ಈ ಹಲವು ತಿಂಗಳುಗಳಲ್ಲಿ ವಿಧಾನಸಭೆಗೆ 4 ಉಪ ಚುನಾವಣೆಗಳು ನಡೆದಿವೆ. ಈ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರಿಗೆ ಮತ್ತು ಆ ಪಕ್ಷಗಳ ನೀತಿ ನಿರೂಪಕರಿಗೆ ಹಲವು ಪಾಠಗಳಿವೆ. ಆದರೆ ಜೆಡಿಎಸ್ ಅಜೆಂಡಾ ಫ್ಲಾಪ್ ಆಗಿದೆ.
ಠೇವಣಿ ನಷ್ಟದ ಸುತ್ತ
ಇತ್ತೀಚೆಗೆ ನಡೆದ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಗಳಲ್ಲಿ ಜೆಡಿಎಸ್ ವೀರಾವೇಶದಲ್ಲಿ ಹೋರಾಡಿದರೂ ಠೇವಣಿ ನಷ್ಟವಾಗಿದೆ. ಕಾಂಗ್ರೆಸ್ ಸೋಲಿಸಬೇಕು ಎಂಬ ಅಜೆಂಡಾಕ್ಕೆ ಹಿನ್ನಡೆ ಆಗಿ ಅವಮಾನಕ್ಕೀಡಾಗಿದೆ.
ಹಾನಗಲ್ನಲ್ಲಿ ಮೊದಲೇ ಜೆಡಿಎಸ್ ಅಭ್ಯರ್ಥಿ ಘೋಷಿಸಿತ್ತು. ನಿಯಾಜ್ ಶೇಖ್ ಎಂಬ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದಲ್ಲದೇ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಜರಿದ್ದರು. ಸ್ವತಃ ಕುಮಾರಸ್ವಾಮಿ ಬಂದು ಸಮಾವೇಶ ನಡೆಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಒಂದು ಸಾವಿರದ ಗಡಿಯನ್ನೂ ದಾಟಲಿಲ್ಲ ಅವರಿಗೆ ಸಿಕ್ಕಿದ್ದು 923 ಮತಗಳು ಮಾತ್ರ.
ಸಿಂದಗಿಯಲ್ಲೂ ಜೆಡಿಎಸ್ ಮಹಿಳಾ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿ ಕಾಂಗ್ರೆಸ್ ಸೋಲಿಸಲು ಪಣ ತೊಟ್ಟಿತ್ತು. ನಾಜಿಯಾ ಶಕೀಲ್ ಅಂಗಡಿ ಅವರನ್ನು ಕಣಕ್ಕೆ ಇಳಿಸಿತ್ತು. ಮಾಜಿ ಪ್ರಧಾನಿ ದೇವೆಗೌಡರು ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡು 15 ದಿನ ಅಲ್ಲಿಯೇ ಠಿಕಾಣಿ ಹೂಡಿ ಕಾಂಗ್ರೆಸ್ ವಿರುದ್ಧ ವ್ಯಾಪಕ ದಾಳಿ ನಡೆಸಿದ್ದರು. ಆದರೆ ಅವರ ಶ್ರಮಕ್ಕೆ ಸಿಕ್ಕಿದ್ದು 4 ಸಾವಿರ ಮತ ಮಾತ್ರ.
ಹಾನಗಲ್, ಸಿಂದಗಿಯಲ್ಲಿ ಇದರಿಂದ ಕಾಂಗ್ರೆಸ್ಗೆ ನಷ್ಟವೂ ಆಗಲಿಲ್ಲ. ಬಿಜೆಪಿಗೆ ಲಾಭವೂ ಆಗಲಿಲ್ಲ.
![](https://pratidhvani.com/wp-content/uploads/2021/11/WhatsApp-Image-2021-11-08-at-1.20.40-PM-1024x576.jpg)
ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಅಂತೂ 10 ಸಾವಿರ ಮತ ಸಿಕ್ಕಿದ್ದವು. ಇದರಿಂದ ಕಾಂಗ್ರೆಸ್ಗೆ ನಷ್ಟವಾಗಿ ಬಿಜೆಪಿಗೆ ಲಾಭ ಮಾಡಿಕೊಟ್ಟಿತ್ತು.
ʼಕಾಂಗ್ರೆಸ್ ಸೋಲಿಸಲೆಂದೇ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕುತ್ತಿದೆ. ಆದರೆ ಅದೇ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರ ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ಏಕೆ ಟಿಕೆಟ್ ನೀಡುವುದಿಲ್ಲ?ʼ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನಿಸಿದ್ದರು.
ಉತ್ತರ ಕರ್ನಾಟಕದಲ್ಲಿ ಸಂಘಟನೆಯಿಲ್ಲದೇ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕುವ ಮೂಲಕ ಅವಮಾನ ಅನುಭವಿಸಿತು.
ಬಿಜೆಪಿ, ಕಾಂಗ್ರೆಸ್ಗೂ ಪಾಠ
4ರಲ್ಲಿ ಕಾಂಗ್ರೆಸ್, ಬಿಜೆಪಿ ತಲಾ ಎರಡು ಸ್ಥಾನ ಗೆದ್ದವು. ಬಿಜೆಪಿ ಸಾಕಷ್ಟು ಹಣ ಹರಿಸಿ, ಎಲ್ಲ ಸಚಿವರನ್ನು ಮಸ್ಕಿ ಮತ್ತು ಹಾನಗಲ್ಗೆ ನಿಯೋಜನೆ ಮಾಡಿದರೂ ಲಗಾಟಿ ಹೊಡೆಯಿತು. ಇದು ಬಿಜೆಪಿಯ ಹಣ ಮತ್ತು ಅಧಿಕಾರದ ಮದಕ್ಕೆ ನೀಡಿದ ಪೆಟ್ಟಾಗಿದೆ. ಹಾನಗಲ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಇದು ಹಿನ್ನಡೆಯೇ ಆಗಿದೆ. ಅವರು ಅಧಿಕಾರ ಸ್ವೀಕರಿಸಿಕೊಂಡ ನಂತರ ಈ ಎರಡು ಚುನಾವಣೆಗಳ ಪೈಕಿ ಬಿಜೆಪಿ ಒಂದರಲ್ಲಿ ಮಾತ್ರ ಗೆದ್ದಿದೆ.
![](https://pratidhvani.com/wp-content/uploads/2021/10/support-qr-code-1.jpg)
ಮಸ್ಕಿ ಮತ್ತು ಹಾನಗಲ್ ಗೆಲುವುಗಳು ಕಾಂಗ್ರೆಸ್ಗೆ ಉತ್ಸಾಹ ಮೂಡಿಸಿವೆ. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭಾಗಶಃ ಗೆದ್ದಂತೆ. ಮಸ್ಕಿಯಲ್ಲಿ 58 ಗ್ರಾಮಗಳಲ್ಲಿ ನಿರಂತರವಾಗಿ
ನಡೆಯುತ್ತಿರುವ ನೀರಾವರಿ ನಾಲೆಯಹೋರಾಟ ಫಲಿತಾಂಶದ ಮೇಲೆ ಪ್ರಭಾವ ಬೀರಿತು. ಈ ಚಳುವಳಿ ಬಿಜೆಪಿಯನ್ನು ಸೋಲಿಸಲು ಹಟ ತೊಟ್ಟಿತ್ತು. ಅದು ಕಾಂಗ್ರೆಸ್ಗೆ ಒಂದಿಷ್ಟು ಲಾಭ ಮಾಡಿಕೊಟ್ಟಿತ್ತು.
ಹಾಗೆಯೇ ಹಾನಗಲ್ನಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಅಭ್ಯರ್ಥಿ ಶ್ರೀನಿವಾಸ ಮಾನೆಯವರ ಸರಳ ವ್ಯಕ್ತಿತ್ವ ಮತ್ತು ಅಧಿಕಾರ ಇಲ್ಲದಿದ್ದಾಗಲೂ ಅವರು ಜನರ ನೆರವಿಗೆ ನಿಂತಿದ್ದು ಪರಿಣಾಮ ಬೀರಿತ್ತು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಮೂರೂ ಪಕ್ಷಗಳೂ ಮೇಲಿನ ಸಂಗತಿಗಳನ್ನು ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮತದಾರರು ಎಚ್ಚೆತ್ತುಗೊಳ್ಳುತ್ತಿದ್ದಾರೆ ಎಂಬುದಂತೂ ಸತ್ಯ.
![](https://pratidhvani.com/wp-content/uploads/2021/08/pratidhvani_2021-02_b25805e8-d9f8-421e-a7cb-a15b7e6f7742_pratidhvani_2020_09_17f09c37_524c_4aa5_a9f7_60fb07975af5_Support_us_Banner_New_3-1.png)