ಕಳೆದ ಕೆಲವು ದಿನಗಳ ಹಿಂದೆ ಹಿಂದುಳಿದ ವರ್ಗಗಳ ಪಟ್ಟಿ ರೂಪಿಸುವ ಅಧಿಕಾರನ್ನು ರಾಜ್ಯಗಳಿಗೇ ಕೊಡುವ ಸಂವಿಧಾನ ತಿದ್ದುಪಡಿ (127ನೇ ತಿದ್ದುಪಡಿ ಕಾಯ್ದೆ) ಮಸೂದೆಯನ್ನು ಮೋದಿ ಸರ್ಕಾರ ಸಂಸತಿನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಮೋದಿ ಸರ್ಕಾರದ ಈ ನಡೆಗೆ ಆರ್ಎಸ್ಎಸ್ ಹಾಗೂ ಬಿಜೆಪಿಯಲ್ಲಿ ಅಂತರಿಕವಾಗಿ ಅಪಸ್ವರಗಳು ಕೇಳಿ ಬಂದಿದೆ. ರಾಷ್ಟ್ರೀಯ ಸ್ವಯಂ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಈ ಮಸೂದೆಯ ಬಗ್ಗೆ ನೀಡಿದ ಪ್ರತಿಕ್ರಿಯೆ ಅಸಾಮಾನ್ಯವಾದದ್ದಾಗಿತ್ತು. ʻʻಈ ತಿದ್ದುಪಡಿ ಭಾರತದ ಐತಿಹಾಸಿಕ ಅವಶ್ಯಕವಾಗಿತ್ತು. ಈ ಕಾನೂನು ಈ ಸಮಾಜದಲ್ಲಿ ಅಸಮಾನತೆ ಬೀಡುಬಿಟ್ಟಿರುವವರೆಗೂ ಮುಂದುವರೆಯಬೇಕು. ದಲಿತ ಇತಿಹಾಸವಿಲ್ಲದೆ ಭಾರತದ ಇತಿಹಾಸ ಪೂರ್ಣಗೊಳ್ಳುವುದಿಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಈ ಮಸೂದೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು.
ಆದರೆ ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ಹೊಸಬಾಳೆ ಹೇಳಿಕೆಗಳು ಅದೇ ಆರ್ಎಸ್ಎಸ್ನ ಸಂಚಾಲಕನಾಗಿರುವ ಮೋಹನ್ ಭಾಗವತ್ ಹೇಳಿಕೆಗೆ ತಧ್ವಿರುದ್ಧವಾಗಿತ್ತು ಎಂಬುವುದು ಗಮನಾರ್ಹ. ಆಗಸ್ಟ್ 10ರ ಸಂಸತ್ ಕಲಾಪದಲ್ಲಿ ಮೂರನೇ ಎರಡು ಸದಸ್ಯರ ಬೆಂಬಲದೊಂದಿಗೆ ಮೋದಿ ಸರ್ಕಾರ ಈ ತಿದ್ದುಪಡಿಗೆ ಸರ್ವಾನುಮತದಿಂದ ಅಂಗೀಕಾರ ಪಡೆದುಕೊಂಡಿದೆ. ಮೋದಿ ಸರ್ಕಾರದ ಈ ನಡೆ ಕಾಂಗ್ರೆಸ್ಗೆ ನುಂಗಲಾಗದ ತುತ್ತಾಗಿದೆ. ಯಾಕೆಂದರೆ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಈ ರೀತಿಯ ಗಹಮನಾರ್ಹ ತಿದ್ದುಪಡಿಗಳನ್ನು ಮಾಡಿಕೊಂಡಿಲ್ಲ. ಮತ್ತೊಂದೆಡೆ, ಮೋದಿ ಸರ್ಕಾರ ಈ ಓಬಿಸಿ ಪಟ್ಟಿ ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ಎಂಬ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದು ಮುಂಬರಲಿರುವ ಪಂಚರಾಜ್ಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಂಬುವುದು ಕೂಡ ಅಷ್ಟೇ ಸತ್ಯ.

ದೇಶದಲ್ಲಿರುವ ಹಿಂದುಳಿದ ವರ್ಗಗಳು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸ್ಥಾನಮಾನವನ್ನು ಮರುಮೌಲ್ಯಮಾಪನ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂಬುವುದನ್ನು ಮನಗಂಡಿರುವ ಆರ್ಎಸ್ಎಸ್ ಹಾಗೂ ಬಿಜೆಪಿ ಈ ಮಸೂದೆಯನ್ನು ಗಡಿಬಿಡಿಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಇದು ಓಬಿಸಿಗಳ ಒಲೈಕೆ ರಾಜಕಾರಣ ಎಂಬುವುದು ಕೂಡ ದಿಟ. ಅದ್ಯಾವಾಗ ತಮಿಳುನಾಡು ಸರ್ಕಾರ ಶೂದ್ರ ಜಾತಿಗಳಿಗೂ ಪೂಜಾರಿ, ಅರ್ಚಕರಾಗುವ ಅವಕಾಶ ಒದಗಿಸಿಕೊಟ್ಟಿದ್ದಕ್ಕೂ ಆರ್ಎಸ್ಎಸ್ ʻಬಹಿರಂಗವಾಗಿʼ ಯಾವುದೇ ತಕರರಾರು ಎತ್ತಿರಲಿಲ್ಲ. ಇದು ಆರ್ಎಸ್ಎಸ್ ಪ್ರತಿಪಾದಿಸುವ ಹಿಂದುತ್ವದ ಸಿದ್ಧಾತಂಕ್ಕೆ ವಿರುದ್ಧವಾಗಿರುವಂತದ್ದೇ. ಆದರೂ ಸಂಘ ಈ ಬಗ್ಗೆ ಮೌನ ತಾಳಿತು. ಯಾಕೆಂದರೆ, ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ದೇಶದ ಹಿಂದುಳಿದ ವರ್ಗಗಳು ಪ್ರಮುಖ ಪಾತ್ರವಹಿಸಲಿದೆ ಎಂಬ ಸತ್ಯದ ಅರಿವು ಆರ್ಎಸ್ಎಸ್ಗೆ ಈಗಾಗಲೇ ಆಗಿದೆ.
ಆರ್ಎಸ್ಎಸ್ನ ಮುಸ್ಲಿಂ ವಿರೋಧಿ ಹೋರಾಟದಲ್ಲಿ ದೈಹಿಕವಾಗಿ ಮುಂಚೂಣಿಯಲ್ಲಿರುವವರು ಶೂದ್ರರು ಮತ್ತು ಹಿಂದುಳಿದ ವರ್ಗಗಳೇ ಆಗಿವೆ. ಮುಂದೊಂದು ದಿನ ಹಿಂದೂ ಸಮುದಾಯದೊಳಗೆ ನಮಗೂ ಸಮಾನತೆ ಸಿಗಲಿದೆ ಎಂದು ಉದ್ದೇಶದಿಂದ ಶೂದ್ರರು ಹಾಗೂ ಹಿಂದುಳಿದ ವರ್ಗಗಳು ಆರ್ಎಸ್ಎಸ್ ಸಿದ್ಧಾತಂಕ್ಕಾಗಿ ತಮ್ಮ ದೈಹಿಕ ಬಲವನ್ನು ಧಾರೆಯೆರೆಯುತ್ತಾ ಬರುತ್ತಿದೆ. ಅಕಸ್ಮಾತ್ ಬಿಜೆಪಿ ನೇರವಾಗಿ ಹಾಗೂ ಆರ್ಎಸ್ಎಸ್ ಪರೋಕ್ಷವಾಗಿ ಆಡಳಿತ ನಡೆಸುವಾಗ ಶೂದ್ರರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಬೇಕಾದ ಸ್ಥಾನಮಾನ ಮತ್ತು ಸಾಂವಿಧಾನಿಕ ಮಾನ್ಯತೆ ಸಿಗದೆ ಇದ್ದರೆ, ಆರ್ಎಸ್ಎಸ್ನ ಬ್ರಾಹ್ಮಣ್ಯದ ವಿರುದ್ಧ ಅವರೂ ತಿರುಗಿ ಬೀಳಲಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಮುಖವಾಣಿಯೊಂದಿಗೆ ಆರ್ಎಸ್ಎಸ್ ʻಹಿಂದುಳಿದ ವರ್ಗಗಳ ಏಳಿಗೆʼ ಎಂಬ ಕಪಟ ನಾಟಕ ಮುಂದುವರೆಸುತ್ತಿದೆ.
ಜಾತಿ ಆಧಾರಿತ ಪ್ರಾತಿನಿಧ್ಯ ವಿರೋಧಿಸುವ ಆರ್ಎಸ್ಎಸ್ !
ಆರ್ಎಸ್ಎಸ್ ಒಳಗೆಯೇ ಇರುವ ಮತ್ತೊಂದು ಸಮಸ್ಯೆ ಎಂದರೆ ಜಾತಿ ಆಧಾರಿತ ಪ್ರಾತಿನಿಧ್ಯತೆ. 1999-2004, ವಾಜಪೇಯಿ ಹಾಗೂ ಅಡ್ವಾಣಿ ಕಾಲದಿಂದಲೂ ಆರ್ಎಸ್ಎಸ್ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿದೆ. ಆದರೆ ಇದೇ ಆರ್ಎಸ್ಎಸ್ನಿಂದ ಬೆಳೆದು ಬಂದು ಸದ್ಯ ಮೋದಿ ಸರ್ಕಾರದ ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಹೇಳಿಕೆ ಸ್ವತಃ ಸಂಘಕ್ಕೇ ಮಗ್ಗುಲಮುಳ್ಳಾಗಿ ಪರಿಣಮಿಸುತ್ತಿದೆ. ಮೂಲತಃ ಹಿಂದುಳಿದ ವರ್ಗಕ್ಕೆ ಸೇರಿದ ಧರ್ಮೇಂದ್ರ ಪ್ರಧಾನ್ ರಾಜ್ಯಸಭೆಯಲ್ಲಿ ಮಾಡಿದ ಭಾಷಣವೊಂದರಲ್ಲಿ, ತಾನೊಬ್ಬ ಹಿಂದೂ ಎಂಬ ಮನೋಭಾವನೆ ಹೊಂದಿರುವ ಶೂದ್ರ ಹಾಗೂ ಹಿಂದುಳಿದ ವರ್ಗಗಳು ಶಿಕ್ಷಣ, ವೃತ್ತಿ ಸೇರಿದಂತೆ ಧಾರ್ಮಿಕ ನೆಲೆಗಟ್ಟಿನಲ್ಲೂ ವಿಶೇಷ ಸ್ಥಾನಮಾನ ಬಯಸುತ್ತಿದೆ. ಇದನ್ನು ಬಯಸುವ ಬಹುತೇಕರು ಆರ್ಎಸ್ಎಸ್ ಹಾಗೂ ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ʻʻಜಾತಿ ಆಧಾರಿತ ಗಣತಿ, ಕ್ರಾಂತಿಕಾರಿ ಬೆಳವಣೆಗೆʼʼ ಎಂದು ಹೇಳಿದ್ದರು.

ಆದರೆ ಆರ್ಎಸ್ಎಸ್ ಇದ್ಯಾವುದನ್ನೂ ಸಮಸ್ಯೆ ಎಂದು ಭಾವಿಸದೆ, ನೇರವಾಗಿ ಮುಸ್ಲಿಮರ ಮೇಲೆ ಪರಿಣಾಮ ಬೀರುವ ರಾಮ ಮಂದಿರ, 370ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ ಇತ್ಯಾದಿ ಸಂಘ ಪರಿವಾರಕ್ಕೆ ಸಮಸ್ಯೆಗಳಾಗಿ ಕಂಡವು. ಆರ್ಎಸ್ಎಸ್ನ ಸೈದ್ಧಾಂತಿಕ ನಿಲುವುಗಳು ಬ್ರಾಹ್ಮಣ್ಯದಿಂದ ಬಂದಿದ್ದವಾದರೂ ದೇಶದ ಅಲ್ಪಸಂಖ್ಯಾತರನ್ನು ದೈಹಿಕವಾಗಿ ಎದುರಿಸುವ ಮತ್ತು ವಿರೋಧಿಸುವ ಕಿಮ್ಮತ್ತು ಅವರಿಗೆ ಇಲ್ಲವಾಗಿತ್ತು. ಇದೇ ಕಾರಣಕ್ಕೆ ದಲಿತರು ಸೇರಿದಂತೆ ಇರುವ ಶೂದ್ರರು ಹಾಗೂ ಹಿಂದುಳಿದ ವರ್ಗಗಳನ್ನು ʻಹಿಂದೂ ನಾವೆಲ್ಲ ಒಂದುʼ ಎಂಬ ಭೋಗಸ್ ತತ್ವದಡಿಯಲ್ಲಿ ಒಗ್ಗೂಡಿಸಿ ತಮ್ಮ ಸೇನೆಯ ಕಾಲಾಳುಗಳನ್ನಾಗಿ ಆರ್ಎಸ್ಎಸ್ ಮಾಡಿಕೊಂಡಿತು.
ಅದ್ಯಾವಾಗ, 2014ರಲ್ಲಿ ನರೇಂದ್ರ ಮೋದಿ ತನ್ನನ್ನು ತಾನೊಬ್ಬ ಹಿಂದುಳಿದ ವರ್ಗದಿಂದ ಬಂದವ ಎಂದು ಹೇಳಿಕೊಂಡರೋ, ಆಗಲೇ ಆರ್ಎಸ್ಎಸ್ನ ಉದ್ದೇಶ ಹಾಗೂ ಗುರಿ ಎರಡೂ ಕೂಡ ಸುಲಭವಾಗಿ ಈಡೇರಿತು. ಅಲ್ಲದೆ, ತಮ್ಮ ವರ್ಗದಿಂದಲೇ ಒಬ್ಬ ಪ್ರಧಾನಿಯಾಗುತ್ತಿರುವ ಕಾರಣಕ್ಕೆ ನಮ್ಮ ಮುಂದಿನ ದಿನಗಳು ಉಜ್ವಲವಾಗಿರಲಿದೆ ಎಂಬ ಭ್ರಮೆಗೆ ಈ ಹಿಂದುಳಿದ ವರ್ಗಗಳು ಬಿದ್ದು ಬಿಟ್ಟವು. ಇದಕ್ಕೆ ಪೂರಕ ಎಂಬಂತೆ ಮೋದಿ ತನ್ನ ಸಂಪುಟ ಪುನರ್ರಚನೆ ಮಾಡುವ ಸಂಧರ್ಭದಲ್ಲಿ ದಲಿತ ಸೇರಿದಂತಿರುವ ಹಿಂದುಳಿದ ವರ್ಗಗಳ ನಾಯಕರಿಗೇ ಹೆಚ್ಚು ಪಾಮುಖ್ಯತೆ ಕೊಟ್ಟರು.
ಈ ರೀತಿಯಾದ ಜಾತಿ ಆಧಾರಿತ ಅವಕಾಶಗಳನ್ನು ಆರ್ಎಸ್ಎಸ್ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಜಾತಿ ಆಧಾರಿತವಾದ ಪಾತಿನಿಧ್ಯ ಒದಗಿಸಿಕೊಡುವುದು ದೇಶದ ಸಂವಿಧಾನವೇ ಹೊರತು ಮತ್ಯಾವುದು ಅಲ್ಲ. ಇದೇ ಕಾರಣಕ್ಕೆ ಕೆಬಿ ಹೆಗ್ಡೆವಾರ್, ಎಮ್ಎಸ್ ಗೋಳ್ವಾಳ್ಕರ್ಗಿಂತ ಮೊದಲ ಹಾಗೂ ನಂತರ ಬಂದ ಯಾವ ಹಿಂದುತ್ವ ವಾದಿಗಳು ಸಂವಿಧಾನವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈ ರೀತಿಯಾದ ಜಾತಿ ಆಧಾರಿತ ಪ್ರಾತಿನಿಧ್ಯತೆ ಹಿಂದುಗಳಿದ ವರ್ಗಗಳನ್ನು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕವಾಗಿ ಸದೃಢಗೊಳಿಸಬಲ್ಲವು ಎಂಬ ಜ್ಙಾನ ಅವರಿಗಿತ್ತು. ಹೀಗಾಗಿ ಸಂಘದೊಳಗಿನ ಉನ್ನತ ಸ್ಥಾನ ಸೇರಿದಂತೆ ಪಕ್ಷದ ಯಾವುದೇ ಉನ್ನತ ಸ್ಥಾನವೂ ಬ್ರಾಹ್ಮಣ್ಯೇತರ ಕೈಗೆ ಹೋಗಬಾರದು ಎಂಬ ಎಚ್ಚರಿಕೆ ಅವರಲ್ಲಿದೆ. ಆದರೆ ಅನಿವಾರ್ಯವಾಗಿ ಹಿಂದುಳಿದ ಸಮುದಾಯಗಳಿಂದ ಬಂದಂಥಾ ನಾಯಕರೆನಿಸಿಕೊಂಡವರಿಗೆ ಪಟ್ಟ ಕಟ್ಟಿ ಮೆರೆಸಬೇಕಾದ ಅನಿವಾರ್ಯತೆಗೂ ಆರ್ಎಸ್ಎಸ್ ಸಿಲುಕಿಕೊಂಡಿದೆ.
ಆರ್ಎಸ್ಎಸ್ ಹಾಗೂ ಬಿಜೆಪಿಯಲ್ಲಿರುವ ತೆಳು ಸೈದ್ಧಾಂತಿಕ ಬಿನ್ನಾಭಿಪ್ರಾಯ !
ಮೋದಿ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರ ಮೇಲೆ ಆರ್ಎಸ್ಎಸ್ಗೆ ಕೆಲವೊಂದಿಷ್ಟು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದೇ ಇದೆ. ಇದನ್ನು ನಾವು ಆರ್ಎಸ್ಎಸ್ನ ಹಿರಿಯ ನಾಯಕರ ಲೇಖನಗಳಿಂದ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬಹುದು. ಬ್ರಾಹ್ಮಣ ಜಾತಿಗೆ ಸೇರಿದ ಆಂಧ್ರಪ್ರದೇಶದ ರಾಮ್ ಮಾಧವ್ ಎಂಬ ಆರ್ಎಸ್ಎಸ್ನ ಹಿರಿಯ ನಾಯಕ 2014ಕ್ಕೂ ಮೊದಲೂ ಬಿಜೆಪಿಯ ಉನ್ನತ ಹುದ್ಧೆಯ ಅಕಾಂಕ್ಷಿಯಾಗಿದ್ದರು. ಆದರೆ ಅದ್ಯಾವಾಗ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಗೆದ್ದು ಅಧಿಕಾರ ಹಿಡಿದರೋ, ಆಗಲೇ ಆರ್ಎಸ್ಎಸ್ ಗೆ ಮರಳಿ ಅಲ್ಲೇ ಉಳಿದುಕೊಂಡು ಬಿಟ್ಟರು.
ಅದಾದ ಬಳಿಕ ವಿವಿಧ ಪತ್ರಿಕೆಗಳಿಗೆ ರಾಮ್ ಮಾಧವ್ ಬರೆದ ಲೇಖನಗಳು ಮೋದಿ ಸೇರಿದಂತೆ ಪಕ್ಷದ ಉನ್ನತ ಹುದ್ದೆಯಲ್ಲಿರುವ ಹಿಂದುಳಿದ ವರ್ಗದ ನಾಯಕರನ್ನು ಬೊಟ್ಟು ಮಾಡಿಕೊಂಡೇ ಇವೆ ಎಂದು ದಲಿತ ಹಕ್ಕುಗಳ ಹೋರಾಟಗಾರ ಹಾಗೂ ಹಿರಿಯ ರಾಜಕೀಯ ವಿಶ್ಲೇಷಕ ಕಾಂಚ ಇಲೈಯ್ಯಾ ಶೆಫರ್ಡ್ ಹಲವು ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ. ʻಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಯಾಗಿ ಸರ್ವಾಧಿಕಾರಿ ಧೋರಣೆ ಸಲ್ಲʼʼ ಎಂಬ ಮಾಧವ್ ಮಾತು ಅವರೊಳಗೆ ತುಂಬಿಕೊಂಡಿರುವ ಜಾತಿ ಅಸಹಿಷ್ಣುವಿಗೆ ಹಿಡಿದಿರುವ ಕೈಗನ್ನಡಿ. 2020ರಲ್ಲಿ ರಾಮ್ ಮಾಧವ್ ಬರೆದಿರುವ Because India Comes First: Reflections on Nationalism, Identity and Culture ಎಂಬ ಕೃತಿಯಲ್ಲಿ ಹಿಂದುಳಿದ ವರ್ಗಗಳ ಕೈಯಲ್ಲಿ ಅಧಿಕಾರ ಕೊಟ್ಟು ನಡೆಸುವ ಅಪಾಯದ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಈ ಮೂಲಕ ಸಂಘ ಹೆಗ್ಡೆವಾರ್ ರಂಥವರು ಹಾಕಿಕೊಟ್ಟ ಹೋರಾಟದ ಹಾದಿ ಹಾಗೂ ಮನುಸ್ಮೃತಿಯನ್ನು ಮೂಲೆಗುಂಪು ಮಾಡಿದ ಹಾಗೆ ಎಂಬ ವಾದವನ್ನು ಮುಂದಿಟ್ಟಿದ್ದರು.
2014ರಲ್ಲಿ ಆರ್ಎಸ್ಎಸ್ನ ಆಂತರಿಕ ಸಭೆಯೊಂದರಲ್ಲಿ ಮೋಹನ್ ಭಾಗವತ್ ಜಾತಿ ಬಗ್ಗೆ, ಸಂಘಪರಿವಾರ ಜಾತಿ ನಿರ್ಮೂಲನೆ ಹಾಗೂ ಜಾತಿ ವಿರೋಧಿ ಹೇಳಿಕೆಗಳನ್ನು ಹಾಗೂ ನಡವಳಿಕೆಗಳನ್ನು ತೋರಬಾರದು. ಈ ಸಮಾಜ ಎಲ್ಲಿಯವರೆಗೆ ಜಾತಿಯನ್ನು ನಂಬಿಕೊಂಡು ಬದುಕುತ್ತದೋ ಅಲ್ಲಿಯವರೆಗೆ ಜಾತಿಯ ಅಗತ್ಯತೆ ನಮಗಿದೆ ಎಂದು ಹೇಳಿಕೊಂಡಿದ್ದರು. ಎಲ್ಲರಿಗೂ ಗೊತ್ತಿರುವ ಹಾಗೆ ಆರ್ಎಸ್ಎಸ್ನ ಬ್ರಾಹ್ಮಣ್ಯ ಎಂಬುವುದು ಕೇವಲ ಬಿಜೆಪಿಗೆ ಮಾತ್ರ ಸೀಮಿತವಾಗಿರುವಂಥದ್ದಲ್ಲ, ಎಲ್ಲಾ ಪಕ್ಷಗಳಲ್ಲೂ ಆರ್ಎಸ್ಎಸ್ನ ಬ್ರಾಹ್ಮಣ್ಯದ ಮನಸ್ಥಿತಿ ಹೊಂದಿರುವವರಿದ್ದಾರೆ. ಆದರೆ ಇಂಥಾ ಸೂಕ್ಷ್ಮತಗೆಳನ್ನು ಗಮನಿಸಿ ಅರ್ಥಮಾಡಿಕೊಳ್ಳುವ ಯಾರಿಂದಲೂ ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷದ ಎಂದು ಅವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಅಂದಹಾಗೆ, ಆರ್ಎಸ್ಎಸ್ನ ಮೂಲ ಉದ್ದೇಶವೂ ಇದೇ ಆಗಿದೆ.
ಹೀಗಾಗಿ ಜಾತಿ ಆಧಾರಿತ ಪ್ರಾತಿನಿಧ್ಯ ಕೇಳುವ ಅಥವಾ ಅದರ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ನಡೆ ಮತ್ತು ನುಡಿಗಳನ್ನು ಆರ್ಎಸ್ಎಸ್ಗೆ ಕ್ಷುಲ್ಲಕವೆಂದು ತಳ್ಳಿಹಾಕುವಂತಿಲ್ಲ. ಯಾಕೆಂದರೆ, ಆರ್ಎಸ್ಎಸ್ನ ಮುಸ್ಲಿಂ ವಿರೋಧಿ ಹೋರಾಟದಲ್ಲಿ ʻದೈಹಿಕ ಬಲʼದ ಸೇವೆ ಒದಗಿಸಿದವರು ಈ ದಲಿತರು ಹಾಗೂ ಹಿಂದುಳಿದ ವರ್ಗಗಳು. ಅಧಿಕಾರ ಹಾಗೂ ನಿರ್ಣಾಯಕ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳು ನೇರವಾಗಿ ಪಾಲು ಕೇಳಿದರೆ ಆರ್ಎಸ್ಎಸ್ ಕೊಡಲೇ ಬೇಕಾದ ಅನಿವಾರ್ಯತೆಗೆ ಬಿದ್ದಿದೆ. ಈಗ ಸಂಸತ್ನಲ್ಲಿ ಮೋದಿ ಸರ್ಕಾರ ಅಂಗೀಕಾರ ಪಡೆದ ಹಿಂದುಳಿದ ವರ್ಗಗಳ ಪಟ್ಟಿ ರೂಪಿಸುವ ಅಧಿಕಾರನ್ನು ರಾಜ್ಯಗಳಿಗೇ ಕೊಡುವ ಸಂವಿಧಾನ ತಿದ್ದುಪಡಿ (127ನೇ ತಿದ್ದುಪಡಿ ಕಾಯ್ದೆ) ಕಾಯ್ದೆಯನ್ನು ಒಲ್ಲೆನ್ನದೆ ಆರ್ಎಸ್ಎಸ್ ಒಪ್ಪಿಕೊಳ್ಳಲೇ ಬೇಕು. ಇದು ಬಿಜೆಪಿ ಪಾಲಿಗೆ ಮುಂದಿನ ಚುನಾವಣಾ ಅಸ್ತ್ರವಾಗಿದ್ದರೂ, ಆರ್ಎಸ್ಎಸ್ ಪಾಲಿಗೆ ಮನುಸ್ಮೃತಿ ವಿರೋಧಿ ಧೋರಣೆಯಾಗಿದೆ ಎನ್ನುವುದಂತೂ ನಿಜ.