ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶ, ಉತ್ತರಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ಆಯಾ ರಾಜ್ಯಗಳ ದೃಷ್ಟಿಯಿಂದ ಮಾತ್ರವಲ್ಲ 2024ರಲ್ಲಿ ನಡೆಯುವ ಲೋಕಸಭಾ ಚುನಾವಣಾ ದೃಷ್ಟಿಯಿಂದಲೂ ಅತ್ಯಂತ ಮಹತ್ವವಾದವು. ಅದರಲ್ಲೂ ಆಡಳಿತಾರೂಢ ಬಿಜೆಪಿಗೆ ಹೆಚ್ಚು ನಿರ್ಣಾಯಕವಾದವು. ಏಕೆಂದರೆ ಮೇಲಿನ ಐದು ರಾಜ್ಯಗಳ ಪೈಕಿ ಪಂಜಾಬ್ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಇರುವ ಅಧಿಕಾರವನ್ನು ಉಳಿಸಿಕೊಳ್ಳಬೇಕಾದ, ಆಡಳಿತವಿರೋಧಿ ಅಲೆಯನ್ನು ಮೆಟ್ಟಿ ಮತ್ತೆ ಅಧಿಕಾರ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಬಿಜೆಪಿಯದ್ದು. ಹಾಗಾಗಿ ಕರೋನಾ ನಂತರ ಭೌತಿಕವಾಗಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ‘ಪಂಚ ರಾಜ್ಯಗಳ ಚುನಾವಣಾ ವಿಷಯವೇ’ ಪ್ರಮುಖವಾಗಿತ್ತು.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ‘ಪಂಚ ರಾಜ್ಯಗಳ ಚುನಾವಣಾ ವಿಷಯ’ಕ್ಕೆ ಮೊದಲ ಆದ್ಯತೆ ನೀಡಲು ಹಲವು ಕಾರಣಗಳಿವೆ. ಇತ್ತೀಚೆಗೆ ದೇಶಾದ್ಯಂತ ರೈತ ವಿರೋಧಿ ಕೃಷಿ ಮಸೂದೆಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಬೇರೆ ಕಡೆಗಿಂತ ಹೆಚ್ಚು ಚರ್ಚೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ವ್ಯಾಪಕವಾಗಿ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳ ಇತರೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಮುನ್ನುಡಿ ಬರೆದಿದೆ. ಈ ಬಗ್ಗೆ ಪ್ರತಿಪಕ್ಷಗಳಿಂದ ಮಾತ್ರವಲ್ಲ, ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದ, ಅನಿರೀಕ್ಷಿತವಾಗಿ ಅಪ್ಪಳಿಸಿದ ಕರೋನಾದಿಂದ, ಕೇಂದ್ರ ಸರ್ಕಾರ ಸರಿಯಾಗಿ ಯೋಚಿಸದೆ ಜಾರಿಗೆ ತಂದ ಲಾಕ್ಡೌನ್ ಗಳಿಂದ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಔದ್ಯೋಗಿಕ ಕ್ಷೇತ್ರ ಭರವಸೆ ಕಳೆದುಕೊಂಡಿದೆ. ಇದು ಬಡತನ ಹೆಚ್ಚಾಗಲು ನಾಂದಿ ಹಾಡಿದೆ. ಈ ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಮೀರಿ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿ ಪಾಲಿಗೆ ಬಹಳ ಕಷ್ಟದ ಕೆಲಸವಾಗಿದೆ. ಹಾಗಾಗಿಯೇ ಈ ಕಠಿಣ ಸವಾಲಿನ ಬಗ್ಗೆಯೇ ಹೆಚ್ಚು ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
![](https://pratidhvani.com/wp-content/uploads/2021/11/pm-narendra-modi-attends-cec-meeting-at-bjp-headquarters-1024x768.jpg)
ಸಿಎಂ ಅಭ್ಯರ್ಥಿಗಳದ್ದೇ ಸಮಸ್ಯೆ!
ಈ ಐದು ರಾಜ್ಯಗಳಲ್ಲಿ ಬಿಜೆಪಿ ಒಂದಲ್ಲ ಒಂದು ರೀತಿಯಾಗಿ ಮುಖ್ಯವಾಗಿ ಅಭ್ಯರ್ಥಿಗಳನ್ನು ಘೋಷಿಸುವುದರಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಗ್ಗೆ ಬಿಜೆಪಿ ಹೈಕಮಾಂಡ್ ವಿಶ್ವಾಸ ಉಳಿದಂತೆ ಇಲ್ಲ. ಆದರೆ ಬೇರೆ ಸೂಕ್ತವಾದ ನಾಯಕನೂ ಸಿಗುತ್ತಿಲ್ಲ. ಈ ಗೊಂದಲದ ನಡುವೆಯೇ ಚುನಾವಣೆ ಎದುರಿಸಬೇಕಿದೆ. ಉತ್ತರಖಂಡದಲ್ಲಿ ಎಂತಹ ಪರಿಸ್ಥಿತಿ ಇದೆ ಎಂಬುದನ್ನು ಅಲ್ಲಿ ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡಿರುವುದರಿಂದಲೇ ಅರ್ಥ ಮಾಡಿಕೊಳ್ಳಬಹುದು. ಮಣಿಪುರ ಮುಖ್ಯಮಂತ್ರಿ ವಿಷಯದಲ್ಲೂ ಎಲ್ಲವೂ ಸರಿ ಇಲ್ಲ. ಪಂಜಾಬಿನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಗಬೇಕು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಉತ್ತರ ಪ್ರದೇಶದ ಸಮಸ್ಯೆ ಇವೆಲ್ಲವನ್ನೂ ಮೀರಿದ್ದು. ಆದುದರಿಂದ ಈ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಬೇಕು ಎಂಬ ನಿಲುವಿಗೆ ಕಾರ್ಯಕಾರಿಣಿ ಬಂದಿದೆ ಎಂದು ಗೊತ್ತಾಗಿದೆ.
ಮೇಲುಗೈ ಸಾಧಿಸಿರುವ ಯೋಗಿ
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡುವೆ ಮೊದಲಿನಷ್ಟು ಸುಮಧುರ ಬಾಂಧವ್ಯ ಇಲ್ಲ ಎಂಬುದು ಬಹಿರಂಗಗೊಂಡಿರುವ ಗುಟ್ಟು. ಯೋಗಿ ತಮ್ಮ ಸರ್ಕಾರದ ಕಾರ್ಯಕ್ರಮಗಳಲ್ಲಿ ಮೋದಿ ಫೋಟೋಗಳನ್ನು ಏಕೆ ಹಾಕಬೇಕು ಎಂದು ಅವುಗಳನ್ನು ತೆಗೆದುಹಾಕಿಸುವ ಮಟ್ಟಕ್ಕೆ ಅವರಿಬ್ಬರ ನಡುವಿನ ಶೀತಲಸಮರ ನಡೆದಿತ್ತು. ಆರ್ಎಸ್ಎಸ್ ನಾಯಕರ ಮಧ್ಯಪ್ರವೇಶದಿಂದ ತೇಪೆ ಹಚ್ಚಲಾಗಿದ್ದರೂ ಇಬ್ಬರಲ್ಲೂ ಇನ್ನೂ ಬಿಗುಮಾನ ಇದ್ದೇ ಇದೆ ಎನ್ನುತ್ತವೆ ಬಿಜೆಪಿ ಮೂಲಗಳು. ಆದರೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ಯೋಗಿ ಆದಿತ್ಯನಾಥ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದ್ದಾರೆ ಎನ್ನಬಹುದು.
ಈ ಬಾರಿಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ಪ್ರಸ್ತಾಪಗಳನ್ನು ಮಂಡಿಸಿದ್ದು ಯೋಗಿ ಆದಿತ್ಯನಾಥ್. 2017 ಮತ್ತು 2018ರಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜನಾಥ್ ಸಿಂಗ್ ರಾಜಕೀಯ ನಿರ್ಣಯಗಳನ್ನು ಮಂಡಿಸಿದ್ದರು. ಈಗ ಆ ಸ್ಥಾನಕ್ಕೆ ಯೋಗಿ ಬಂದಿದ್ದರೆ ಹಿಂದೆ ಗಟ್ಟಿ ಕಾರಣವೊಂದು ಇರಲೇಬೇಕು. ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸಚಿವರು, ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ದೆಹಲಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾನುವಾರದ ಸಭೆಯಲ್ಲಿ ಭಾತಿಕವಾಗಿ ಪಾಲ್ಗೊಳ್ಳುವಂತೆ ಹಾಗೂ ಇತರೆ ಸದಸ್ಯರು, ರಾಜ್ಯ ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಆಯಾ ರಾಜ್ಯಗಳ ಬಿಜೆಪಿ ಕಚೇರಿಯಲ್ಲಿ ವರ್ಚ್ಯುಯಲ್ ಮೂಲಕ ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿ ಭೌತಿಕವಾಗಿಯೇ ಹಾಜರಿದ್ದರು. ರಾಜಕೀಯ ನಿರ್ಣಯವನ್ನು ಮಂಡಿಸಲೆಂದೇ ಅವರನ್ನು ಲಕ್ನೋದಿಂದ ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂಬುದು ಸುಸ್ಪಷ್ಟವಾದ ಸಂಗತಿಯಾಗಿದೆ.
![](https://pratidhvani.com/wp-content/uploads/2021/11/WhatsApp-Image-2021-11-02-at-8.36.02-PM-877x1024.jpeg)
ಕೃಷಿ ಮಸೂದೆ, ಬೆಲೆ ಏರಿಕೆ ಸಮರ್ಥಿಸಿಕೊಳ್ಳಲು ಕರೆ
ಸದ್ಯ ಬಿಜೆಪಿಯನ್ನು ಕಾಡುತ್ತಿರುವ ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೃಷಿ ಮಸೂದೆಗಳು ಹಾಗೂ ಬೆಲೆ ಏರಿಕೆಯನ್ನು ಜನರ ಮಧ್ಯೆ ಸಮರ್ಥಿಸಿಕೊಳ್ಳಲೇಬೇಕೆಂದು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಲಾಗಿದೆ. ಕೇಂದ್ರ ಕೃಷಿ ಮಸೂದೆಗಳ ವಿಷಯವನ್ನು ಮರೆ ಮಾಚಲು ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕಬ್ಬಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿರುವುದನ್ನು, ರೈತರು ಹಣ ಪಡೆಯಲು ಸಹಾಯ ಆಗುವಂತೆ ನೇರ ನಗದು ವರ್ಗಾವಣೆ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳನ್ನು ಜಾರಿ ಮಾಡಿರುವುದನ್ನು ಜನರಿಗೆ ತಿಳಿಸಬೇಕು ಎಂದು ನಿರ್ಣಯಿಸಲಾಯಿತು. ಇದೇ ರೀತಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿಷಯಕ್ಕೆ ಪ್ರತಿಯಾಗಿ ಈಗ ಬೆಲೆಗಳನ್ನು ಇಳಿಸಿರುವ ಬಗ್ಗೆ ಚರ್ಚೆಯಾಗುವಂತೆ ನೋಡಿಕೊಳ್ಳಬೇಕೆಂದು ತೀರ್ಮಾನಿಸಲಾಯಿತು.
ಕರೋನಾ ಲಸಿಕೆ ವಿಷಯದ ಲಾಭ ಪಡೆಯುವ ಪ್ಲಾನ್
ದೇಶದಲ್ಲಿ ಈಗ 100 ಕೋಟಿಗೂ ಹೆಚ್ಚು ಕರೋನಾ ಡೋಸ್ (100 ಕೋಟಿ ಜನರಿಗಲ್ಲ) ಹಾಕಲಾಗಿದೆ. ಇದು ಒಂದು ಮಹತ್ವದ ಸಾಧನೆ ಎಂದು ಬಿಂಬಿಸಬೇಕು. ಸದ್ಯ ತಮ್ಮ ಸರ್ಕಾರಕ್ಕೆ ಇರುವ ಕೆಟ್ಟ ಹೆಸರನ್ನು ಅಳಿಸಿಹಾಕಲು ಲಸಿಕೆ ವಿಷಯವನ್ನು ಬಳಸಿಕೊಳ್ಳಬೇಕು ಎಂದು ಕಾರ್ಯಕಾರಿಣಿಯಲ್ಲಿ ಚರ್ಚೆ ಮಾಡಲಾಯಿತು. ಹೀಗೆ ಬಿಂಬಿಸುವ ದೃಷ್ಟಿಯಿಂದಲೇ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲಾಯಿತು ಎಂದು ತಿಳಿದುಬಂದಿದೆ.