ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಜೆಡಿಎಸ್ ಪಕ್ಷದ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಯತ್ನ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮನೆಯಲ್ಲಿದ್ದಾಗ ಪದೇ ಪದೇ ಕಾಲ್ ಮಾಡಿ ಕರೆಸಿಕೊಂಡು ಚಾಕುವಿನಿಂದ ಇರಿಲು ಯತ್ನಿಸಿದ್ದು, ಮನ ಬಂದಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರುವ ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ರಕ್ತ ಪಾತ ರಾಜಕಾರಣ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಚಾಕು ಇರಿತ ಮಾಡಲಾಗಿತ್ತು.. ಇವತ್ತು ಜೆಡಿಎಸ್ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಚಾಕು ಇರಿತಕ್ಕೆ ಯತ್ನ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಅಂಚೆ ಪಾಳ್ಯದಲ್ಲಿ ಘಟನೆ ನಡೆದಿದ್ದು, ಕೆಂಪನಹಳ್ಳಿ ಗ್ರಾಮ ಪಂಚಾಯ್ತಿ ಜೆಡಿಎಸ್ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ ನಡೆದಿದೆ. ಬೋರೆಗೌಡ ಎಂಬಾತನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿದ್ದ ಮಂಜುನಾಥ್ಗೆ ಪದೇ ಪದೇ ಕಾಲ್ ಮಾಡಿ ಅಂಚೆಪಾಳ್ಯ ಸರ್ಕಲ್ಗೆ ಕರೆಸಿಕೊಂಡಿದ್ದ ಬೋರೆಗೌಡ, ಡಾ.ಸಿ.ಎನ್ ಮಂಜುನಾಥ್ ಪರ ಯಾಕೆ ಪ್ರಚಾರ ಮಾಡ್ತೀಯಾ ಎಂದು ಜಗಳ ತೆಗೆದಿದ್ದ ಎನ್ನಲಾಗಿದೆ.
ನೋಡ ನೋಡುತ್ತಿದ್ದಂತೆಯೇ ಮಂಜುನಾಥ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಪರ ಪ್ರಚಾರ ಸೇರಿದಂತೆ ಯಾವುದೇ ಕೆಲಸ ಮಾಡದಂತೆ ಧಮ್ಕಿ ಹಾಕಲಾಗಿದೆ ಎಂದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಡಾ ಮಂಜುನಾಥ್ ಸ್ಪರ್ಧೆಯಿಂದ ರಂಗು ಪಡೆದುಕೊಂಡಿದ್ದು, ರಕ್ತಪಾತದ ಆತಂಕ ಎದುರಾಗಿದೆ.