ಹಸುಗಳ ಕೆಚ್ಚಲು ಕೊಯ್ದ ಆರೋಪಿ ಬಂಧನ ಮಾಡಲಾಗಿದೆ. ಇದೇ ವಿಚಾರವಾಗಿ ಹಸುಗಳ ಮಾಲೀಕ ಕರ್ಣ ಮಾತನಾಡಿದ್ದು, ಆರೋಪಿಯನ್ನ ಮೆಂಟಲ್ ಅಂತ ಹೇಳ್ತಿದ್ದಾರೆ. ಆದ್ರೆ ಅವನು ಬ್ಯಾಗ್ ಫ್ಯಾಕ್ಟರಿಯಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡ್ತಿದ್ದ.. ಆತ ಮಾನಸಿಕ ಅಸ್ವಸ್ಥ ಆಗಿದ್ರೆ ಕೆಲಸಕ್ಕೆ ಇಟ್ಟುಕೊಂಡಿದ್ಯಾಕೆ..? ಒಬ್ಬನೇ ಈ ಕೃತ್ಯ ಮಾಡೋದಕ್ಕೆ ಸಾಧ್ಯವಿಲ್ಲ. ಯಾರ ಕೈವಾಡ ಇದೆ ಅನ್ನೋದು ಗೊತ್ತಾಗಬೇಕಿದೆ ಎಂದಿದ್ದಾರೆ. ಇದರಲ್ಲಿ ಏನೋ ಮಸಲತ್ತು ಇದೆ ಎಂದು ಹಸುಗಳ ಮಾಲೀಕ ಕರ್ಣ ಆರೋಪಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಹಸು ಕೆಚ್ವಲು ಕೊಯ್ದ ಪ್ರಕರಣದಲ್ಲಿ ಹಿಂದುಪರ ಸಂಘಟನೆಗಳ ಹೋರಾಟಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ನಾಳೆ ಚಾಮರಾಜಪೇಟೆಯಲ್ಲೇ ಸಂಕ್ರಾಂತಿ ಆಚರಣೆಗೆ ಬಿಜೆಪಿ ನಿರ್ಧಾರ ಮಾಡಿದೆ. ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಂಕ್ರಾಂತಿ ಆಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಲಿದ್ದಾರೆ.

ಹಸು ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಡಾ.ಸಿಎನ್ ಅಶ್ವತ್ಥ ನಾರಾಯಣ ಮಾತನಾಡಿದ್ದಾರೆ. ಕೃತ್ಯದ ಹಿಂದೆ ಸಂಘಟನೆಯ ಕೆಲವರು ಇರಬಹುದು. ಕಾಂಗ್ರೆಸ್ನ ದ್ವೇಷ ರಾಜಕಾರಣದಿಂದ ಈ ರೀತಿಯಾಗ್ತಿದೆ. ಮಾನಸಿಕವಾಗಿ ಕೆಲವರಿಗೆ ಉತ್ತೇಜನ ನೀಡಿದಂತಾಗ್ತಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡ್ತಿದೆ. ಆರೋಪಿ ಬಿಹಾರ ಮೂಲದವನಾದ್ರೆ ಆತನಿಗೆ ಇಷ್ಟು ಧೈರ್ಯ ಹೇಗೆ ಬರುತ್ತೆ. ಇದರ ಹಿಂದೆ ಬೇರೆ ಯಾರೋ ಇದ್ದಾರೆ ಎಂದಿದ್ದಾರೆ. ಘಟನೆ ಸಂಬಂಧ ಸ್ಪಷ್ಟ ತನಿಖೆಯಾಗಬೇಕು. ಸತ್ಯಾಸತ್ಯತೆ ಹೊರ ಬರಬೇಕು ಎಂದಿದ್ದಾರೆ.

ಹಸುಗಳ ಕೆಚ್ಚಲು ಕತ್ತರಿಸಿರುವ ಘಟನೆಗೆ ಉಡುಪಿಯ ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಖಂಡನೆ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಮಾತಾಡಿರುವ ಶ್ರೀಗಳು ಉಪವಾಸ ಕುಳಿತು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದ್ದಾರೆ. ಇದೊಂದು ಅತ್ಯಂತ ಹೇಯ ಕೃತ್ಯ ಎಂದಿರುವ ಶ್ರೀಗಳು ಯಾವ ಮಾತಿನಿಂದ ಖಂಡಿಸಬೇಕು ಎಂದು ತಿಳಿಯುತ್ತಿಲ್ಲ.

ಪಶು ಆಸ್ಪತ್ರೆ ಪ್ರತಿಭಟನೆಯಲ್ಲಿ ಈ ಗೋವನ್ನು ಕರೆದೊಯ್ಯಲಾಗಿತ್ತು. ಇದೀಗ ಅದೇ ಗೋವಿನ ಕೆಚ್ಚಲನ್ನೇ ಕೊಯ್ಯುವ ದುಷ್ಕೃತ್ಯ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.