ಗ್ರಾಮೀಣ ಅಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯ ಹಾಗು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಇಲಾಖೆಯ ಕಾರ್ಯವೈಖರಿ ಮತ್ತು ಪತ್ರದ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಅವರು ಪದೇ-ಪದೇ ನನ್ನನ್ನು ಕಡೆಗಣಿಸಿ, ಕಾನೂನು ಬಾಹಿರವಾಗಿ ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರಾಜ್ಯ ರಾಜ್ಯಪಾಲರ ಗಮನಕ್ಕೆ ತರುವುದರ ಜೊತೆಗೆ ಪ್ರಧಾನಿ ಮೋದಿ ಸೇರಿದಂತೆ ಪ್ರಬಲ ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಾಗಿತ್ತು.

ಇದು ನನ್ನ ಮತ್ತು ಯಡಿಯೂರಪ್ಪ ಅವರ ವೈಯಕ್ತಿಕ ವಿಚಾರ ಅಲ್ಲ , ಯಾರೇ ಆಗಲಿ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು. ಕರ್ನಾಟಕ ಟ್ರ್ಯಾಜಕ್ಷನ್ ಆಫ್ ಬ್ಯುಸಿನೆಸ್ ರೂಲ್ಸ್( 1977 )ನ್ನು ಮೀರಬಾರದು ಎಂಬುದು ನನ್ನ ಉದ್ದೇಶವಾಗಿದೆ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಹಣಕಾಸು ಇಲಾಖೆ ಮುಂಜೂರು ಮಾಡಿದ ಹಣವನ್ನು ಬಳಸಿಕೊಳ್ಳುವುದು ಇಲಾಖೆಯ ಹಕ್ಕು, ಇಲ್ಲಿ ಇಲಾಖೆಗೆ ಸಂಬಂಧಿಸಿದ ಹಣವನ್ನು ಮಂತ್ರಿಯ ಗಮನಕ್ಕೆ ಬರದೆ ನೇರವಾಗಿ ಶಾಸಕರಿಗೆ ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. 31 ಜಿಲ್ಲಾ ಪಂಚಾಯಿತಿಗಳಲ್ಲಿ , ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ದೊಡ್ಡ ಪ್ರಮಾಣದ ಹಣವನ್ನು ನನ್ನ ಗಮನಕ್ಕೆ ತರದೆ ಕೊಡಲಾಗಿದೆ. ಇಲ್ಲಿ ನೇರವಾಗಿ ಹಣ ಹಂಚಿಕೆಯಾಗಿರುವುದು ಕಾನೂನು ಉಲ್ಲಂಘನೆಯಾಗಿದೆ. ಇದನ್ನು ನಾನು ಆರ್ಥಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿಯವರಿಗೆ 65 ಕೋಟಿ ನೇರವಾಗಿ ಕೊಡಲಾಗಿದೆ. ಇಷ್ಟು ಮೊತ್ತದ ಹಣವನ್ನು ಒಂದೇ ಜಿಲ್ಲೆಗೆ ಕೊಡಲಾಗಿದೆ. ಇನ್ನುಳಿದ 29 ಜಿಲ್ಲೆಗಳಿಗೆ ಹಣವೇ ಹಂಚಿಕೆ ಆಗಿಲ್ಲ, ಸಿಎಂ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ನನಗೆ ತಿಳಿಯದೆ 65 ಕೋಟಿ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದ ನಂತರ ನನ್ನ ಗಮನಕ್ಕೆ ತರಲಾಗಿತ್ತು. ಆಗ ನಾನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಆದೇಶ ತಪ್ಪಾಗಿದೆ ಎಂದು ರದ್ದುಗೊಳಿಸಲಾಗಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಇನ್ನು 1299 ಕೋಟಿ ಕ್ರಿಯಾಯೋಜನೆಗಳ ಆದೇಶವನ್ನೂ ನಾನು ಹೊರಡಿಸಿಲ್ಲ, ಯಾಕೆಂದರೆ ಅದು ಕೂಡ ನನ್ನ ಗಮನಕ್ಕೆ ಬಂದಿರುವುದಿಲ್ಲ ಎಂದಿದ್ದಾರೆ. ಇಲ್ಲಿ ನಿಯಮಗಳ ಉಲ್ಲಂಘನೆಯಾಗಬಾರೆಂದು ನಾನು ಈ ಪತ್ರವನ್ನು ಬರೆದಿದ್ದೇನೆಯೇ ಹೊರತು ಬೇರೆ ಯಾವ ಉದ್ದೇಶದಿಂದ ಅಲ್ಲ ಎಂದಿದ್ದಾರೆ.

ನಾನು ಪಕ್ಷದ ನಿಯಮಗಳಿಗೆ ಬದ್ಧನಾಗಿದ್ದೇನೆ, ನನ್ನ ಈ ತೀರ್ಮಾನಕ್ಕೆ ಅನೇಕ ನಾಯಕರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗು ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇನೆ. ನಾನು ರೆಬೆಲ್ ಅಲ್ಲ ನಾನು ಧ್ವನಿ ಎತ್ತಿರುವುದು ನಿಯಮ ಪಾಲನೆ ಬಗ್ಗೆ ಮಾತ್ರ ಎಂದ ಅವರು ನೇರವಾಗಿ ಶಾಸಕರಿಗೆ ಅನುದಾನದ ಹಣ ನೀಡುವುದು ಸರಿಯಲ್ಲ, ಇಲಾಖೆಯ ಮೂಲಕ ಹಣ ಹಂಚಿಕೆಯಾಗಬೇಕೆಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಇಂದು ಸುದ್ದಿಗೋಷ್ಠಿ ನಡೆಸುವುದರ ಮೂಲಕ ಪತ್ರ ವಿಚಾರಕ್ಕೆ ಸಂಬಂಧಸಿದ ಗೊಂದಲಗಳಿಗೆ ತೆರೆಯೆಳೆದಿದ್ದಾರೆ.