಸರ್ಜರಿ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಈಗಾಗಲೇ ದೆಹಲಿ ತಲುಪಿದ್ದು, ಶುಕ್ರವಾರ ಕಾಂಗ್ರೆಸ್ ವರಿಷ್ಠ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. 50-50 ಸೂತ್ರದಂತೆ ಕೆಲವು ಸಚಿವರಿಗೆ ಕೊಕ್ ಕೊಡಲು ನಿರ್ಧಾರ ಮಾಡಿದ್ದು, ಕಳಂಕಿತರು, ನಿಷ್ಕ್ರಿಯ ಸಚಿವರಿಗೆ ಕೊಕ್ ಕೊಟ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾರು ಯಾರಿಗೆ ಕೊಕ್ ನೀಡ್ತಾರೆ..? ಯಾರಿಗೆ ಮಿನಿಸ್ಟರ್ಗಿರಿ ಸಿಗುತ್ತೆ ಅನ್ನೋ ಬಗ್ಗೆ ಭಾರೀ ಚರ್ಚೆ ನಡೆದಿದೆ.
₹700 ಕೋಟಿ ಹಗರಣ ಆರೋಪಕ್ಕೆ ಗುರಿಯಾಗಿದ್ದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯೋಜನೆ & ಸಾಂಖ್ಯಿಕ ಸಚಿವ ಡಿ.ಸುಧಾಕರ್, ಆಹಾರ & ನಾಗರೀಕ ಸಚಿವ ಕೆ.ಹೆಚ್.ಮುನಿಯಪ್ಪ, ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು, ಪೌರಾಡಳಿತ ಖಾತೆ ಸಚಿವ ರಹೀಂಖಾನ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಚಿವ ಸ್ಥಾನ ಕಳೆದುಕೊಳ್ತಾರೆ ಎನ್ನುವ ಮಾಹಿತಿ ಕಾಂಗ್ರೆಸ್ ಅಂಗಳದಿಂದಲೇ ಹೊರ ಬೀಳುತ್ತಿದೆ.
ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಅನ್ನೋದನ್ನು ನೋಡೋದಾರೆ ಒಕ್ಕಲಿಗ ಕೋಟದಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಹೈಕಮಾಂಡ್ ಕೋಟದಲ್ಲಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಹಿಂದುಳಿದ ವರ್ಗದಲ್ಲಿ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ವಾಲ್ಮೀಕಿ ಕೋಟದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಮುಸ್ಲಿಂ ಕೋಟದಲ್ಲಿ ಮೈಸೂರಿನ ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಹಾಸನ ಜಿಲ್ಲೆಗೆ ಒಕ್ಕಲಿಗ ಕೋಟದಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡ, ದಲಿತ ಕೋಟದಲ್ಲಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್, ಎಸ್ಸಿ ಕೋಟದಲ್ಲಿ ಮಳವಳ್ಳಿ ಶಾಸಕ ಪಿ.ನರೇಂದ್ರ ಸ್ವಾಮಿ, ಒಕ್ಕಲಿಗ ಕೋಟದಲ್ಲಿ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.

ಇನ್ನು ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್, ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಹೈಕಮಾಂಡ್ ಅಂಗಳದಲ್ಲಿ ಪಟ್ಟಿ ಫೈನಲ್ ಆಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯುವ ಬಗ್ಗೆ ಕಾಂಗ್ರೆಸ್ ನಾಯಕರು ಆಶಯ ವ್ಯಕ್ತಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂದು ಕೆ.ಎನ್ ರಾಜಣ್ಣ ಬಹಿರಂಗವಾಗಿ ಹೇಳಿದ್ದಾರೆ.