ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ | ಜಯಲಲಿತಾ (Jayalalitha) ಪರಮಾಪ್ತೆ ಶಶಿಕಲಾ (Shashikala) ಸಕ್ರಿಯ ರಾಜಕಾರಣಕ್ಕೆ ವಾಪಸ್ ಬರಬೇಕು ಎಂಬ ಕೂಗು ತಮಿಳುನಾಡು ರಾಜಕೀಯದಲ್ಲಿ (Tamilnadu Politics) ವ್ಯಪಾಕವಾಗಿ ಕೇಳಿ ಬರುತ್ತಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ AIADMK ಕಾರ್ಯಕರ್ತರು ಶಶಿಕಲಾರನ್ನು ವಾಪಸ್ ಸಕ್ರಿಯ ರಾಜಕೀಯಕ್ಕೆ ಕರೆತರುವುದಾಗಿ ಹೇಳಿ ನಿರ್ಣಯ ಒಂದನ್ನು ಥೇಣಿ ಜಿಲ್ಲಾ ಮುಖಂಡರು ಅಂಗೀಕರಿಸಿದ್ದಾರೆ.
AIADMK ಸಂಯೋಜಕ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ (panneerselvam) ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ಶಶಿಕಲಾ ಹಾಗೂ ಅವರ ಮಾನಸಪುತ್ರ ಅಮ್ಮ ಮಕ್ಕಳ್ ಮುನೇತ್ರ ಕಳಗಂ (AMMK) ಮುಖ್ಯಸ್ಥ TTV ದಿನಕರನ್ ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಸಭೆಯಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ.
ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಪ್ರತಿನಿಧಿಸುವ ತೇವರ್ ಸಮುದಾಯವು (thevar community) ಶಶಿಕಲಾರನ್ನು ವಾಪಸ್ ಪಕ್ಷಕ್ಕೆ ಕರೆತರಬೇಕು ಎಂದು ಸಮುದಾಯದ ಮುಖಂಡರು ನಿರಂತರವಾಗಿ AIADMK ಮೇಲೆ ಒತ್ತಡ ಹೇರುತ್ತಾ ಬಂದಿತ್ತು.
ದಕ್ಷಿಣ ತಮಿಳುನಾಡು ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿರುವ ತೇವರ್ ಸಮುದಾಯವು ಚುನಾವಣೆಯಲ್ಲಿ ಪ್ರತಿ ಭಾರಿಯೂ AIADMK ಪಕ್ಷದ ಪ್ರಬಲ ನೆಲೆಯಾಗಿದೆ. ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ AIADMK ಅಭ್ಯರ್ಥಿಗಳು ದಕ್ಷಿಣದ ಭಾಗದಲ್ಲಿ ಹೀನಾಯ ಸೋಲನ್ನು ಕಂಡಿದ್ದರು ಮತ್ತು ಪನ್ನೀರ್ ಸೆಲ್ವಂ ಸ್ವಕ್ಷೇತ್ರದಲ್ಲು ಸಹ ಪಕ್ಷದ ಅಭ್ಯರ್ಥಿಗಳು ಸೋಲನ್ನು ಕಂಡಿದ್ದರು.
![](https://pratidhvani.com/wp-content/uploads/2022/03/Sasikala_OPS_030322_1200-1024x853.jpg)
ಈ ಕುರಿತು ಮಾತನಾಡಿರುವ ಪಕ್ಷದ ಕಾರ್ಯದರ್ಶಿ ಸೈಯದ್ ಖಾನ್ AIADMK ಜನರಿಗಾಗಿ ಹೋರಾಡು ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷವಾಗಿದೆ ಈ ಹಿಂದೆ ನಮ್ಮ ನಾಯಕರಾದ MGR ಹಾಗೂ ಜಯಲಲಿತಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನಾವು ಬಯಸುತ್ತೇವೆ. ಇದರ ಭಾಗವಾಗಿ ಪಕ್ಷ ಬಿಟ್ಟು ಹೋಗಿರುವ ಹಾಗೂ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಪ್ರತಿಯೊಬ್ಬ ನಾಯಕರನ್ನು ನಾವು ವಾಪಸ್ ಕರೆತರುತ್ತೇವೆ. ಚುನಾವಣೆಗಳಲ್ಲಿ ನಮ್ಮ ಸೋಲಿಗೆ ಹಲವಾರು ಕಾರಣಗಳಿರಬಹುದು ಅದನ್ನು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಹಳೇ ನಾಯಕರ ಸಮ್ಮಿಲನ ಹಾಗೂ ಸಮಾಗಮದಿಂದಾಗಿ ಪಕ್ಷಕ್ಕೆ ಹೆಚ್ಚು ಶಕ್ತಿ ನೀಡುತ್ತದೆ ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷದ ವೈಪಲ್ಯಗಳಿಂದಾಗಿ AIADMk ಮತ್ತೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕ, ಚಿಂತಕ ಡಾ.ಆರ್.ಪದ್ಮನಾಭನ್ ಮಾತನಾಡಿದ್ದು, ಈ ಹೇಳಿಕೆ ನಿಜ ಮತ್ತು ಮುಂದಿನ ದಿನಗಳಲ್ಲಿ ಶಶಿಕಲಾ ಪಕ್ಷಕ್ಕೆ ವಾಪಸ್ ಆಗುತ್ತಾರೆ. AIADMk ಮತ್ತೊಮ್ಮೆ ಬಲಿಷ್ಠವಾಗಿ ಹೊರಹೊಮ್ಮುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. AIADMKಗೆ ಬಲಿಷ್ಠ ನಾಯಕತ್ವದ ಅವಶ್ಯಕತೆಯಿದೆ ಮತ್ತು ಇದು ಪಕ್ಷಕ್ಕೆ ಹಳೇ ಹುರುಪನ್ನು ನೀಡುತ್ತದೆ. ತೇವರ್ ಸುಮಾದಾಯದ ಒತ್ತಡವು ಸಹ ಈ ನಿರ್ಣಾಯಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಇದು ಅವರಿಗೆ ಬಹಳ ಮಹತ್ವದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ಆಂತರಿಕ ವಲಯದಲ್ಲಿ ಶಶಿಕಲಾರನ್ನು ವಾಪಸ್ ಪಕ್ಷಕ್ಕೆ ಕರೆತರುವ ವಿಚಾರ ತಮಿಳುನಾಡು ರಾಜಕಾರಣದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಇದು AIADMkಗೆ ಹೆಚ್ಚು ಲಾಭ ಅಥವಾ ನಷ್ಟ ತಂದು ಕೊಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.