ಬೆಳಗಾವಿ: ಕಾಂಗ್ರೆಸ್ ಪಕ್ಷವು ದ್ವೇಷ ಭಾಷಣ ನಿಯಂತ್ರಣ ಮಸೂದೆ ಮೂಲಕ ವಿಪಕ್ಷದ ಧ್ವನಿ ಅಡಗಿಸುವ ಕೆಲಸ ಮಾಡಲು ಹೊರಟಿದೆ ಎಂದು ಬಿಜೆಪಿ(BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ(t BY Vijayendra) ಟೀಕಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಸೂದೆ ಮೂಲಕ ಪತ್ರಕರ್ತರ ಧ್ವನಿಯನ್ನೂ ನಿಯಂತ್ರಿಸುವ ಕೆಲಸ ಮಾಡಲು ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯಾರಾದರೂ ತಮ್ಮ ಅಭಿಪ್ರಾಯ ತಿಳಿಸಿದರೆ, ಅದನ್ನು ಹತ್ತಿಕ್ಕಿ, 7-8 ವರ್ಷ ಜೈಲಿಗೆ ಹಾಕುವ ದುಸ್ಸಾಹಸಕ್ಕೆ ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ನಾವು ಇದನ್ನು ವಿರೋಧಿಸುತ್ತೇವೆ ಎಂದರು.

ರಾಜ್ಯದಲ್ಲಿ ಕಲೆಕ್ಷನ್ ಕಿಂಗ್ ಅಂದರೆ ಅದು ಬಿ.ವೈ ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿ ಇಡಬೇಕಾ? ಎನ್ನುವ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ 8 ತಿಂಗಳಿಂದ ಈ ಕಾಂಗ್ರೆಸ್ ಸರಕಾರ ಗೌರವಧನ ಕೊಟ್ಟಿಲ್ಲ. ಕಾರಣ ಏನು? ಖಜಾನೆ ಖಾಲಿಯೇ ಅಲ್ಲವೇ? ಯಾವನಿಗೋ ದಬ್ಬಾಳಿಕೆ, ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಬರಬೇಡಿ. ನಾನೊಬ್ಬ ಜನಪ್ರತಿನಿಧಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ಕುರಿತು ತಮ್ಮ ಬಾಯಲ್ಲಿ ಮಾತನಾಡದೇ ಇರುವುದು ಒಳ್ಳೆಯದು. ರಾಜ್ಯದ ರಾಜಕೀಯದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರೆಂದು ಕೇಳಿದರೆ ಕಾಂಗ್ರೆಸ್ ಪಕ್ಷದವರು ಹೆಸರು ಹೇಳುತ್ತಾರೆ. ಎರಡೂವರೆ ವರ್ಷ ಕಳೆದರೂ 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಮಾಡಿಲ್ಲ. ಗುಂಡಿಗಳನ್ನು ಮುಚ್ಚಿಲ್ಲ. ಜಗಳೂರು ತಾಲೂಕಿನ ನಿರುದ್ಯೋಗಿ ಯುವಕ ಅಂಜಿನಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಳ ಮೀಸಲಾತಿ ನೆಪದಲ್ಲಿ ಹುದ್ದೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯ ಚೈತ್ರಾ ಬಿ. ಎಂಬ ಯುವತಿ ಕೊಕ್ಕೋ ಸ್ಪರ್ಧೆಯಲ್ಲಿ 32 ಬಾರಿ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದವರು. ಅಕ್ಕಪಕ್ಕದ ರಾಜ್ಯಗಳು ಇಂಥ ಕೊಕ್ಕೋ ಪ್ರತಿಭೆಗೆ 1 ಕೋಟಿ, 2 ಕೋಟಿ ಪ್ರಶಸ್ತಿ ಕೊಟ್ಟಿವೆ. ಲಜ್ಜೆಗೆಟ್ಟ, ನಾಚಿಕೆಗೇಡಿನ ಕಾಂಗ್ರೆಸ್ ಸರಕಾರವು ಅಂಥ ಪ್ರತಿಭೆಗೆ ಕೇವಲ 5 ಲಕ್ಷ ಕೊಟ್ಟಿದೆ. ಆ ಯುವತಿ 5 ಲಕ್ಷವನ್ನು ಸರಕಾರದ ಮುಖಕ್ಕೆ ಬಿಸಾಕಿದ್ದಾಳೆ. ಖಜಾನೆ ಖಾಲಿ ಆಗಿಲ್ಲ ಎಂದರೆ ಇದೇನು? ಎಂದು ಪ್ರಶ್ನಿಸಿದ್ದರು.













