ಬೆಂಗಳೂರು: ರಾಜ್ಯಪಾಲರ ನಡೆಯ ವಿರುದ್ಧ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣ ವಾಪಸ್ ಕರೆಯಿಸಿಕೊಳ್ಳಬೇಕು. ರಾಜ್ಯಪಾಲರದ್ದು ಖಂಡನಾರ್ಹವಾದ ನಡೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ನಡುವೆ ಕಾಂಗ್ರೆಸ್ಗೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಗ್ಯಾರಂಟಿಯಿಂದ ನಮ್ಮ ಸರ್ಕಾರ ಬಡವರ ಬದುಕನ್ನು ಬದಲಾಯಿಸಿದೆ : ಮೋದಿ ವಿರುದ್ಧ ಲಾಡ್ ವಾಗ್ದಾಳಿ..
ರಾಜ್ಯ ಸರ್ಕಾರ ಕೇವಲ ರಾಜಕಾರಣಕ್ಕಾಗಿ ಮತ್ತು ತಮ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವುದು ರಾಜ್ಯಪಾಲರಿಗೆ ತೋರಿರುವ ಅಗೌರವ. ಅದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬೊಮ್ಮಾಯಿ, ಹಿಂದಿನ ರಾಜ್ಯಪಾಲರು ಮೊದಲ ಪುಟ ಕೊನೆ ಪುಟ ಓದದೆ ಇರುವ ಅನೇಕ ಉದಾಹರಣೆಗಳಿವೆ. ರಾಜ್ಯಪಾಲರ ವಿರುದ್ದ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಸಂವಿಧಾನಕ್ಕೆ ಹಾಗೂ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಮಾಡಿರುವ ಅವಮಾನ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಅತ್ಯಂತ ಹಿರಿಯ ಶಾಸಕ ಬಿ.ಕೆ. ಹರಿಪ್ರಸಾದ ಅವರ ವರ್ತನೆ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ವಿರುದ್ದ ಕ್ರಮ ಜರುಗಿರಸುವುದು ಅತ್ಯಂತ ಅವಶ್ಯಕತೆ ಇದೆ. ಈ ಹಿಂದೆ ಹಂಸರಾಜ ಭಾರದ್ವಾಜ್ ಅವರು ರಾಜ್ಯಪಾಲರಾಗಿದ್ದಾಗ ಹಲವಾರು ವಿಚಾರಗಳಲ್ಲಿ ತಮ್ಮ ಮಿತಿ ಮೀರಿ, ಕಾನೂನು ಮೀರಿ ವರ್ತನೆ ಮಾಡಿರುವ ಉದಾಹರಣೆ ಸಾಕಷ್ಟು ಇವೆ. ರಾಜಭವನ ಕಾಂಗ್ರೆಸ್ ಭವನ ಆಗಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತರೆ ಎಂದು ಪ್ರಶ್ನಿಸಿದ್ದಾರೆ.












