ಹಾಸನ: ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ತಮ್ಮ ರಾಜೀನಾಮೆ ಪತ್ರವನ್ನು ಹಿಮ್ಸ್ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಇ-ಮೇಲ್ ಮುಖಾಂತರ ಸಲ್ಲಿಸಿದ್ದಾರೆ.
ರವಿಕುಮಾರ್ ಅವರು ನಕಲಿ ಪ್ರಮಾಣ ಪತ್ರ ನೀಡಿ ಹಿಮ್ಸ್ ನಿರ್ದೇಶಕ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಮಾತ್ರವಲ್ಲ, ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರು ಕೂಡ ದೂರು ನೀಡಿದ್ದರು, ರವಿಕುಮಾರ್ ವಿರುದ್ಧ ನ್ಯಾಯಾಧೀಶರಿಗೂ ದೂರು ಸಲ್ಲಿಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.

ಇನ್ನು ರಾಜಿನಾಮೆ ಪತ್ರದಲ್ಲಿ, ʼʼಕಳೆದ ಎಂಟು ವರ್ಷಗಳಿಂದ ನಾನು ಹಿಮ್ಸ್ ಸಂಸ್ಥೆಯ ನಿರ್ದೇಶಕನಾಗಿ ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳು ಹಾಗೂ ಸಂಸ್ಥೆಯ ಎಲ್ಲರ ಸಹಕಾರದಿಂದ ನಾನು ನಿಗದಿಪಡಿಸಿಕೊಂಡಿದ್ದ ಬಹುತೇಕ ಎಲ್ಲಾ ಗುರಿಗಳು ಈಗ ಈಡೇರಿಸಿದಂತ ಆಗಿದ್ದು ಸಂಸ್ಥೆಗೆ ಎರಡು ಬಾರಿ ಕಾಯಕಲ್ಪ ಪ್ರಥಮ ಪ್ರಶಸ್ತಿ 2 best NSS 2 ಬಾರಿ best AB-ARK Performer ಪುರಸ್ಕಾರ ಅಲ್ಲದೆ ಬಹುತೇಕ ಎಲ್ಲಾ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆಗಳಾದ, NABH, NABL, NQAS, LAQSHYA, MUSQAN, ಮುಂತಾದ ಮಾನ್ಯತೆಗಳನ್ನು ಗಳಿಸಲು ಸಫಲವಾಗಿದ್ದು, ಸಂಸ್ಥೆಯು ಪ್ರಸ್ತುತ ಇಡಿ ರಾಜ್ಯದಲ್ಲಿ ಉಚ್ರಾಯ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಗುರಿ ಸಾಧಿಸಿದ ಹೆಮ್ಮೆ ಹಾಗೂ ಸಂಪೂರ್ಣ ಆತ್ಮತೃಪ್ತಿಯೊಂದಿಗೆ ನಿರ್ದೇಶಕರ ಹುದ್ದೆಗೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಹಾಗೂ ದಯಮಾಡಿ ನನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಆದಷ್ಟು ಶೀಘ್ರವಾಗಿ ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ತಮ್ಮಲ್ಲಿ ಸವಿನಯವಾಗಿ ಪ್ರಾರ್ಥಿಸುತ್ತಿದ್ದೇನೆ.

ನನಗೆ ಅಭೂತಪೂರ್ವ ಅವಕಾಶ ಹಾಗೂ ಸಹಕಾರ ಕೊಟ್ಟ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಹೋದ್ಯೋಗಿಗಳಿಗೆ ಹೊರಗುತ್ತಿಗೆ ನೌಕರರಿಗೆ ವಿದ್ಯಾರ್ಥಿಗಳಿಗೆ ಸಂಗ್ರ ಸಂಸ್ಥೆಗಳಿಗೆ ರಾಜಕೀಯ ಮುಖಂಡರಿಗೆ ಮಾಧ್ಯಮ ಮಿತ್ರರಿಗೆ ಹಾಗೂ ಸಾರ್ವಜನಿಕರಿಗೆ ನನ್ನ ಹೃದಯ ಅಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ”
ಎಂದು ಸುಧೀರ್ಘ ರಾಜೀನಾಮೆ ಪತ್ರವನ್ನು ಮೇಲ್ ಮುಖಾಂತರ ರವಾನಿಸಿದ್ದಾರೆ ಈಗ ಸದ್ಯದ ಮಟ್ಟಿಗೆ ರವಿಕುಮಾರ್ ಅವರ ಈ ರಾಜೀನಾಮೆ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ