ಬಿಜೆಪಿಯಲ್ಲಿ ಪ್ರಭಾವಿ ನಾಯಕನಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎನ್ನುವುದು ಸರಿ. ಅದೇ ಕಾರಣಕ್ಕ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿ ನಿಂತಿದ್ದೂ ಸತ್ಯ. ಆದರೆ ಇದೀಗ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎನಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿ ಬದಿಗೆ ಸರಿಸಿದೆ. ಚುನಾವಣೆಯಲ್ಲಿ ಮತ ಗಳಿಸುವು ಉದ್ದೇಶದಿಂದ ಪ್ರಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಹೊರತು, ಮತದಾನದ ಬಳಿಕ ಯಡಿಯೂರಪ್ಪ ಅವರನ್ನು ಕೇಳುವವರೂ ಇರುವುದಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ. ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎನ್ನುವ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಾನು ನಿಮಗೆ ಬೇಡ ಎಂದರೆ ನಮಗೂ ನೀವು ಬೇಡ..!
ಬಿ.ಎಲ್ ಸಂತೋಷ್ ಹೇಳಿಕೆ ಬೆನ್ನಲ್ಲೇ ಕರ್ನಾಟಕ ಲಿಂಗಾಯತ ಮತ್ತು ವೀರಶೈವ ವೇದಿಕೆ ತಿರುಗೇಟು ನೀಡಿದ್ದು, ಬಿಜೆಪಿ ಪಕ್ಷಕ್ಕೆ ಲಿಂಗಾಯತರು ಅಗತ್ಯವಿಲ್ಲದಿದ್ದರೆ, ಲಿಂಗಾಯತರಿಗೂ ಬಿಜೆಪಿ ಬೇಕಾಗಿಲ್ಲ ಎನ್ನುವ ಒಕ್ಕಣೆಯೊಂದಿಗೆ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಳ್ಳಲಾಯ್ತು. ಅಧಿಕಾರ ಕಿತ್ತುಕೊಂಡಿದ್ದು ನಮ್ಮ ಕಣ್ಣ ಮುಂದಿದೆ. ಅಷ್ಟೇ ಅಲ್ಲದೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್, ಸೊಗಡು ಶಿವಣ್ಣ ಅವರನ್ನು ಪಕ್ಷದಿಂದ ಹೊರ ಹಾಕಿದ್ದನ್ನೂ ನಾವು ನೋಡಿದ್ದೇವೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಲಿಂಗಾಯತರು ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿದಾಗಲೂ ನಿರಾಕರಿಸಿರುವುದು ನಮಗೆ ತಿಳಿದಿದೆ. ಬಸವಣ್ಣನ ಅಭಿಮಾನಿಗಳು, ಲಿಂಗಾಯತ ಸಮುದಾಯದ ಜನರು ರಾಜ್ಯದ 224 ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎಂದು ಕರೆ ನೀಡಲಾಗಿದೆ. ಗೌರವಾಧ್ಯಕ್ಷ ವೀರಭದ್ರಯ್ಯ, ಅಧ್ಯಕ್ಷ ಕೃಪಾಶಂಕರ್ ಸೇರಿದಂತೆ ಎಂಟು ಜನರ ಸಹಿ ಕೂಡ ಇದೆ.

ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ ಎಂದು ಬಿಜೆಪಿ ದೂರು..!
ಬಿ.ಎಲ್ ಸಂತೋಷ್ ಹೇಳಿಕೆಯನ್ನೇ ನೀಡಿಲ್ಲ, ಆದರೂ ಹೇಳಿಕೆ ನೀಡಿದ್ದಾರೆ ಎನ್ನುವಂತೆ ಬಿಂಬಿಸಲಾಗ್ತಿದೆ ಎನ್ನುವುದು ಬಿಜೆಪಿಗರ ಆರೋಪ. ಆದರೆ ಮೈಸೂರು ಹಾಗು ಬೆಂಗಳೂರಿನ ಪ್ರಚಾರದ ವೇಳೆ ಮಾತನಾಡಿದ್ದಾರೆ ಅನ್ನೋ ಆರೋಪ ಇದೆ. ಲಿಂಗಾಯತ ಸಮುದಾಯದ ವಿರುದ್ಧ ನಾವು ಮಾತನಾಡಿಲ್ಲ ಎಂದು ಸಂತೋಷ್ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಆದರೆ ಬಿಜೆಪಿ ಕಾನೂನು ಘಟಕದ ಯಶವಂತ್ ನೀಡಿರುವ ದೂರಿನ ಹಿನ್ನಲೆಯಲ್ಲಿ ಬೈರಪ್ಪ ಹರೀಶ್ ಕುಮಾರ್, ಹೇಮಂತ್ ಕುಮಾರ್, ದಿನೇಶ್ ಅಮೀನ್ ಮಟ್ಟು, ಬಿಂದು ಗೌಡ, ದಿಲೀಪ್ ಗೌಡ ವಿರುದ್ಧ ದೂರು ದಾಖಲಾಗಿದೆ. ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಆಕ್ರೋಶ ತಂದ ಹೇಳಿಕೆ..!
ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ ಎನ್ನುವ ಸಂತೋಷ್ ಹೇಳಿಕೆ ಲಿಂಗಾಯತ ಸಮುದಾಯದಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಲಿಂಗಾಯತ ಸಿಎಂ ಭ್ರಷ್ಟ ಎನ್ನುವ ಮೂಲಕ ಸಿದ್ದರಾಮಯ್ಯ ಹೇಳಿಯನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಬಿ.ಎಲ್ ಸಂತೋಷ್ ಹೇಳಿಕೆ ತಿರುಗು ಬಾಣವಾಗಿದೆ. ಬಿಜೆಪಿಗೆ ಮತ ನೀಡುವಂತೆ ಕರೆ ಮಾಡುತ್ತಿದ್ದಂತೆ ಕರೆ ಸ್ವೀಕಾರ ಮಾಡಿ ಬಿಜೆಪಿಗೆ ಲಿಂಗಾಯತರು ಬೇಕಿಲ್ಲ ಎಂದ ಮೇಲೆ ನಮಗೂ ಬಿಜೆಪಿ ಬೇಕಿಲ್ಲ ಎಂದು ತಿರುಗೇಟು ನೀಡುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಆಗುತ್ತಿದ್ದ ಹಾಗೆ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿದ್ದು, ಚುನಾವಣೆ ವೇಳೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ವೇಳೆ ಲಿಂಗಾಯತ ಸಮುದಾಯ ಬಿಜೆಪಿಯನ್ನು ನಿರಾಕರಿಸಿ ಕಾಂಗ್ರೆಸ್, ಜೆಡಿಎಸ್ ಕಡೆಗೆ ಕಣ್ಣು ಹಾಯಿಸಿದರೆ ಬಿಜೆಪಿ ರಾಜಕೀಯ ಶಕ್ತಿ ಭಸ್ಮ ಆಗಲಿದೆ ಎನ್ನುವುದು ಮಾತ್ರ ಖಂಡಿತ.
ಕೃಷ್ಣಮಣಿ