ಬ್ಲರ್ಬ್: ಉರಿ, ಕಾಶ್ಮೀರ ಫೈಲ್ಸ್, ಆದಿಪುರುಷ ಚಿತ್ರಗಳು ಅತಿಯಾದ ರಾಷ್ಟ್ರೀಯತೆಯನ್ನೂ ಕೋಮುವಾದವನ್ನೂ ಬೆರೆಸಲು ಬಿಜೆಪಿ ಮಾಡಿಕೊಂಡ ಕಾರ್ಯತಂತ್ರ ಎಂದು ಸಚಿವ ಕೆಟಿಆರ್ ಹೇಳಿದ್ದಾರೆ.
ಭಾರತದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯತೆ ಮತ್ತು ಕೋಮುವಾದವನ್ನು ಬೆರೆಸಲು ಬಿಜೆಪಿ ಸಿನಿಮಾವನ್ನು ಬಳಸಿಕೊಳ್ಳುತ್ತಿದೆ ಎಂದು ತೆಲಂಗಾಣd ಐಟಿ, ನಗರಾಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆಟಿ ರಾಮರಾವ್ ಆರೋಪಿಸಿದ್ದಾರೆ.
TV5 ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಚಲನಚಿತ್ರಗಳನ್ನು ಸಹ ತನ್ನ ಅಜೆಂಡಾವನ್ನು ಹರಡಲು ಬಿಜೆಪಿ ಸಾಧನವಾಗಿ ಬಳಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. 2019 ರ ವಿಕ್ಕಿ ಕೌಶಲ್ ಅಭಿನಯದ ಉರಿ, ವಿವೇಕ್ ಅಗ್ನಿಹೋತ್ರಿ ಅವರ ಇತ್ತೀಚಿನ ಬಿಡುಗಡೆಯಾದ ಕಾಶ್ಮೀರ ಫೈಲ್ಸ್ ಮತ್ತು ಮುಂಬರುವ ಪ್ರಭಾಸ್ ಅಭಿನಯದ ಆದಿಪುರುಷನಂತಹ ಚಲನಚಿತ್ರಗಳನ್ನು ಕೆಟಿಆರ್ ಉದಾಹರಣೆಗಳಾಗಿ ಉಲ್ಲೇಖಿಸಿದ್ದಾರೆ. ಕೆಟಿಆರ್ ಸಂದರ್ಶನದ ಈ ಭಾಗವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ.
“ಅವರು (ಬಿಜೆಪಿ) ರಾಷ್ಟ್ರೀಯತೆ ಮತ್ತು ಕೋಮುವಾದವನ್ನು ಬೆರೆಸುವ ತಂತ್ರವನ್ನು ರೂಪಿಸಿದ್ದಾರೆ. ಯುವಕರು ಮತ್ತು ಜನರ ಒಂದು ವರ್ಗವನ್ನು ಗುರಿಯಾಗಿಸಿ ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸಲು ಮತ್ತು ಅವರಿಗೆ ವಾತಾವರಣವನ್ನು ಸೃಷ್ಟಿಸಲು ಮನವರಿಕೆ ಮಾಡುವುದು ಇದರ ಉದ್ದೇಶವಾಗಿದೆ. ಇಂದು ಚಲನಚಿತ್ರಗಳು ಸಹ ಹೊರತಾಗಿಲ್ಲ. ಅವರು ನೇರವಾಗಿ ಹಣ ಹೂಡುವುದಿಲ್ಲ, ಹಾಗಾಗಿ ಎಷ್ಟೋ ಬಾರಿ ನಮಗೇ ಅರ್ಥವಾಗುವುದಿಲ್ಲ. ಉರಿ, ಕಾಶ್ಮೀರ ಫೈಲ್ಸ್, ಆದಿಪುರುಷ ಇತ್ಯಾದಿ. ಅವುಗಳು ಹೇಗೆ ಕ್ರಮಬದ್ಧವಾಗಿ ಬರುತ್ತದೆ? ಇದರ ಹಿಂದೆ ಬಿಜೆಪಿ ಕೆಲಸ ಮಾಡುತ್ತಿರುವುದರಿಂದ ಇದು ಹೀಗಾಗುತ್ತಿದೆ” ಎಂದು ಕೆಟಿಆರ್ ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕಶ್ಮೀರ್ ಫೈಲ್ಸ್ ಚಿತ್ರವನ್ನು ಬಿಜೆಪಿ ಸರ್ಕಾರಗಳೇ ಪ್ರಮೋಟ್ ಮಾಡಿತ್ತು, ಸ್ವತಃ ಪ್ರಧಾನಿ ಮೋದಿಯವರೇ ಚಿತ್ರದ ಪರ ಪ್ರಚಾರ ಮಾಡಿದ್ದರು. ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಬಿಜೆಪಿ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿದವು, ಸರ್ಕಾರಿ ಉದ್ಯೋಗಿಗಳಿಗೆ ಸಿನೆಮಾ ನೋಡಲು ಅರ್ಧ ರಜೆಯನ್ನೂ ನೀಡಿ ಬಿಜೆಪಿ ಸರ್ಕಾರಗಳು ಪ್ರೋತ್ಸಾಹಿಸಿದ್ದವು.
ಮುಂದಿನ ವರ್ಷ ಬಿಡುಗಡೆಯಾಗಲಿರುವ ʼಆದಿಪುರುಷ್ʼ ಚಿತ್ರವು ರಾಮಾಯಣದ ಕತೆಯನ್ನು ಆಧರಿಸಿದೆ. ಪ್ರಭಾಸ್ ರಾಮನ ಪಾತ್ರ ಅಭಿನಯಿಸಲಿದ್ದಾರೆ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರ ಅಭಿನಯಿಸಲಿದ್ದಾರೆ. ಹಿಂದಿ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರವು ತಮಿಳು, ಮಳೆಯಾಲಂ, ಕನ್ನಡದಲ್ಲಿ ಡಬ್ ಆಗಲಿದೆ. ರಾಮಾಯಣ, ಶ್ರೀರಾಮನನ್ನು ಬಿಜೆಪಿ ತನ್ನ ಹಿಂದುತ್ವ ರಾಜಕಾರಣಕ್ಕೆ ಹೇಗೆ ಬಳಸಿಕೊಂಡಿದೆ ಎಂಬುವುದು ಹಸಿಯಾಗಿರುವ ಹಿನ್ನೆಲೆಯಲ್ಲಿ ಈ ಚಿತ್ರವು ಬಿಜೆಪಿಗೆ ಎಷ್ಟು ಪ್ರಯೋಜನಕಾರಿಯಾಗಲಿದೆ ಎಂದು ಊಹಿಸಬಹುದು.
2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಂದ URI ಚಿತ್ರವು ಬಿಜೆಪಿಯಿಂದ ಬಹಳಷ್ಟು ಹೊಗಳಿಕೆಯನ್ನು ಪಡೆದಿತ್ತು. . ಆದಾಗ್ಯೂ, ಚಲನಚಿತ್ರವು ತನ್ನ ಅತಿರಾಷ್ಟ್ರೀಯತೆಗಾಗಿ ಮತ್ತು ಯುದ್ಧವನ್ನು ವೈಭವೀಕರಿಸುವುದಕ್ಕಾಗಿ ಟೀಕಿಸಲ್ಪಟ್ಟಿತು.