ಬಿಜೆಪಿಯು ಭಾರತ ಎಂಬ ಹೆಸರನ್ನು ‘ಭಾರತ್’ ಎಂದು ಬದಲಾಯಿಸಲು ಹೊರಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟೀಕಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ವಿಚಾರ ಪ್ರಸ್ತಾಪಿಸಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟ ನಂತರ ಇದೀಗ ಬಿಜೆಪಿ ಭಾರತವನ್ನು ‘ಭಾರತ್’ ಎಂದು ಹೆಸರು ಬದಲಾಯಿಸಲು ಬಯಸಿದೆ” ಎಂದು ಕುಟುಕಿದ್ದಾರೆ.
“ಭಾರತವನ್ನು ಪರಿವರ್ತನೆ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಆದರೆ, ಒಂಬತ್ತು ವರ್ಷಗಳಲ್ಲಿ ಬದಲಾಗಿದ್ದು ಹೆಸರು ಮಾತ್ರ” ಎಂದು ಎಂ.ಕೆ.ಸ್ಟಾಲಿನ್ ಲೇವಡಿ ಮಾಡಿದ್ದಾರೆ.
ಬಿಜೆಪಿಯು ‘ಇಂಡಿಯಾ’ (ಭಾರತ) ಎಂಬ ಒಂದೇ ಪದದಿಂದ ಗಲಿಬಿಲಿಗೊಂಡಂತೆ ತೋರುತ್ತಿದೆ. ಏಕೆಂದರೆ ಬಿಜೆಪಿಗರು ವಿರೋಧಿಗಳ ಏಕತೆಯ ಬಲವನ್ನು ಗುರುತಿಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಇಂಡಿಯಾ ಮೈತ್ರಿಕೂಟ ಕಿತ್ತೊಗೆಯಲಿದೆ ಎಂದು ಕಿಡಿಕಾರಿದರು.
“ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದು ಕೊರೊನಾ, ಡೆಂಗಿ, ಮಲೇರಿಯಾಕ್ಕೆ ಸಮಾನವಾದುದು” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಟೀಕಿಸಿದ್ದರು.
“ಸನಾತನ ಧರ್ಮ ನಿರ್ಮೂಲನೆ ಮಾಡಬೇಕು” ಎಂದೂ ಉದಯನಿಧಿ ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಆಸ್ಪದವಾಗಿದ್ದು, ಬಿಜೆಪಿಯು ಡಿಎಂಕೆ ಹಾಗೂ ‘ಇಂಡಿಯಾ ಮೈತ್ರಿಕೂಟದ ವಿರುದ್ಧ ಟೀಕಿಸುತ್ತಿದೆ.